ತಿರುವನಂತಪುರ: ವಯನಾಡಿನ ಮುಂಡಕೈ ಮತ್ತು ಚುರಲ್ಮಲಾ ಎರಡು ಪ್ರದೇಶಗಳು ಸಂಪೂರ್ಣವಾಗಿ ನಾಶವಾಗಿವೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.
ದುರಂತದ ಹಿನ್ನೆಲೆಯಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, ವಯನಾಡಿನಲ್ಲಿ ನೋವಿನ ದೃಶ್ಯಗಳು ಹೃದಯ ಭಾರಗೊಳಿಸಿದೆ ಎಂದು ಮುಖ್ಯಮಂತ್ರಿಗಳು ನಿನ್ನೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಇದುವರೆಗೆ 144 ಮೃತದೇಹಗಳು(ನಿನ್ನೆ ಅಪರಾಹ್ನ 3ರ ವರೆಗಿನ ವರದಿಯಂತೆ) ಪತ್ತೆಯಾಗಿವೆ. ಅವರಲ್ಲಿ 64 ಮಂದಿ ಮಹಿಳೆಯರು. 192 ಮಂದಿ ನಾಪತ್ತೆಯಾಗಿದ್ದಾರೆ. ದುರಂತದ ಪ್ರದೇಶದಲ್ಲಿ ಗರಿಷ್ಠ ಸಂಖ್ಯೆಯ ಜನರನ್ನು ರಕ್ಷಿಸಲು ಪ್ರಯತ್ನಗಳು ನಡೆಯುತ್ತಿವೆ. ಅರಣ್ಯವಾಸಿ ಕುಟುಂಬಗಳಿಗೆ ಪುನರ್ ವಸತಿ ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ. ಇದುವರೆಗೆ 1,592 ಜನರನ್ನು ರಕ್ಷಿಸಲಾಗಿದೆ. ಬದುಕುಳಿದವರಿಗೆ ಅಗತ್ಯದ ಚಿಕಿತ್ಸೆಯನ್ನು ಖಾತ್ರಿಪಡಿಸಲಾಗಿದೆ. 201 ಜನರನ್ನು ರಕ್ಷಿಸಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ವಯನಾಡಿನಲ್ಲಿ 82 ಶಿಬಿರಗಳಲ್ಲಿ 8,017 ಜನರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಶಿಬಿರಗಳಲ್ಲಿ ಉಳಿದುಕೊಂಡಿರುವವರ ಮಾನಸಿಕ ಆರೋಗ್ಯವನ್ನು ಖಚಿತಪಡಿಸಿಕೊಳ್ಳಲು ಕೌನ್ಸೆಲಿಂಗ್ ನಡೆಸಲಾಗುವುದು.
1,167 ಜನರ ವಾರ್ಮ್ ಅಪ್ ತಂಡದಿAದ ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ. 645 ಅಗ್ನಿಶಾಮಕ ಸಿಬ್ಬಂದಿ, 96 ಎನ್ಡಿಆರ್ಎಫ್ ಸಿಬ್ಬಂದಿ ಮತ್ತು 350 ಪೊಲೀಸರು ರಕ್ಷಣಾ ಕಾರ್ಯಾಚರಣೆಯಲ್ಲಿದ್ದಾರೆ. ನೌಕಾಪಡೆಯು ಆಹಾರ ಮತ್ತು ಕುಡಿಯುವ ನೀರನ್ನು ಒದಗಿಸುತ್ತದೆ. ರಸ್ತೆಗಳಲ್ಲಿ ಅಡಚಣೆಯಾಗದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ಮರಣೋತ್ತರ ಪರೀಕ್ಷೆಯ ಪ್ರಕ್ರಿಯೆಯನ್ನು ವೇಗಗೊಳಿಸಲು ಹೆಚ್ಚಿನ ವಿಧಿವಿಜ್ಞಾನ ತಂಡಗಳನ್ನು ನಿಯೋಜಿಸಲಾಗಿದೆ. ದೇಹದ ಭಾಗಗಳನ್ನು ಗುರುತಿಸಲು ಆನುವಂಶಿಕ ಪರೀಕ್ಷೆಯನ್ನು ಮಾಡಲಾಗುತ್ತದೆ. ಭೂಗರ್ಭದಲ್ಲಿ ಸಿಕ್ಕಿಬಿದ್ದವರ ಪತ್ತೆಗೆ ಹೊಸ ತಂತ್ರಜ್ಞಾನ ಬಳಸಲಾಗುವುದು. ಇದಕ್ಕಾಗಿ ಕ್ಯಾಪ್ಟನ್ ಇಂದ್ರಪಾಲ್ ಅವರ ನೆರವು ಕೋರಲಾಗಿದೆ. ರಕ್ಷಣಾ ಕಾರ್ಯಾಚರಣೆಗೆ ಹೆಚ್ಚಿನ ಸ್ನಿಫರ್ ಡಾಗ್ಗಳನ್ನು ಸಹ ನಿಯೋಜಿಸಲಾಗುವುದು.
ದುರಂತದಲ್ಲಿ ಕೆಎಸ್ಇಬಿಗೆ ಬರೋಬ್ಬರಿ 3 ಕೋಟಿ ರೂ.ನಷ್ಟವಾಗಿದೆ. ಪಡಿತರ ಅಂಗಡಿಗಳನ್ನು ಕೂಡಲೇ ವ್ಯವಸ್ಥೆಗೊಳಿಸಲಾಗುವುದು. ಸಪ್ಲೈಕೋ ಅಗತ್ಯ ವಸ್ತುಗಳ ಲಭ್ಯತೆಯನ್ನು ಖಚಿತಪಡಿಸುತ್ತದೆ. ಮೊಬೈಲ್ ಟವರ್ಗಳು ಮತ್ತು ಜನರೇಟರ್ಗಳನ್ನು ಕಾರ್ಯನಿರ್ವಹಿಸಲು ವ್ಯವಸ್ಥೆ ಮಾಡಲು ಸೂಚನೆಗಳನ್ನು ನೀಡಲಾಗಿದೆ. ವಿಪತ್ತು ಪ್ರದೇಶಗಳಲ್ಲಿ ಸೀಮೆಎಣ್ಣೆ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲಾಗುವುದು. ದುರಂತ ಪರಿಸ್ಥಿತಿ ಎದುರಿಸಲು ಆಹಾರ ಇಲಾಖೆ ಕ್ರಮ ಕೈಗೊಂಡಿದೆ. ಪ್ರತ್ಯೇಕವಾದ ಮುಂಡಕೈಗೆ ತಾತ್ಕಾಲಿಕ ಸೇತುವೆಯನ್ನು ನಿರ್ಮಿಸಲು ಅಗತ್ಯವಾದ ಸಾಮಗ್ರಿಗಳೊಂದಿಗೆ ವಾಯುಪಡೆಯ ಎರಡನೇ ವಿಮಾನವು ಕಣ್ಣೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದೆ ಎಂದು ತಿಳಿಸಿದರು.