ಕೊಲ್ಲಂ: ಪ್ರವಾಸೋಧ್ಯಮ ವಿನ್ಯಾಸ ನೀತಿಯ ಭಾಗವಾಗಿರುವ ಯೋಜನೆಗಳನ್ನು ರಾಜ್ಯಾದ್ಯಂತ ವಿಸ್ತರಿಸಿದರೆ ಪ್ರವಾಸೋದ್ಯಮ ಕ್ಷೇತ್ರಕ್ಕೆ ಅನುಕೂಲವಾಗಲಿದೆ ಎಂದು ಪ್ರವಾಸೋದ್ಯಮ ಮತ್ತು ಲೋಕೋಪಯೋಗಿ ಸಚಿವ ಪಿ.ಎ.ಮುಹಮ್ಮದ್ ರಿಯಾಝ್ ಹೇಳಿರುವರು.
ರಾಜ್ಯ ಸರ್ಕಾರದ ವಿನ್ಯಾಸ ನೀತಿಯ ಭಾಗವಾಗಿ ಕೊಲ್ಲಂ ಎಸ್ಎನ್ ಕಾಲೇಜು ಬಳಿ ರೈಲ್ವೆ ಮೇಲ್ಸೇತುವೆಯ ಕೆಳಭಾಗವನ್ನು ಸುಂದರಗೊಳಿಸುವ ಯೋಜನೆಯ ನಿರ್ಮಾಣ ಕಾಮಗಾರಿಯನ್ನು ಸಚಿವರು ಉದ್ಘಾಟಿಸಿ ಮಾತನಾಡಿದರು.
ಸೃಜನಾತ್ಮಕವಾಗಿ ಬಳಕೆಯಾಗದ ಸ್ಥಳಗಳನ್ನು ಜನರು ಸೇರಲು ಮತ್ತು ಮನರಂಜನೆಯಲ್ಲಿ ತೊಡಗಿಸಿಕೊಳ್ಳಲು ಸ್ಥಳಗಳಾಗಿ ಬಳಸುವುದರಿಂದ, ಇವು ಅಂತಿಮವಾಗಿ ಪ್ರವಾಸೋದ್ಯಮ ತಾಣಗಳಾಗಿ ಮಾರ್ಪಡುತ್ತವೆ. ಪ್ರವಾಸಿಗರನ್ನು ಆಕರ್ಷಿಸಲು ಇಂತಹ ಸ್ಥಳಗಳನ್ನು ಬದಲಾಯಿಸುವ ಗುರಿ ಹೊಂದಲಾಗಿದೆ ಎಂದು ಸಚಿವರು ಹೇಳಿದರು.
ಮೇಲ್ಸೇತುವೆಗಳ ಅಡಿಯಲ್ಲಿ ಬಳಕೆಯಾಗದ ಜಾಗವನ್ನು ಮಾದರಿ ಸಾರ್ವಜನಿಕ ಸ್ಥಳಗಳಾಗಿ ಪರಿವರ್ತಿಸುವ ವಿನ್ಯಾಸ ನೀತಿಯ ಭಾಗವಾಗಿ ಪ್ರವಾಸೋದ್ಯಮ ಇಲಾಖೆ ನೇತೃತ್ವದಲ್ಲಿ ಮೊದಲ ಯೋಜನೆಯು ಕೊಲ್ಲಂನಲ್ಲಿ ಪ್ರಾರಂಭವಾಗಿದೆ.
