ನವದೆಹಲಿ: ನೀಟ್ ಪೇಪರ್ ಸೋರಿಕೆ ಪ್ರಕರಣ (NEET Paper Scam) ದೇಶಾದ್ಯಂತ ಭಾರೀ ಸದ್ದು ಮಾಡ್ತಿದೆ. ಈತನ್ಮಧ್ಯೆ ನೀಟ್ ಪೇಪರ್ ಸೋರಿಕೆ ಪ್ರಕರಣದ ವಿಚಾರಣೆ ಸೋಮವಾರ ಸುಪ್ರೀಂ ಕೋರ್ಟ್ನಲ್ಲಿ (Supreme Court) ನಡೆಯಿತು.
ವಿಚಾರಣೆಯ ವೇಳೆ ಗುಜರಾತ್ನ ಒಂದು ಪ್ರಕರಣವನ್ನು ಉಲ್ಲೇಖಿಸಲಾಗಿದ್ದು, ಸಿಜೆಐ ಚಂದ್ರಚೂಡ್ ಅವರೂ ಸಹ ಆ ವಿಷಯ ಕೇಳಿ ಆಶ್ಚರ್ಯಚಕಿತರಾದರು.
ಹೌದು.. ಅಂದಹಾಗೆ, ಸುಪ್ರೀಂ ಕೋರ್ಟ್ನಲ್ಲಿ ಅರ್ಜಿದಾರರ ಪರ ವಕೀಲರಾದ ಅಡ್ವೊಕೇಟ್ ಹೂಡಾ, ಗುಜರಾತ್ನ ಹುಡುಗಿಯೊಬ್ಬರು ಕರ್ನಾಟಕದ ಬೆಳಗಾವಿಯಲ್ಲಿ ಪರೀಕ್ಷೆ ಬರೆಯಲು ಹೋಗಿ 705 ಅಂಕಗಳನ್ನು ಗಳಿಸಿದ್ದಳು, ಆದರೆ ಅವಳು 12 ನೇ ತರಗತಿಯಲ್ಲಿ ಅನುತ್ತೀರ್ಣಳಾಗಿದ್ದಳು ಎಂದು ನ್ಯಾಯಾಲಯಕ್ಕೆ ತಿಳಿಸಿದರು.
ಈ ಬಗ್ಗೆ ಸಿಜೆಐ ಆ ಪರೀಕ್ಷಾ ಕೇಂದ್ರದ ಯಶಸ್ಸಿನ ಪ್ರಮಾಣ ಎಷ್ಟು ಶೇಕಡಾ ಎಂದು ಕೇಳಿದರು. ಈ ಕುರಿತು ಕೇಂದ್ರದ ಪರ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಗುಜರಾತ್ನ ಈ ಬಾಲಕಿ ಕರ್ನಾಟಕದ ಬೆಳಗಾವಿಯಲ್ಲಿ ಪರೀಕ್ಷೆ ಬರೆದಿದ್ದು ಏಕೆ? ಎರಡನೆಯದಾಗಿ, ನೀಟ್ನಂತಹ ದೊಡ್ಡ ಪರೀಕ್ಷೆಯಲ್ಲಿ 705 ಅಂಕಗಳನ್ನು ಗಳಿಸಿದ ವಿದ್ಯಾರ್ಥಿನಿ 12 ನೇ ತರಗತಿಯಲ್ಲಿ ಫೇಲ್ ಆಗಿದ್ದಾದರೂ ಹೇಗೆ ಎಂದು ಪ್ರಶ್ನಿಸಿದರು.
ಸದ್ಯ ವಿದ್ಯಾರ್ಥಿನಿಯ ಅಂಕಪಟ್ಟಿಯೂ ಸಹ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದರಲ್ಲಿ ವಿದ್ಯಾರ್ಥಿನಿಯು ಭೌತಶಾಸ್ತ್ರದಲ್ಲಿ 21, ರಸಾಯನಶಾಸ್ತ್ರದಲ್ಲಿ 31 ಮತ್ತು ಜೀವಶಾಸ್ತ್ರದಲ್ಲಿ 39 ಅಂಕಗಳನ್ನು ಪಡೆದಿದ್ದಾರೆ. ಇಂಗ್ಲಿಷ್ನಲ್ಲಿ 59 ಅಂಕ ಪಡೆದಿದ್ದಾರೆ. ಆದರೆ, ಈ ಅಂಕಪಟ್ಟಿ ಇನ್ನೂ ದೃಢಪಟ್ಟಿಲ್ಲ. ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ, ವಿದ್ಯಾರ್ಥಿನಿಯು 12 ನೇ ತರಗತಿಯಲ್ಲಿ ಎರಡು ಬಾರಿ ಫೇಲ್ ಆಗಿದ್ದಾಳೆ ಎನ್ನಲಾಗಿದೆ.
