ಕಾಸರಗೋಡು : ವಿವಿಧ ಬೇಡಿಕೆ ಮುಂದಿರಿಸಿ ಕೇರಳ ಹೋಟೆಲ್ ಏಂಡ್ ರೆಸ್ಟೊರೆಂಟ್ ಅಸೋಸಿಯೇಶನ್(ಕೆಎಚ್ಆರ್ಎ) ಕಾಸರಗೋಡು ಜಿಲ್ಲಾ ಸಮಿತಿಯ ಆಶ್ರಯದಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನಾ ಧರಣಿ ನಡೆಸಲಾಯಿತು.
ನಿತ್ಯೋಪಯೋಗಿ ಸಾಮಗ್ರಿ ಬೆಲೆಯೇರಿಕೆ ತಡೆಗಟ್ಟುವುದು ಹಾಗೂ ಪರವಾನಗಿ ಪಡೆದು ನಡೆಸಲಾಗುತ್ತಿರುವ ಹೋಟೆಲ್ ವಲಯಕ್ಕೆ ಸವಾಲು ತಂದೊಡ್ಡು ರೀತಿಯಲ್ಲಿ ಕಾರ್ಯಾಚರಿಸುವ ಸಮಾನಾಂತರ ಹೊಟೇಲ್, ತಟ್ಟುಕಡಗಳನ್ನು ನಿಯಂತ್ರಿಸವಂತೆ ಆಗ್ರಹಿಸಿ ಜಿಲ್ಲೆಯ ಹೋಟೆಲ್ ಮಾಲಿಕರು ತಮ್ಮ ಹೋಟೆಲ್ ಮುಚ್ಚುಗಡೆಗೊಳಿಸಿ ಪ್ರತಿಭಟನೆ ಹಮ್ಮಿಕೊಂಡಿದ್ದರು. ಕೆಎಚ್ಆರ್ಎ ರಾಜ್ಯ ಕೋಶಾಧಿಕಾರಿ ಮುಹಮ್ಮದ್ ಶರೀಫ್ ಧರಣಿ ಉದ್ಘಾಟಿಸಿದರು. ಸಂಘಟನೆ ಕಾಸರಗೋಡು ಜಿಲ್ಲಾಧ್ಯಕ್ಷ ನಾರಾಯಣ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಉಪಾಧ್ಯಕ್ಷ ಸುಗುಣನ್ ಮುಖ್ಯ ಭಾಷಣ ಮಾಡಿದರು.
ವರ್ತಕರ ಮತ್ತು ವಾಣಿಜ್ಯೋದ್ಯಮಿಗಳ ಸಮನ್ವಯ ಸಮಿತಿಯ ಜಿಲ್ಲಾಧ್ಯಕ್ಷ ಅಹಮದ್ ಶೆರೀಫ್, ಕೆಎಚ್ಆರ್ಎ ರಾಜ್ಯ ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಪುದುವಾಳ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.ಕೆಎಚ್ಆರ್ಎ ರಾಜ್ಯ ಕಾರ್ಯದರ್ಶಿ ಮುಹಮ್ಮದ್ ಗಜಾಲಿ, ರಕ್ಷಾಧಿಕಾರಿ ಅಬ್ದುಲ್ಲಾ ತಾಜ್ ಉಪಸ್ಥೀತರಿದ್ದರು. ರಾಜ್ಯ ಸಮಿತಿ ಸದಸ್ಯರಾದ ಸತ್ಯನಾಥನ್ ಇರಿಯಣ್ಣಿ, ರಫೀಕ್ ಬೈತ್ತಾನ್, ಅಜೇಶ್ ಧರಣಿ ನೇತೃತ್ವ ವಹಿಸಿದ್ದರು.
ಜಿಲ್ಲಾ ಕಾರ್ಯದರ್ಶಿ ಬಿಜು ಚುಳ್ಳಿಕ್ಕರ ಸ್ವಾಗತಿಸಿದರು. ಜಿಲ್ಲಾ ಕೋಶಾಧಿಕಾರಿ ರಘುವೀರ ಪೈ ವಂದಿಸಿದರು. ಜಿಲ್ಲೆಯ ಹೋಟೆಲ್ ಉದ್ಯಮಿಗಳು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.