ಯೋಜನೆಯನ್ನು ಪೂರ್ಣಗೊಳಿಸಿ 2025ರಲ್ಲಿ ಕೊಲ್ಲಂಗೆ ಹೊಸ ವರ್ಷದ ಕೊಡುಗೆಯಾಗಿ ನೀಡಲಾಗುವುದು ಎಂದು ಸಚಿವರು ತಿಳಿಸಿದರು. ಬಳಕೆಯಾಗದ ಸ್ಥಳಗಳ ಸೃಜನಾತ್ಮಕ ಬಳಕೆಯು ರಾಜ್ಯ ಎದುರಿಸುತ್ತಿರುವ ತ್ಯಾಜ್ಯ ಮತ್ತು ವ್ಯಸನದ ಸಮಸ್ಯೆಗಳನ್ನು ಸಹ ಪರಿಹರಿಸುತ್ತದೆ. ಸೇತುವೆಗಳ ಕೆಳಭಾಗ ಸೇರಿದಂತೆ ಕಸ ಸುರಿಯುವ ಹಾಗೂ ಮಾದಕ ವಸ್ತುಗಳ ಸೇವನೆ ಸೇರಿದಂತೆ ಸಮಾಜಘಾತುಕ ಚಟುವಟಿಕೆಗಳ ತಾಣಗಳಾಗುತ್ತಿವೆ. ವಿನ್ಯಾಸ ನೀತಿಯ ಮೂಲಕ ಈ ಸ್ಥಳಗಳನ್ನು ಆಟದ ಮೈದಾನಗಳು ಮತ್ತು ಉದ್ಯಾನವನಗಳಾಗಿ ಪರಿವರ್ತಿಸಬಹುದು. ಇದರ ಸಾಧ್ಯತೆಯನ್ನು ರಾಜ್ಯದ ವಿವಿಧೆಡೆ ಬಳಸಿಕೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.
ಹಲವು ವಿನೂತನ ಯೋಜನೆಗಳನ್ನು ಜಾರಿಗೆ ತರುವ ಮೂಲಕ ರಾಜ್ಯದ ಪ್ರವಾಸೋದ್ಯಮ ಕ್ಷೇತ್ರವನ್ನು ಪುನರುಜ್ಜೀವನಗೊಳಿಸಲಾಗಿದೆ ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಎಂ. ನೌಶಾದ್ ಹೇಳಿದರು. ಕೊಲ್ಲಂ ರೈಲ್ವೆ ಮೇಲ್ಸೇತುವೆಯ ಕೆಳಭಾಗವನ್ನು ಸುಂದರಗೊಳಿಸುವ ಯೋಜನೆಯ ಪ್ರಕ್ರಿಯೆಗಳು ಪೂರ್ಣಗೊಂಡಿದ್ದು, ಯಾವುದೇ ವಿಳಂಬವಿಲ್ಲದೆ ಯೋಜನೆಯನ್ನು ಪೂರ್ಣಗೊಳಿಸಲಾಗುವುದು ಎಂದು ಅವರು ಹೇಳಿದರು.
ಮೇಯರ್ ಪ್ರಸನ್ನ ಅನ್ಸ್ರ್ಟ್, ಕೌನ್ಸಿಲರ್ಗಳಾದ ಎ.ಕೆ.ಸವಾದ್, ಸಜೀವ್ ಸೋಮನ್, ಕೆಟಿಐಎಲ್ ಅಧ್ಯಕ್ಷ ಎಸ್.ಕೆ.ಸಜೀಶ್, ಕೊಲ್ಲಂ ಜಿಲ್ಲಾಧಿಕಾರಿ ದೇವಿದಾಸ್ ಎನ್, ಪ್ರವಾಸೋದ್ಯಮ ಹೆಚ್ಚುವರಿ ನಿರ್ದೇಶಕ (ಜನರಲ್) ವಿಷ್ಣುರಾಜ್ ಪಿ, ಡಿಟಿಪಿಟಿಸಿ ಕಾರ್ಯದರ್ಶಿ ಜ್ಯೋತಿಶ್ ಕೇಶವ್, ಕೆಟಿಐಎಲ್ ನಿರ್ದೇಶಕ ಡಾ. ಮನೋಜ್ ಕುಮಾರ್ ಕಿಣಿ ಮೊದಲಾದವರು ಭಾಗವಹಿಸಿದ್ದರು.
