HEALTH TIPS

ಎಡನೀರು ಮಠದ ಗುರುಭವನ ಉದ್ಘಾಟನೆ: ಮಠ-ಮಂದಿರಗಳಿಗೆ ನೀಡುವ ಕೊಡುಗೆ, ಸಾಮಾಜಿಕ ಸುಧಾರಣೆಗೆ ಭದ್ರ ಬುನಾದಿ ಡಾ.ಡಿ.ವೀರೇಂದ್ರ ಹೆಗ್ಗಡೆ

                ಬದಿಯಡ್ಕ: ಸಮಾಜದ ಉನ್ನತಿಗಾಗಿ ಶ್ರಮಿಸುತ್ತಿರುವ ಮಠ-ಮಂದಿರಗಳಿಗೆ ನೀಡುವ ಕೊಡುಗೆ, ಸಾಮಾಜಿಕ ಸುಧಾರಣೆಗೆ ಭದ್ರ ಬುನಾದಿಯಾಗಿರುವುದಾಗಿ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಪೂಜ್ಯ ಡಾ. ವಿರೇಂದ್ರ ಹೆಗ್ಗಡೆ ತಿಳಿಸಿದ್ದಾರೆ.

                 ಅವರು ಶನಿವಾರ ಎಡನೀರು ಮಠದಲ್ಲಿ ಪರಮಪೂಜ್ಯ ಶ್ರೀ ಕೇಶವಾನಂದ ಭಾರತೀ ಶ್ರೀಪಾದಂಗಳವರ ಪುಣ್ಯಸ್ಮರಣೆಯಲ್ಲಿ ಶ್ರೀ ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ ಸಂಪಾಜೆ ಇವರ ಸೇವಾರೂಪದಲ್ಲಿ ಶ್ರೀಮಠಕ್ಕೆ ಸಮರ್ಪಿಸಲ್ಪಟ್ಟ ಗುರುಭವನವನ್ನು ದೀಪಬೆಳಗಿಸಿ ಉದ್ಘಾಟಿಸಿ  ಮಾತನಾಡಿದರು. 


              ಕಲೆಗಳಿಗೆ ಕೇಂದ್ರಸ್ಥಾನವಾಗಿರುವ ಎಡನೀರುಮಠದಲ್ಲಿ ಅತ್ಯಾಧುನಿಕ ಶೈಲಿಯಲ್ಲಿ ನೂತನ ಗುರುಭವನವು ನಿರ್ಮಾಣವಾಗಿದೆ. ವೈದಿಕ, ಧಾರ್ಮಿಕ ಮತ್ತು ವ್ಯಾವಹಾರಿಕ ವಿಷಯಗಳಿಗೆ ಈ ಮಠವು ಕೇಂದ್ರ ಸ್ಥಾನವಾಗಿದೆ. ಶ್ರೀಮಠದಲ್ಲಿ ನಡೆಯುತ್ತಿರುವ ಸಮಾಜಮುಖೀ ಕಾರ್ಯಗಳಿಂದ ಭಕ್ತಾದಿಗಳನ್ನು ತನ್ನೆಡೆಗೆ ಸೆಳೆಯಲು ಕಾರಣವಾಗಿದೆ ಎಂದು ತಿಳಿಸಿದರು. ಕಾಸರಗೋಡು ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್,  ಶಾಸಕ ಎನ್.ಎ.ನೆಲ್ಲಿಕುನ್ನು ಉಪಸ್ಥಿತರಿದ್ದರು. ಶ್ರೀಗುರುಭವನದ ದಾನಿ ಸಂಪಾಜೆ ಡಾ| ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನದ ಡಾ. ಟಿ. ಶ್ಯಾಮ ಭಟ್, ವಾಸ್ತುನಿರ್ದೇಶಕ ಶ್ರೀನಾಥ್ ಸುಳ್ಯ, ಸುಧೀರ್ ನಾಯಕ್ ಪುತ್ತೂರು, ಎಡನೀರು ಮಠದ ಗಿರಿಧರ ಭಟ್ ಅವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು. 


          ಪರಮಪೂಜ್ಯ ಶ್ರೀ ಸಚ್ಚಿದಾನಂದ ಭಾರತೀ ಶ್ರೀಗಳು ಆಶೀರ್ವಚನ ನೀಡಿ ಶ್ರೀಕ್ಷೇತ್ರ ಧರ್ಮಸ್ಥಳಕ್ಕೂ ಎಡನೀರಿಗೂ ಅವಿನಾಭಾವ ಸಂಬಂಧವಿದೆ. ಹೆಗ್ಗಡೆಯವರ ದೂರದೃಷ್ಟಿಯ ಮೂಲಕ ಧರ್ಮಸ್ಥಳ ಕ್ಷೇತ್ರವು ಬೆಳೆದುಬಂದಂತೆ ಉಳಿದ ಕ್ಷೇತ್ರಗಳ ಪುರೋಗತಿಗೂ ಸಹಕಾರಿಯಾಗಿದ್ದಾರೆ. ಶ್ರೀಮಠದೊಂದಿಗೆ ನಿಕಟ ಸಂಪರ್ಕವನ್ನಿಟ್ಟುಕೊಂಡು ಗುರುಸೇವೆಯಲ್ಲಿ ತೊಡಗಿಸಿಕೊಂಡಿರುವ ಟಿ.ಶ್ಯಾಮ ಭಟ್ಟರ ಮೂಲಕ ಜನಸೇವೆ ನಿರಂತರ ನಡೆಯಲಿ ಎಂದು ತಿಳಿಸಿದರು.  ವೈದಿಕ ಪ್ರಾರ್ಥನೆ ಹಾಗೂ ಸಂಗೀತ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭಿಸಲಾಯಿತು. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಎಡನೀರು ವಲಯ ಹಾಗೂ ಜನಜಾಗೃತಿ ವೇದಿಕೆ ಕಾಸರಗೋಡು ತಾಲೂಕು ಇದರ ವತಿಯಿಂದ ಪೂಜ್ಯ ಹೆಗ್ಗಡೆಯವರನ್ನು ಗೌರವಿಸಲಾಯಿತು. ಬಲರಾಮ ಆಚಾರ್ಯ, ಎಂ. ನಾರಾಯಣ ಭಟ್, ವಿಜಯಕುಮಾರ್ ಎಡನೀರು, ರಾಘವೇಂದ್ರ ಕೆದಿಲಾಯ ಎಡನೀರು, ರಾಮಪ್ರಸಾದ್ ಕಾಸರಗೋಡು ಸಹಕರಿಸಿದರು. ಗುರುಭವನದ ಪ್ರಾಯೋಜಕರಾದ ಸಂಪಾಜೆ ಡಾ. ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನದ ಟಿ.ಶ್ಯಾಮ ಭಟ್ ಐಎಎಸ್ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ದಾಮೋದರ ಶರ್ಮ ನಿರೂಪಿಸಿದರು ಶ್ರೀಮಠದ ವ್ಯವಸ್ಥಾಪಕ ರಾಜೇಂದ್ರ ಕಲ್ಲೂರಾಯ ವಂದಿಸಿದರು. 



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries