HEALTH TIPS

ಮಹಾ ನಗರಗಳಲ್ಲಿ ಪ್ರವಾಹ ನಿಯಂತ್ರಿಸಲು ₹ 2,500 ಕೋಟಿ ವ್ಯಯಿಸಲಿದೆ ಭಾರತ

             ವದೆಹಲಿ: ಮುಂಬೈ, ಚೆನ್ನೈ, ಬೆಂಗಳೂರು ಸೇರಿದಂತೆ ದೇಶದ ಏಳು ಮಹಾ ನಗರಗಳಲ್ಲಿ ಪ್ರವಾಹವನ್ನು ನಿಯಂತ್ರಿಸಲು ಹಾಗೂ ನೀರಿನ ಮೂಲಗಳ ಸಂರಕ್ಷಣೆಗಾಗಿ ಭಾರತವು ಮುಂದಿನ ಎರಡು ವರ್ಷಗಳಲ್ಲಿ ಅಂದಾಜು ₹ 2,500 ಕೋಟಿಗೂ ಅಧಿಕ (300 ಮಿಲಿಯನ್‌ ಡಾಲರ್‌) ವ್ಯಯಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

          ತ್ವರಿತ ನಗರೀಕರಣ ಪ್ರಕ್ರಿಯೆಯಿಂದಾಗಿ ಆಗಿರುವ ನದಿ ಅಥವಾ ಕೆರೆ ಪ್ರದೇಶಗಳ ಅತಿಕ್ರಮಣ ಮತ್ತು ತ್ಯಾಜ್ಯವು ಚರಂಡಿಗಳನ್ನು ತುಂಬಿಕೊಳ್ಳುವುದರಿಂದ ಮುಂಗಾರು ಸಂದರ್ಭದಲ್ಲಿ ಪ್ರಮುಖ ನಗರಗಳಲ್ಲಿ ಪ್ರವಾಹ ಸಂಭವಿಸುವುದು ಸಾಮಾನ್ಯವೆಂಬಂತಾಗಿದೆ. ನೀರಿನ ಮೂಲಗಳ ಅತಿಕ್ರಮಣವು ದೆಹಲಿ, ಬೆಂಗಳೂರಿನಂತಹ ನಗರಗಳಲ್ಲಿ ಜಲ ಬಿಕ್ಕಟ್ಟನ್ನೂ ಸೃಷ್ಟಿಸಲಿದೆ.

            ಭಾರತದಲ್ಲಿ ತಲೆದೋರುತ್ತಿರುವ ನೀರಿನ ಸಮಸ್ಯೆಯು ಅಭಿವೃದ್ಧಿ ಮೇಲೆ ಪರಿಣಾಮ ಉಂಟುಮಾಡಲಿದೆ ಎಂದು ಮೂಡೀಸ್‌ ಇನ್ವೆಸ್ಟರ್ಸ್‌ ಸರ್ವೀಸ್‌ ಕಂಪನಿ ಜೂನ್‌ನಲ್ಲಿ ಎಚ್ಚರಿಸಿತ್ತು.

ಜಲ ಮೂಲಗಳನ್ನು ಆದ್ಯತೆಯಾಗಿಸುವ ಮೊದಲ ಪ್ರವಾಹ ನಿಯಂತ್ರಣ ಉಪಕ್ರಮವನ್ನು ಕೇಂದ್ರ ಸರ್ಕಾರ ಇತ್ತೀಚೆಗೆ ಅನುಮೋದಿಸಿದೆ. ಈ ಕ್ರಮದ ಭಾಗವಾಗಿ ಸಂಭಾವ್ಯ ಪ್ರವಾಹ ಸ್ಥಿತಿಯ ಬಗ್ಗೆ ಮುನ್ಸೂಚನೆಯನ್ನೂ ನೀಡಲಾಗುತ್ತದೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಕೃಷ್ಣ ಎಸ್‌. ವತ್ಸ ತಿಳಿಸಿದ್ದಾರೆ.

