ಕಾಸರಗೋಡು: ಕರ್ಕಾಟಕ ಮಾಸದಲ್ಲಿ ವಾತಸಂಬಂಧಿ ಕಾಯಿಲೆಗಳಿಂದ ಬಳಲುವ ವಯೋವೃದ್ಧರಿಗಾಗಿ ಪಡನ್ನ ಗ್ರಾಮ ಪಂಚಾಯಿತಿಯ ಒಂಬತ್ತನೇ ವಾರ್ಡಿನಲ್ಲಿ ಪರಂಪರಾಗತ ಆಯುರ್ವೇದ, ನಾಟಿ ವೈದ್ಯರಿಂದ ತಯಾರಿಸಿದ ನೋವಿನ ತೈಲ ಉಚಿತವಾಗಿ ವಿತರಿಸುವ ಕಾರ್ಯ ಎರಡನೇ ವರ್ಷವೂ ನಡೆಯುತ್ತಿದೆ.
ಗ್ರಾಮ ಪಂಚಾಯಿತಿಯ ಒಂಬತ್ತನೇ ವಾರ್ಡು ಸದಸ್ಯ, ಚಲನಚಿತ್ರ ನಟ ಕುಞÂಕೃಷ್ಣನ್ ಮಾಸ್ಟರ್ ಅವರ ನೇತೃತ್ವದಲ್ಲಿ ಈ ತೈಲ ವಿತರಣೆ ನಡೆಯುತ್ತಿದೆ. ಕೈಕಾಲಿನ ನೋವು, ಕೈಕಾಲು ಜೋಮು ಹಿಡಿಯುವಿಕೆ, ಉಳುಕು, ಪಾದದ ನೋವುಗಳಿಗೆ ಆಯುರ್ವೇದ ವೈದ್ಯರು ಸಾಂಪ್ರದಾಯಿಕವಾಗಿ ತಯಾರಿಸುವ ಚುಕಾಡಿ ಎಣ್ಣೆಯನ್ನು ಸ್ಥಳೀಯ ವೈಶಿಷ್ಟ್ಯತೆ ಮತ್ತು ಸಾಂಪ್ರದಾಯಿಕ ಸಿದ್ಧಿಯೊಂದಿಗೆ ತಯಾರಿಸಲಾಗುತ್ತದೆ. ಬಿಳಿಎಕ್ಕ, ಹುಣಸೆ ಎಲೆ, ವಿವಿಧ ಬೇರುಗಳು, ಬೆಳ್ಳುಳ್ಳಿ, ಸಾಸಿವೆ, ಸಾಮ್ರಾಣಿ ಮೊಸರು, ಎಳ್ಳೆಣ್ಣೆ ಸೇರಿದಂತೆ ವಿವಿಧ ಮೂಲಿಕೆಗಳನ್ನು ಬೆರೆಸಿ ತೈಲ ತಯಾರಿಸಲಾಗುತ್ತದೆ.
ತ್ರಿಕರಿಪುರದ ಕೆ.ವಿ. ಕೃಷ್ಣಪ್ರಸಾದ್ ವೈದ್ಯರು ನೇತೃತ್ವದಲ್ಕಲಿ ಈ ಔಷಧ ತಯಾರಿಸಲಾಗುತ್ತಿದ್ದು, ಸತತ ಎರಡನೇ ವರ್ಷವೂ ತೈಲದ ಉಚಿತ ವಿತರಣೆ ನಡೆಯಲಿದೆ. ಇದಕ್ಕೆ ಬೇಕಾಗುವ ಎಲ್ಲ ಪದಾರ್ಥವನ್ನು ಹಿಂದಿನ ದಿನವೇ ಕಾರ್ಮಿಕರ ಗುಂಪು ಸಂಗ್ರಹಿಸಿ ಯಂತ್ರಗಳ ಸಹಾಯವಿಲ್ಲದೇ ಒನಕೆ, ವರಳೆ ಬಳಸಿ ಸಾಂಪ್ರದಾಯಿಕ ರೀತಿಯಲ್ಲಿ ಔಷಧೀಯ ಪದಾರ್ಥವನ್ನು ಕುಟ್ಟಿ ಸಿದ್ಧಪಡಿಸಿಕೊಳ್ಳುತ್ತಾರೆ. ನಂತರ ಆಯುರ್ವೇದ ವೈದ್ಯರ ಉಪಸ್ಥಿತಿಯಲ್ಲಿ ಬೇಕಾದ ಪ್ರಮಾಣದಲ್ಲಿ ಎಲ್ಲ ಔಷಧೀಯ ಪದಾರ್ಥಗಳನ್ನು ಸೇರಿಸಿ ತೈಲ ತಯಾರಿಸುತ್ತಾರೆ.