ಉಪ್ಪಳ: ಮಂಗಲ್ಪಾಡಿಪಂಚಾಯಿತಿಯ ಉಪ್ಪಳ ಮುಸೋಡಿಯಲ್ಲಿ ಸಮುದ್ರ ಕೊರೆತ ತೀವ್ರಗೊಮಡಿದ್ದು, ಒಂದು ಮನೆ ಹಾಗೂ ಹಲವು ತೆಂಗಿನ ಮರಗಳು ಸಮುದ್ರಪಾಲಾಗಿದೆ. ಇಲ್ಲಿನ ನಿವಾಸಿ, ಕೂಲಿ ಕಾರ್ಮಿಕ ಮೂಸಾ ಎಂಬವರ ಮನೆ ಈಗಾಗಲೇ ಪೂರ್ಣಪ್ರಮಾಣದಲ್ಲಿ ಧರಾಶಾಯಿಯಾಗಿದ್ದು, ಕಡಲಗರ್ಭ ಸೇರಿಕೊಂಡಿದೆ. ಈ ಪ್ರದೇಶದ ನಿವಾಸಿಗಳಾದ ಆಸಿಯಮ್ಮ, ತಾಹಿರ, ಆಳಿಕುಞÂ, ಮಹಮ್ಮದ್, ಇಸ್ಮಾಯಿಲ್ ಎಂಬವರ ಮನೆಗಳೂ ಅಪಾಯದ ಭೀತಿ ಎದುರಿಸುತ್ತಿದೆ. ಈ ಪರದೇಶದ ಹಲವು ತೆಂಗಿನ ಮರಗಳೂ ಸಮುದ್ರ ಪಾಲಾಗಿದೆ.
ಬಿರುಸಿನ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಂದಾಯಾಧಿಕಾರಿಗಳು ಹಾಗೂ ಮೀನುಗಾರಿಕಾ ಇಲಾಖೆ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಅಪಾಯ ಭೀತಿಯಲ್ಲಿರುವ ಇಲ್ಲಿನ ನಿವಾಸಿಗಳನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರಗೊಳ್ಳುವಂತೆ ನೋಟೀಸು ಜಾರಿಗೊಳಿಸಿದ್ದ ಹಿನ್ನೆಲೆಯಲ್ಲಿ ಇವರೆಲ್ಲರೂ ಸಂಬಂಧಿಕರ ಮನೆಗೆ ತೆರಳಿದ್ದಾರೆ. ಕೈರುನ್ನೀಸಾ, ಸಫಿಯಾ, ಕಮಲಾ, ಜಾನು, ನಫೀಸಾ ಎಂಬವರ ತೆಂಗಿನ ಮರಗಳೂ ಸಮುದ್ರಪಾಲಾಗಿದೆ. ಶಾರದಾನಗರ, ಮಣಿಮುಂಡ, ಶಿವಾಜಿನಗರ ಪ್ರದೇಶದ ನಿವಾಸಿಗಳು ಆತಂಕದಿಂದ ಜೀವನ ನಡೆಸುವಂತಾಗಿದೆ. ಈ ಪ್ರದೇಶದಲ್ಲಿ ಸುಸಜ್ಜಿತ ತಡೆಗೋಡೆ ನಿರ್ಮಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
ಮರ ಬಿದ್ದು ಮನೆಗೆ ಹಾನಿ:
ಬಿರುಸಿನ ಗಾಳಿಯಿಂದ ಕೂಡಿದ ಮಳೆಗೆ ಮರ ಬುಡಸಹಿತ ಕಳಚಿ ಬಿದ್ದ ಪರಿಣಾಮ ಮನೆಗೆ ಹಾನಿ ಸಂಭವಿಸಿದೆ. ಉಪ್ಪಳ ಸೋಂಕಾಲು ಕೊಡಂಗೆ ನಿವಾಸಿ ಅಬ್ಬು ಎಂಬವರ ಮನೆಗೆ ಹಾನಿಗೀಡಗಿದೆ. ಈ ಸಂದರ್ಭ ವಿದ್ಯುತ್ ಕಂಬ ವಾಲಿ ನಿಂತಿದ್ದು, ವಿದ್ಯುತ್ ತಂತಿ ರಸ್ತೆಗೆ ಬಿದ್ದಿದೆ. ಸ್ಥಳೀಯರು ನೀಡಿದ ಮಾಹಿತಿಯನ್ವಯ ಇಲಾಖೆ ಸಿಬ್ಬಂದಿ ಸಂಪರ್ಕ ವಿಚ್ಛೇದಿಸಿದ್ದಾರೆ. ಇದರಿಂದ ಈ ಪ್ರದೇಶದಲ್ಲಿ ವಿದ್ಯುತ್ ಸಂಪರ್ಕ ಅಸ್ತವ್ಯಸ್ತಗೊಂಡಿದ್ದು, ದುರಸ್ತಿ ನಡೆಸಿದ ನಂತರ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ.