ನವದೆಹಲಿ: ಬಡತನ ನಿರ್ಮೂಲನೆಗಾಗಿ ನಡೆಸುವ ಪ್ರಯತ್ನಗಳು ಕಾರ್ಯಕ್ರಮಗಳಿಗೆ ಮಾತ್ರ ಸೀಮಿತವಾಗದೇ, ವ್ಯಕ್ತಿಗತ ನೆಲೆಯಲ್ಲಿ ಕಾರ್ಯಗತಗೊಳಿಸುವುದು ಅಗತ್ಯ' ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಪ್ರತಿಪಾದಿಸಿದ್ದಾರೆ.
ನೀತಿ ಆಯೋಗದ 9ನೇ ಆಡಳಿತ ಮಂಡಳಿ ಸಭೆಯಲ್ಲಿ ಮಾತನಾಡಿದ ಅವರು, 'ವಿಕಸಿತ ಭಾರತ ನನಸಾಗಬೇಕಾದರೆ ಬಡತನವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವುದು ನಮ್ಮ ಗುರಿಯಾಗಬೇಕು.
ಸಭೆಯಲ್ಲಿ ಚರ್ಚೆಯಾದ ವಿಷಯಗಳ ಕುರಿತು, ಆಯೋಗದ ಸಿಇಒ ಬಿ.ವಿ.ಆರ್.ಸುಬ್ರಹ್ಮಣ್ಯಂ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
'10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪ್ರತಿನಿಧಿಗಳು ಆಯೋಗದ ಸಭೆಯಲ್ಲಿ ಪಾಲ್ಗೊಂಡಿರಲಿಲ್ಲ. ಇದು ಅವರಿಗಾದ ನಷ್ಟ' ಎಂದರು.
'ರಾಜ್ಯಗಳು ಹೂಡಿಕೆ ಸ್ನೇಹಿ ವಾತಾವರಣ ನಿರ್ಮಿಸಬೇಕು. ಈ ಸಂಬಂಧ 'ಹೂಡಿಕೆ ಸ್ನೇಹಿ ಸನ್ನದು' ಸಿದ್ಧಪಡಿಸುವಂತೆ ಪ್ರಧಾನಿಯವರು ಆಯೋಗಕ್ಕೆ ನಿರ್ದೇಶನ ನೀಡಿದರು' ಎಂದು ಸುಬ್ರಹ್ಮಣ್ಯಂ ತಿಳಿಸಿದರು.
'ವಿದೇಶಿ ನೇರ ಬಂಡವಾಳ ಆಕರ್ಷಿಸಲು ರಾಜ್ಯಗಳ ನಡುವೆ ಪೈಪೋಟಿ ಇರಬೇಕು. ಇದರಿಂದ ಎಲ್ಲ ರಾಜ್ಯಗಳಿಗೆ ಹೂಡಿಕೆಗಳು ಹರಿದುಬರಲಿವೆ ಎಂಬುದಾಗಿ ಪ್ರಧಾನಿ ಹೇಳಿದರು' ಎಂದು ಆಯೋಗದ ಉಪಾಧ್ಯಕ್ಷ ಸುಮನ್ ಬೆರಿ ಹೇಳಿದರು.
ಪ್ರಧಾನಿ ಮೋದಿ ಸೂಚನೆ/ಸಲಹೆಗಳು
* ಹೂಡಿಕೆ ಆಕರ್ಷಿಸಲು ಉತ್ತೇಜನಕಾರಿ ಕ್ರಮಗಳಿಗಿಂತ ಕಾನೂನು-ಸುವ್ಯವಸ್ಥೆ, ಉತ್ತಮ ಆಡಳಿತ ಹಾಗೂ ಮೂಲಸೌಕರ್ಯಗಳಿಗೆ ಮಹತ್ವ ಇದೆ
* ಜಲ ಸಂಪನ್ಮೂಲಗಳ ಪರಿಣಾಮಕಾರಿ ಬಳಕೆಗೆ ರಾಜ್ಯಗಳ ಮಟ್ಟದಲ್ಲಿ 'ನದಿಗಳ ಗ್ರಿಡ್' ಸ್ಥಾಪಿಸಬೇಕು
* ಅಭಿವೃದ್ಧಿಗೆ ಪೂರಕವಾದ ನೀತಿ ನಿರೂಪಣೆ ಹಾಗೂ ಆಡಳಿತಾತ್ಮಕ ಸುಧಾರಣೆಗೆ ರಾಜ್ಯಗಳು ಒತ್ತು ನೀಡಬೇಕು
* ಯುವ ಜನತೆ ತರಬೇತಿ ಮತ್ತು ಕೌಶಲ ವೃದ್ಧಿಗೆ ಗಮನ ಹರಿಸಬೇಕು. ಆ ಮೂಲಕ ಉದ್ಯೋಗ-ಸನ್ನದ್ಧರಾಗಬೇಕು
* ಕೃಷಿ ಉತ್ಪಾದನೆ ಹೆಚ್ಚಳ ಹಾಗೂ ವೈವಿಧ್ಯತೆಗೆ ಒತ್ತು ನೀಡಬೇಕು.
* ರೈತರಿಗೆ ತ್ವರಿತವಾಗಿ ಆದಾಯ ಖಾತ್ರಿಪಡಿಸುವ ನೈಸರ್ಗಿಕ ಕೃಷಿ, ಮಣ್ಣಿನ ಫಲವತ್ತತೆ ಹೆಚ್ಚಳದಂತಹ ಕ್ರಮಗಳಿಗೆ ರಾಜ್ಯಗಳು ಉತ್ತೇಜನ ನೀಡಬೇಕು