HEALTH TIPS

ಗೃಹಿಣೆಯರ ಆರ್ಥಿಕ ಸಬಲೀಕರಣ ಸದೃಢ ಸಮಾಜ ನಿರ್ಮಾಣಕ್ಕೆ ದಾರಿ: ಬಿ.ವಿ.ನಾಗರತ್ನ

       ವದೆಹಲಿ: 'ಭಾರತದಲ್ಲಿ ವಿವಾಹಿತ ಮಹಿಳೆಯರ ಅರ್ಥಿಕ ಸಬಲೀಕರಣ ಮತ್ತು ಅವರಿಗೆ ಆರ್ಥಿಕ ಸ್ಥಿರತೆಯನ್ನು ಒದಗಿಸುವ ಅಗತ್ಯವಿದೆ' ಎಂದು ಸುಪ್ರೀಂ ಕೋರ್ಟ್ ಬುಧವಾರ ಒತ್ತಿಹೇಳಿದೆ.

          ವಿಚ್ಛೇದನ ಪಡೆದ ಮುಸ್ಲಿಂ ಮಹಿಳೆಯರಿಗೆ ಕಾನೂನು ಪ್ರಕಾರ ಜೀವನಾಂಶ ನೀಡುವ ಕುರಿತ ಪ್ರಕರಣದ ತೀರ್ಪಿನಲ್ಲಿ ಕೋರ್ಟ್‌ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.

            ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರು ತಮ್ಮ ತೀರ್ಪಿನಲ್ಲಿ, 'ಕುಟುಂಬದ ಅರ್ಥವ್ಯವಸ್ಥೆ ಉತ್ತಮಪಡಿಸಲು ಹಾಗೂ ದೇಶದ ಆರ್ಥಿಕತೆಗೆ ದುಡಿಯುತ್ತಿರುವ ಗೃಹಿಣಿಯರ ಸೇವೆ ಮತ್ತು ತ್ಯಾಗವನ್ನು ಗುರುತಿಸಲು ಬದಲಾವಣೆಯ ತುರ್ತು ಅಗತ್ಯವಿದೆ' ಎಂದು ಪ್ರತಿಪಾದಿಸಿದರು.

ಸ್ವತಂತ್ರವಾದ ಆದಾಯದ ಮೂಲವಿಲ್ಲದ ಹಾಗೂ ಹಣಕಾಸು ಪಡೆಯುವ ಸಹಜ ಅವಕಾಶವಿಲ್ಲದ, ಮುಖ್ಯವಾಗಿ ವೈಯಕ್ತಿಕವಾದ ಖರ್ಚು, ವೆಚ್ಚವನ್ನೂ ನಿಭಾಯಿಸಲು ಆಗದ ಗೃಹಿಣಿಯರ ದುರ್ಬಲ ಸ್ಥಿತಿಯನ್ನು ಅವರು ಉಲ್ಲೇಖಿಸಿದರು.

             ಸ್ವತಂತ್ರ ಆದಾಯವಿಲ್ಲದ ಪತ್ನಿಯನ್ನು ಆರ್ಥಿಕವಾಗಿ ಸಬಲೀಕರಣಗೊಳಿಸಬೇಕು ಎಂಬ ವಾಸ್ತವ ಕುರಿತ ಪ್ರಜ್ಞಾವಂತಿಕೆಯನ್ನು ಭಾರತದ ವಿವಾಹಿತ ಪುರುಷರೂ ಹೊಂದಬೇಕು. ಆರ್ಥಿಕ ಸಬಲೀಕರಣ ಗೃಹಿಣಿಯರಿಗೆ ಭದ್ರತೆ ನೀಡಲಿದೆ ಎಂದು ಹೇಳಿದರು.

           ಜಂಟಿ ಬ್ಯಾಂಕ್‌ ಖಾತೆ ಹೊಂದುವುದು ಅಥವಾ ಜಂಟಿಯಾಗಿ ಎಟಿಎಂ ಕಾರ್ಡ್‌ಗಳ ನಿರ್ವಹಣೆ ಮೂಲಕ ಈಗಾಗಲೇ ಇಂಥ ಪ್ರಜ್ಞಾವಂತಿಕೆ ಪ್ರದರ್ಶಿಸುತ್ತಿರುವ ಜವಾಬ್ದಾರಿಯುತ ವಿವಾಹಿತ ಪುರುಷರ ನಡೆ ಗೌರವಿಸುವುದು ಅಗತ್ಯ ಎಂದು ಅವರು ಉಲ್ಲೇಖಿಸಿದರು.

         ' ಆರ್ಥಿಕ ಭದ್ರತೆ' ಮತ್ತು 'ವಾಸ್ತವ್ಯದ ಭದ್ರತೆ' ಎರಡೂ ಭಾರತೀಯ ಮಹಿಳೆಯರಿಗೆ ರಕ್ಷಣೆಯ ಭಾವ ನೀಡಲಿದೆ. ಗೃಹಿಣಿ ಎಂದು ಗುರುತಿಸುವ ಮಹಿಳೆಯನ್ನು ನಿಜವಾದ ಅರ್ಥದಲ್ಲಿ ಸಬಲೀಕರಣಗೊಳಿಸಲಿದೆ. ಭಾರತೀಯ ಸಮಾಜದ ಮೂಲ ಘಟಕವಾದ ಕುಟುಂಬಗಳಿಗೆ ಇಂಥ ಮಹಿಳೆಯರೇ ಬೆನ್ನೆಲುಬು. ಇದನ್ನು ಸದೃಢಗೊಳಿಸುವುದು ಅಗತ್ಯ ಎಂದರು.

            ಭಾವನಾತ್ಮಕವಾದ ಸಂಬಂಧವಿರುವ, ಸ್ಥಿರತೆ ಹೊಂದಿರುವ ಕುಟುಂಬಗಳು ಈ ಸಮಾಜಕ್ಕೂ ಸ್ಥಿರತೆಯನ್ನು ಒದಗಿಸಲಿವೆ. ಇಂಥ ಕುಟುಂಬಗಳಲ್ಲೇ ಜೀವನದ ಅಮೂಲ್ಯ ಮೌಲ್ಯಗಳನ್ನು ಕಲಿಸಲಾಗುತ್ತದೆ ಮತ್ತು ಬೆಳೆಸಲಾಗುತ್ತದೆ ಎಂದೂ ತೀರ್ಪಿನಲ್ಲಿ ಪ್ರಸ್ತಾಪಿಸಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries