ತಿರುವನಂತಪುರಂ: ಕೇರಳದ ಸಾಲದ ಮಿತಿ ಕಡಮೆಯಾಗಲು ಹಿಂದಿನ ವರ್ಷಗಳಲ್ಲಿ ಕೆಐಎಫ್ಬಿ(ಕಿಪ್ಭಿ) ಗಾಗಿ ಪಿಂಚಣಿ ಕಂಪನಿ ಪಡೆದ ಸಾಲವೂ ಒಂದು ಕಾರಣ ಎಂದು ವಿತ್ತ ಸಚಿವ ಕೆ.ಎನ್.ಬಾಲಗೋಪಾಲ್ ಒಪ್ಪಿಕೊಂಡಿದ್ದಾರೆ.
ಹಿಂದಿನ ವರ್ಷಗಳಲ್ಲಿ ಕಿಫ್ಬಿ ಮತ್ತು ಪಿಂಚಣಿ ಕಂಪನಿ ಪಡೆದ ಸಾಲದಿಂದಾಗಿ ಈ ವರ್ಷ ಮತ್ತು ಮುಂದಿನ ವರ್ಷ ತಲಾ 5710 ಕೋಟಿ ರೂ. ಹೊರೆಯಾಗಲಿದೆ. ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗಾಗಿ ಭೂಸ್ವಾಧೀನದ ವೆಚ್ಚದ 25% ದಷ್ಟು ಎಂದರೆ, ಸುಮಾರು 6000 ಕೋಟಿ ರೂಪಾಯಿಗಳನ್ನು ಪಾವತಿಸಬೇಕಾದ ಏಕೈಕ ರಾಜ್ಯ ಕೇರಳವಾಗಿದೆ. ಇದು ಕೇರಳದ ಸಾಲದ ಮಿತಿಯನ್ನು ಕಡಮೆ ಮಾಡಿದೆ. ಇದಕ್ಕೆ ಸಮನಾದ ಮೊತ್ತವನ್ನು ಈ ವರ್ಷ ಬೇಷರತ್ತಾಗಿ ಸಾಲ ಪಡೆಯಲು ಅವಕಾಶ ನೀಡುವಂತೆಯೂ ಕೇಂದ್ರಕ್ಕೆ ಮನವಿ ಮಾಡಲಾಗಿದೆ.
24,000 ಕೋಟಿ ವಿಶೇಷ ಹಣಕಾಸು ಪ್ಯಾಕೇಜ್ಗಾಗಿ ಕೇರಳದ ಪ್ರಮುಖ ಬೇಡಿಕೆಯನ್ನು ಕೇಂದ್ರ ಬಜೆಟ್ ಪರಿಗಣಿಸುವ ನಿರೀಕ್ಷೆಯಿದೆ ಎಂದು ಹಣಕಾಸು ಸಚಿವರು ಹೇಳಿದರು.
ಕೇಂದ್ರ ಹಣಕಾಸು ಸಚಿವರು ಕರೆದಿದ್ದ ಬಜೆಟ್ ಪೂರ್ವ ಚರ್ಚೆಯಲ್ಲಿ ಕೇರಳದ ಬೇಡಿಕೆಗಳನ್ನು ಮುಂದಿಡಲಾಗಿದೆ. ಬಳಿಕ ಕೇಂದ್ರ ಹಣಕಾಸು ಸಚಿವರನ್ನು ನೇರವಾಗಿ ಭೇಟಿ ಮಾಡಿ ಕೇರಳದ ಕೆಲವು ವಿಶೇಷ ಅಗತ್ಯಗಳ ಬಗ್ಗೆ ಮನವರಿಕೆ ಮಾಡಿಕೊಟ್ಟರು.
2022-23 ಮತ್ತು 2023-24ರ ಸಾಲದ ಮಿತಿಯಲ್ಲಿನ ಕಡಿತದಿಂದ ಉಂಟಾದ ನಷ್ಟವನ್ನು ಸರಿದೂಗಿಸಲು ಪ್ಯಾಕೇಜ್ ಅನ್ನು ಕೋರಲಾಗಿದೆ. ಪ್ರಸ್ತುತ ಸಾಲದ ಮಿತಿ ಜಿ.ಎಸ್.ಡಿ.ಪಿ ಯ ಮೂರು ಪ್ರತಿಶತ. ಮತ್ತು ವಿದ್ಯುತ್ ಕ್ಷೇತ್ರಕ್ಕೆ ಸಂಬಂಧಿಸಿದಂತೆ 3.5 ಪ್ರತಿಶತ ಮತ್ತು ಳಿ ಪ್ರತಿಶತದಷ್ಟು ಸಾಲ ಪಡೆಯುವ ಹಕ್ಕಿದೆ. ಆದರೆ 2022-23ರಲ್ಲಿ ಶೇ.2.44 ಮಾತ್ರ ತೆಗೆದುಕೊಳ್ಳಲು ಅವಕಾಶವಿತ್ತು. ಕಳೆದ ವರ್ಷ ಶೇ.2.88ರಷ್ಟಿತ್ತು. 14 ನೇ ಹಣಕಾಸು ಆಯೋಗಕ್ಕೆ ಹೋಲಿಸಿದರೆ ಪ್ರಸ್ತುತ 15 ನೇ ಹಣಕಾಸು ಆಯೋಗದ ಅವಧಿಯಲ್ಲಿ ರಾಜ್ಯವು ವಾರ್ಷಿಕವಾಗಿ ಕೇಂದ್ರ ತೆರಿಗೆ ಹಂಚಿಕೆಯಲ್ಲಿ ಕನಿಷ್ಠ 15,000 ಕೋಟಿ ರೂಪಾಯಿ ಕಡಿತವನ್ನು ಎದುರಿಸುತ್ತಿದೆ. ಕಂದಾಯ ಕೊರತೆ ಅನುದಾನ ಮತ್ತು ಜಿಎಸ್ಟಿ ಪರಿಹಾರವನ್ನು ಸ್ಥಗಿತಗೊಳಿಸುವುದು ಸೇರಿದಂತೆ ರಾಜ್ಯವು ಭಾರಿ ಆದಾಯ ಕೊರತೆಯನ್ನು ಎದುರಿಸುತ್ತಿದೆ.
ವಿಝಿಂಜಂ ಅಂತರಾಷ್ಟ್ರೀಯ ಬಂದರು ನಿರ್ಮಾಣ ಯೋಜನೆಯ ಮುಂದುವರಿಕೆಗಾಗಿ 5,000 ಕೋಟಿ ರೂಪಾಯಿಗಳ ವಿಶೇಷ ಆರ್ಥಿಕ ಪ್ಯಾಕೇಜ್ ಅನ್ನು ಕೋರಲಾಗಿದೆ.