ಕಾಸರಗೋಡು: ಜಿಲ್ಲೆಯಲ್ಲಿ ಸಮುದ್ರ ಕೊರೆತ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕರಾವಳಿಯ ರಕ್ಷಣೆ ಹಾಗೂ ಕರಾವಳಿ ನಿವಾಸಿಗಳ ಭಯ ಹೋಗಲಾಡಿಸುವ ನಿಟ್ಟಿನಲ್ಲಿ ಅಗತ್ಯ ಯೋಜನೆ ತಯಾರಿಸುವ ಬಗ್ಗೆ ಜಿಲ್ಲಾ ಅಭಿವೃದ್ಧಿ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಯಿತು. ಕಾಸರಗೋಡು ಜಿಲ್ಲಾಧಿಕಾರಿ ಸಭಾಂಗಣದಲ್ಲಿ ನಡೆದ ಸಬೆಯಲ್ಲಿ ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ಅಧ್ಯಕ್ಷತೆ ವಹಿಸಿದ್ದರು.
ಪಳ್ಳಿಕ್ಕೆರೆ, ತೃಕ್ಕನ್ನಾಡ್, ಉದುಮ ಸಮುದ್ರ ಕೊರೆತಕ್ಕೆ ತುತ್ತಾಗುವ ಪ್ರದೇಶಗಳಲ್ಲಿ ಜಿಯೋ ಬ್ಯಾಗ್ಗಳನ್ನು ಬಳಸಿ ತಾತ್ಕಾಲಿಕವಾಗಿ ಕಡಲ ಗೋಡೆ ನಿರ್ಮಿಸಬೇಕು. ಜನ್ಮ ಕಡಪ್ಪುರದಲ್ಲಿ ಕಡಲ್ಕೊರೆತ ತೀವ್ರವಾಗಿರುವುದಾಗಿ ಶಾಸಕ ಸಿ.ಎಚ್.ಕುಂಜಂಬು ತಿಳಿಸಿದರು. ಕಾವುಗೋಳಿ, ಕೀಯೂರು, ಪೆರಿಂಗಡಿ, ನಾಂಗಿ, ಅಯಿತ್ತಲ ಕರಾವಳಿ ಪ್ರದೇಶ ಸಮುದ್ರದ ಕೊರೆತದಿಂದ ಅತಿಯಾದ ಹಾನಿ ಸಂಭವಿಸಿದೆ. ಮೌಲ್ಯದ ಸಮುದ್ರ ತಡೆಗೋಡೆ ನಿರ್ಮಾಣ ಕಾಮಗಾರಿಗೆ ನೀರಾವರಿ ಇಲಾಖೆಯ ಕಾರ್ಯಪಾಲಕ ಅಭಿಯಂತರರು ಸಭೆಯಲ್ಲಿ ಮಾಹಿತಿ ನೀಡಿದರು. ಕಾವುಗೋಲಿ, ಕೀಯೂರು ಪ್ರದೇಶದಲ್ಲಿ ತಡೆಗೋಡೆ ನಿಮನಕ್ಕಾಗಿ ೫೦ಲಕ್ಷ ರೂ. ಮೊತ್ತದ ಯೋಜನೆಗೆ ಟೆಂಡರ್ ಪ್ರಕ್ರಿಯೆ ಜಾರಿಯಲ್ಲಿರುವುದಾಗಿ ನೀರಾವರಿಇಲಾಖೆ ಅಭಿಯಂತರರು ಸಭೆಗೆ ಮಾಹಿತಿ ನೀಡಿದರು. ಜಿಲ್ಲೆಯ ಕರಾವಳಿ ಪ್ರದೇಶಗಳಿಗೆ ನೀರಾವರಿ ಇಲಾಖೆ ಅಧಿಕಾರಿಗಳ ತಂಡ ಭೇಟಿ ನೀಡಿ ಕಡಲ್ಕೊರೆತದಿಂದ ಉಂಟಾಗಿರುವ ಸಮಸ್ಯೆಗಳನ್ನು ಪರಿಶೀಲಿಸಿ ವರದಿ ಸಲ್ಲಿಸುವುದರ ಜತೆಗೆ ಕಡಲ್ಕೊರೆತ ತಡೆಯಲು ಶಾಶ್ವತ ವ್ಯವಸ್ಥೆ ಕಲ್ಪಿಸಲು ಅಂದಾಜು ಪಟ್ಟಿ ತಯಾರಿಸಬೇಕು ಎಂದು ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ಸೂಚಿಸಿದರು.
ಈ ಸಂದರ್ಭ ಜಿಲ್ಲೆಯ ವಿದ್ಯುತ್, ರಸ್ತೆ, ಆರೋಗ್ಯ, ಶಿಕ್ಷಣ ಸೇರಿದಂತೆ ವಿವಿಧ ಇಲಾಖೆಗಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸಮಾಲೋಚನೆ ನಡೆಸಲಯಿತು. ಶಾಸಕರಾದ ಇ. ಚಂದ್ರಶೇಖರನ್, ಎನ್.ಎ ನೆಲ್ಲಿಕುನ್ನು, ಕಾಸರಗೋಡು ನಗರಸಭಾ ಅಧ್ಯಕ್ಷ ಅಬ್ಬಾಸ್ ಬೇಗಂ ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಅವರ ಪ್ರತಿನಿಧಿ ಸಾಜಿದ್ ಮವ್ವಲ್, ಅಪರ ಜಿಲ್ಲಾಧಿಕಾರಿ ಸುಫಿಯಾನ್ ಅಹಮದ್, ಎಡಿಎಂ ಕೆ.ವಿ.ಶ್ರುತಿ, ಜಿಲ್ಲಾ ಯೋಜನಾಧಿಕಾರಿ ಟಿ.ರಾಜೇಶ್ ಉಪಸ್ಥಿತರಿದ್ದರು.