         ಪ್ರಾಧಿಕಾರದ ಮೂವರು ಸದಸ್ಯರಲ್ಲಿ ಒಬ್ಬರಾದ ಕೃಷ್ಣ, 'ನಗರಗಳಲ್ಲಿ ಪ್ರವಾಹ ನಿಯಂತ್ರಿಸುವ ನಿಟ್ಟಿನಲ್ಲಿ ಇದು ಮಹತ್ವದ ಉಪಕ್ರಮವಾಗಲಿದೆ' ಎಂದಿದ್ದಾರೆ.

             'ಮಳೆ ನೀರು ಸರಾಗಿ ಹರಿದು ಹೋಗಲು ಸಾಧ್ಯವಾಗುವ ಚರಂಡಿಗಳ ಪ್ರಾಮುಖ್ಯತೆಯನ್ನು ಕಡೆಗಣಿಸುವುದಿಲ್ಲ. ಅದಕ್ಕೆ ಪೂರಕವಾಗಿ ನದಿಗಳು ಹಾಗೂ ಕೆರೆಗಳಲ್ಲಿ ನೀರಿನ ಸಂಗ್ರಹ ಸಾಮರ್ಥ್ಯವನ್ನು ಹೆಚ್ಚಿಸಲಾಗುತ್ತದೆ' ಎಂದು ತಿಳಿಸಿದ್ದಾರೆ.

            ಕ್ರಮಕ್ಕೆ ಮೀಸಲಿಡುವ ಅನುದಾನದದಲ್ಲಿ ಮುಂಬೈ, ಚೆನ್ನೈ ಮತ್ತು ಕೋಲ್ಕತ್ತಕ್ಕೆ ತಲಾ ₹ 500 ಕೋಟಿ ಒದಗಿಸಲಾಗುವುದು. ಅಲಹಾಬಾದ್‌, ಹೈದರಾಬಾದ್‌, ಬೆಂಗಳೂರು ಮತ್ತು ಪುಣೆಗೆ ₹ 250 ಕೋಟಿ ನೀಡಲಾಗುವುದು. ಪ್ರವಾಹದ ಪ್ರಮಾಣ ಮತ್ತು ಉಂಟಾಗುವ ನಷ್ಟದ ಆಧಾರದಲ್ಲಿ ಈ ಯೋಜನೆಗೆ ನಗರಗಳನ್ನು ಆಯ್ಕೆ ಮಾಡಲಾಗಿದೆ. ಹೀಗಾಗಿ, ರಾಷ್ಟ್ರ ರಾಜಧಾನಿ ದೆಹಲಿಗೆ ಅನುದಾನ ಹಂಚಿಕೆ ಮಾಡಿಲ್ಲ ಎಂದು ವಿವರಿಸಿದ್ದಾರೆ.

             ದೇಶದ ಆರ್ಥಿಕ ರಾಜಧಾನಿ ಮುಂಬೈನಲ್ಲಿ ಜುಲೈ 8ರಂದು 30 ಸೆ.ಮೀ.ಗಿಂತಲೂ ಅಧಿಕ ಮಳೆ ಸುರಿದಿತ್ತು ಎಂಬುದನ್ನು ಉಲ್ಲೇಖಿಸಿ, ಕಡಿಮೆ ಅವಧಿಯಲ್ಲಿ ಭಾರಿ ಪ್ರಮಾಣದ ಮಳೆ ಸುರಿಯುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿ ದೀರ್ಘಾವಧಿಯ ಉಪಕ್ರಮಗಳನ್ನು ಕೈಗೊಳ್ಳುವುದು ಅತ್ಯಗತ್ಯ ಎಂದು ಒತ್ತಿಹೇಳಿದ್ದಾರೆ.

             ನಗರಗಳಲ್ಲಿ 10 ಸೆ.ಮೀ ಮಳೆ ಸುರಿದರೆ ಸಾಕಷ್ಟು ಸ್ಥಳಗಳಲ್ಲಿ ಜಲಾವೃತಗೊಳ್ಳುತ್ತವೆ. ಅಂತಹ ಪರಿಸ್ಥಿತಿಯನ್ನು ತಪ್ಪಿಸುವುದಕ್ಕಾಗಿ ಸೂಕ್ತ ಕ್ರಮಗಳು, ವೆಚ್ಚಗಳನ್ನು ಮಾಡುವುದು ಅಗತ್ಯವೆಂದು ಎಂದು ಪ್ರತಿಪಾದಿಸಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries