ನವದೆಹಲಿ: ನೀಟ್ ಹಗರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನು ಕೇಂದ್ರದ ತನಿಖೆ ಸಂಸ್ಥೆಗಳು ಏಕೆ ಬಂಧಿಸುತ್ತಿಲ್ಲ ಎಂದು ತೃಣಮೂಲ ಕಾಂಗ್ರೆಸ್ ನಾಯಕ ಅಭಿಷೇಕ್ ಬ್ಯಾನರ್ಜಿ ಪ್ರಶ್ನಿಸಿದ್ದಾರೆ.
ನವದೆಹಲಿ: ನೀಟ್ ಹಗರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನು ಕೇಂದ್ರದ ತನಿಖೆ ಸಂಸ್ಥೆಗಳು ಏಕೆ ಬಂಧಿಸುತ್ತಿಲ್ಲ ಎಂದು ತೃಣಮೂಲ ಕಾಂಗ್ರೆಸ್ ನಾಯಕ ಅಭಿಷೇಕ್ ಬ್ಯಾನರ್ಜಿ ಪ್ರಶ್ನಿಸಿದ್ದಾರೆ.
ಶಾಲಾ ನೇಮಕಾತಿ ಹಗರಣದಲ್ಲಿ ಪಶ್ಚಿಮ ಬಂಗಾಳದ ಮಾಜಿ ಶಿಕ್ಷಣ ಸಚಿವ ಪಾರ್ಥ ಚಟರ್ಜಿ ಅವರನ್ನು ಬಂಧಿಸಲಾಗಿತ್ತು.
ಕೋಲ್ಕತ್ತದಲ್ಲಿ ಟಿಎಂಸಿಯ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, 'ರಾಜ್ಯದಲ್ಲಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಕಳಪೆ ಸಾಧನೆ ಮಾಡಿದೆ. ಏಕೆಂದರೆ ಬಿಜೆಪಿ ಕೇಂದ್ರದ ಸಂಸ್ಥೆಗಳು ಹಾಗೂ ಹಣದ ಬಲವನ್ನು ಮಾತ್ರ ಅವಲಂಬಿಸಿದೆ' ಎಂದು ಟೀಕಿಸಿದ್ದಾರೆ.
'2022ರ ಜುಲೈ 21ರಂದು ಪಾರ್ಥ ಚಟರ್ಜಿ ಅವರನ್ನು ಬಂಧಿಸಲಾಗಿತ್ತು. ನಾವು ತಪ್ಪು ಮಾಡಿದ ವ್ಯಕ್ತಿಯನ್ನು ರಕ್ಷಿಸುವುದಿಲ್ಲ. ಆದರೆ ಸ್ವಾತಂತ್ರ್ಯ ಭಾರತದಲ್ಲಿ ಅತಿ ದೊಡ್ಡ ಹಗರಣ ನಡೆದಿದೆ. ಹಾಗಿದ್ದರೂ ಕೇಂದ್ರ ಶಿಕ್ಷಣ ಸಚಿವರನ್ನು ಏಕೆ ಬಂಧಿಸುತ್ತಿಲ್ಲ? ಈ ತಾರತಮ್ಯ ಏಕೆ' ಎಂದು ಪ್ರಶ್ನಿಸಿದ್ದಾರೆ.
'ಪಶ್ಚಿಮ ಬಂಗಾಳಕ್ಕೆ ಸಿಗಬೇಕಿದ್ದ ಹಣಕ್ಕೆ ಬಿಜೆಪಿ ತಡೆ ನೀಡಿದೆ. ಆದರೆ ಚುನಾವಣೆಯಲ್ಲಿ ಜನರು ಅವರಿಗೆ ಪಾಠ ಕಲಿಸಿದ್ದಾರೆ. ಪರಿಣಾಮ 240 ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಗಲಿಲ್ಲ' ಎಂದು ಆರೋಪಿಸಿದರು.
'ಚುನಾವಣೆ ಗೆಲ್ಲಲು ಜಾರಿ ನಿರ್ದೇಶನಾಲಯ, ಸಿಬಿಐ ಸೇರಿದಂತೆ ಕೇಂದ್ರದ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಲಾಯಿತು. ಆದರೆ ನಮಗೆ ಬಂಗಾಳದ ಜನರ ಮೇಲೆ ನಂಬಿಕೆಯಿತ್ತು' ಎಂದು ಹೇಳಿದರು.