ನೀಟ್ ಫಲಿತಾಂಶ ನೋಡಿ ಎಲ್ಲರೂ ಅಚ್ಚರಿ!
ಅದೇ ಸಮಯದಲ್ಲಿ, ಹುಡುಗಿಯ NEET ಫಲಿತಾಂಶವನ್ನು ನೋಡಿ ಎಲ್ಲರೂ ಆಶ್ಚರ್ಯಚಕಿತರಾಗಿದ್ದಾರೆ. NEET ನಲ್ಲಿ, ವಿದ್ಯಾರ್ಥಿಯು ಭೌತಶಾಸ್ತ್ರದಲ್ಲಿ 99.8 ಶೇಕಡಾ ಮತ್ತು ರಸಾಯನಶಾಸ್ತ್ರದಲ್ಲಿ 99.1 ಶೇಕಡಾವನ್ನು ಸಾಧಿಸಿದ್ದಾರೆ. ಜೀವಶಾಸ್ತ್ರದಲ್ಲಿ 99.1 ಶೇಕಡಾ ಅಂಕವನ್ನು ಪಡೆದಿದ್ದಾಳೆ. ಆದರೆ ಗಮನಾರ್ಹ ಸಂಗತಿ ಎಂದರೆ, ಆಕೆ NEET ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರೂ ಸಹ, ವೈದ್ಯಕೀಯ ಕಾಲೇಜಿನಲ್ಲಿ ಪ್ರವೇಶ ಪಡೆಯಲು ಸಾಧ್ಯವಾಗುವುದಿಲ್ಲ, ಏಕೆಂದರೆ ಇದಕ್ಕಾಗಿ 12 ನೇ ತರಗತಿ ಪರೀಕ್ಷೆಯಲ್ಲಿ ಕನಿಷ್ಠ 50 ಅಂಕಗಳೊಂದಿಗೆ ಉತ್ತೀರ್ಣರಾಗುವುದು ಅವಶ್ಯಕ ಆದರೆ ಆಕೆ 2 ಬಾರಿ ಫೇಲ್ ಆಗಿದ್ದು ಮಾತ್ರವಲ್ಲದೇ, ಪಿಯುಸಿಯಲ್ಲಿ 50%ಗಿಂತ ಕಡಿಮೆ ಅಂಕ ಇದೆ.
ಮತ್ತೊಂದೆಡೆ, ಕಾಂಗ್ರೆಸ್ ನಾಯಕ ಶ್ರೀನಿವಾಸ್ ನರೇಂದ್ರ ಮೋದಿ ಸರ್ಕಾರವನ್ನು ಗುರಿಯಾಗಿಸಿ ಟೀಕಿಸಿದ್ದಾರೆ. ನರೇಂದ್ರ ಮೋದಿಯ ಏಕಲವ್ಯ ಕೊನೆಗೂ ಸಿಕ್ಕಿದ್ದು ಗುಜರಾತ್ನಲ್ಲಿ ಮಾತ್ರ, 12ರಲ್ಲಿ ಅನುತ್ತೀರ್ಣ ಆದರೆ ನೀಟ್ನಲ್ಲಿ 720ಕ್ಕೆ 705 ಅಂಕ ಗಳಿಸಿದ್ದಾರೆ ಎಂದು ಬರೆದುಕೊಂಡು ವ್ಯಂಗ್ಯವಾಡಿದ್ದಾರೆ.
ಮತ್ತೊಂದೆಡೆ ಆಕೆಗೆ ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಒಬ್ಬ ಬಳಕೆದಾರರು, 12ನೇ ತರಗತಿಯಲ್ಲಿ ಅನುತ್ತೀರ್ಣರಾದ ಮನೋಜ್ ಶರ್ಮಾ IPS ಆಗಬಹುದಾದರೆ, 12ನೇ ತರಗತಿಯಲ್ಲಿ NEET ಪರೀಕ್ಷೆಯಲ್ಲಿ ಫೇಲಾದವರು ಏಕೆ ಅಗ್ರಸ್ಥಾನದಲ್ಲಿರಬಾರದು ಎಂದು ಪ್ರಶ್ನಿಸಿದ್ದಾರೆ.