ಕೊಲ್ಲಂ ರೈಲ್ವೆ ಮೇಲ್ಸೇತುವೆ ಅಡಿಯಲ್ಲಿ ಲೋಕೋಪಯೋಗಿ ಇಲಾಖೆ ಒಡೆತನದ ಸುಮಾರು 70 ಸೆಂಟ್ಸ್ ಭೂಮಿಯನ್ನು ಯೋಜನೆಗಾಗಿ ಗುರುತಿಸಲಾಗಿದೆ. ಪ್ರಸ್ತುತ ಬಳಕೆಯಾಗದ ಈ ಜಾಗವನ್ನು ಮಕ್ಕಳು, ಯುವಕರು ಮತ್ತು ವೃದ್ಧರು ಸಮಾನವಾಗಿ ಬಳಸಿಕೊಳ್ಳುವ ಗುರಿ ಹೊಂದಲಾಗಿದೆ. ಯೋಜನೆಯು ವಾಕಿಂಗ್ ಟ್ರ್ಯಾಕ್ಗಳು, ಬೀದಿ ಪೀಠೋಪಕರಣಗಳು, ಲಘು ಕಿಯೋಸ್ಕ್ಗಳು, ಬ್ಯಾಡ್ಮಿಂಟನ್-ಬ್ಯಾಸ್ಕೆಟ್ಬಾಲ್ ಅಂಕಣಗಳು, ಚೆಸ್ ಬ್ಲಾಕ್, ಸ್ಕೇಟಿಂಗ್ ಪ್ರದೇಶ, ತೆರೆದ ಜಿಮ್, ಯೋಗ-ಧ್ಯಾನ ವಲಯ ಇತ್ಯಾದಿಗಳನ್ನು ಒಳಗೊಂಡಿದೆ. ಅದರ ಪೂರ್ಣಗೊಂಡ ನಂತರ, ಕಾರ್ಯಾಚರಣೆಯಿಂದ ಉತ್ಪತ್ತಿಯಾಗುವ ಆದಾಯವನ್ನು ಭವಿಷ್ಯದ ನಿರ್ವಹಣೆಗಾಗಿ ಬಳಸಲಾಗುವುದು ಎಂದು ಯೋಜನೆಯು ಊಹಿಸುತ್ತದೆ.
ಈ ಯೋಜನೆಯನ್ನು ಕೇರಳ ಟೂರಿಸಂ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ (ಕೆಟಿಐಎಲ್) ವಿನ್ಯಾಸಗೊಳಿಸಿದೆ. ಕೆಟಿಐಎಲ್ ಪ್ರವಾಸೋದ್ಯಮ ಇಲಾಖೆ ಜಾರಿಗೊಳಿಸಿರುವ ಯೋಜನೆಯ ಉಸ್ತುವಾರಿ ನೋಡಿಕೊಳ್ಳುತ್ತಿದೆ. ಯೋಜನೆ ಅನುಷ್ಠಾನಕ್ಕೆ ರೂ.2 ಕೋಟಿ ಆಡಳಿತಾತ್ಮಕ ಮಂಜೂರಾತಿ ನೀಡಲಾಗಿದೆ. ಪ್ರವಾಸೋದ್ಯಮ ಇಲಾಖೆಯು ಯೋಜನೆಗೆ ಯೋಜನಾ ನಿರ್ವಹಣಾ ಸಲಹೆಗಾರರಾಗಿ ಹ್ಯಾಬಿಟಾಟ್ ಟೆಕ್ನಾಲಜಿ ಗ್ರೂಪ್ ಅನ್ನು ಆಯ್ಕೆ ಮಾಡಿದೆ. ಯೋಜನೆಯ ಅನುಷ್ಠಾನ ಮತ್ತು ನಿರ್ವಹಣೆಯನ್ನು ಜಿಲ್ಲಾ ಪ್ರವಾಸೋದ್ಯಮ ಉತ್ತೇಜನಾ ಮಂಡಳಿ, ಕೊಲ್ಲಂ ಮುನ್ಸಿಪಲ್ ಕಾಪೆರ್Çರೇಷನ್ ಮತ್ತು ಇತರ ಸಂಬಂಧಿತ ಇಲಾಖೆಗಳು ಜಂಟಿಯಾಗಿ ನಿರ್ವಹಿಸುತ್ತವೆ.