ಕಾಸರಗೋಡು: ಧಾರಾಕಾರ ಮಳೆಯಿಂದಾಗಿ ಭೂಕುಸಿತ ಭೀತಿ ಎದುರಿಸುತ್ತಿರುವ ಪನತ್ತಡಿ ಪಂಚಾಯತಿಯ ಕಲ್ಲಪಳ್ಳಿ ಕಮ್ಮಾಡಿ ಪತ್ತುಕುಡಿಯಲ್ಲಿ ಪಂಚಾಯತಿ ಮತ್ತು ಕಂದಾಯ ಇಲಾಖೆ ನೆರವಿನೊಂದಿಗೆ 20 ಕುಟುಂಬಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಧಳಾಂತರಿಸಲಾಗಿದೆ. ಸ್ಥಳಾಂತರಗೊಳಿಸಿದ ಕುಟುಂಬಗಳನ್ನು ಕಮ್ಮಾಡಿ ಎಂಜಿಎಲ್ ಮತ್ತು ವಿವಿಧ ಮನೆಗಳಲ್ಲಿ ಸಿದ್ಧಪಡಿಸಲಾದ ಸಂತ್ರಸ್ತ ಶಿಬಿರಗಳಲ್ಲಿ ವಾಸ ಸೌಕರ್ಯ ಏರ್ಪಡಿಸಲಾಗಿದೆ.
ಪತ್ತುಕುಡಿಯ ನಾರಾಯಣನ್ ಅವರ ಮನೆ ಗುಡ್ಡೆ ಕುಸಿತದಿಂದ ಹಾನಿಗೀಡಾಗಿದೆ. ಚುಳ್ಳಿಕೆರೆಯಲ್ಲೂ ಭೂಕುಸಿತದ ಭೀತಿ ಉಂಟಾಗಿದ್ದು, ಒಟ್ಟಕಂಡಿ ಮತ್ತು ಕುಟ್ಟಾನ ಕಾಲನಿಗಳ 20 ಕುಟುಂಬಗಳನ್ನು ಚುಳ್ಳಿಕೆರೆ ಸರ್ಕಾರಿ ಎಲ್ಪಿ ಶಾಲೆಯಲ್ಲಿ ಏರ್ಪಡಿಸಲಾಗಿರುವ ಸಂರಕ್ಷಣಾ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ. ಇವರಲ್ಲೊಬ್ಬರನ್ನು ಪೂಡಂಗಲ್ಲು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಪನತ್ತಡಿ ಕಮ್ಮಾಡಿ ಹೊಳೆಯಲ್ಲಿ ಮಳೆ ನೀರು ತುಂಬಿ ಪ್ರವಾಹದ ಭೀತಿಯ ಹಿನ್ನೆಲೆಯಲ್ಲಿ 22 ಮಂದಿಯನ್ನೊಳಗೊAಡ 8 ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ತೃಕ್ಕರಿಪುರ ಮಯ್ಯಿಚ್ಚ ಹೊಳೆಯಲ್ಲಿ ಪ್ರವಾಹ ಭೀತಿ ಎದುರಾಗಿದೆ.
ಕಾಸರಗೋಡು, ಚೆರ್ಕಳದಿಂದ ಚಟ್ಟಂಚಾಲ್ ತನಕದ ರಾಷ್ಟಿçÃಯ ಹೆದ್ದಾರಿಯಲ್ಲಿ ಗುಡ್ಡೆ ಕುಸಿತ ಬೆದರಿಕೆ ಉಂಟಾಗಿದ್ದು, ರಸ್ತೆಯಲ್ಲಿ ಆ.7 ರ ತನಕ ವಾಹನ ಸಂಚಾರಕ್ಕೆ ಜಿಲ್ಲಾಧಿಕಾರಿ ನಿಷೇಧ ಹೇರಿದ್ದಾರೆ. ಮಧೂರು ಮಧುವಾಹಿನಿ ಹೊಳೆಯಲ್ಲೂ ಪ್ರವಾಹ ಭೀತಿ ಎದುರಾಗಿದೆ. ಉಪ್ಪಳ, ಚೇರಂಗೈ, ತೃಕ್ಕರಿಪುರ ಮೊದಲಾದೆಡೆಗಳಲ್ಲಿ ಕಡಲ್ಕೊರೆತ ಭೀತಿ ಎದುರಾಗಿದೆ. ಈಗಾಗಲೇ ಈ ಪ್ರದೇಶದಲ್ಲಿ ಹಲವು ತೆಂಗಿನ ಮರಗಳು ಸಮುದ್ರ ಪಾಲಾಗಿದೆ. ಕೆಲವು ಮನೆಗಳು ಸಮುದ್ರ ಪಾಲಾಗುವ ಸ್ಥಿತಿಯಲ್ಲಿದೆ. ಮಂಜೇಶ್ವರದಲ್ಲಿ ಕಡಲ್ಕೊರೆತ ತಲೆದೋರಿದ್ದು, ಇದರಿಂದಾಗಿ ಸಮುದ್ರ ದಡದಿಂದ 30 ಮೀಟರ್ ತನಕ ನೀರು ನುಗ್ಗಿದೆ. ಹಲವು ಮರಗಳು ರಸ್ತೆಗೆ ಅಡ್ಡವಾಗಿ ಬಿದ್ದಿವೆ. ವಲಿಯಪರಂಬ ಪಡನ್ನಕ್ಕಾಡ್ನಲ್ಲಿ ಕಡಲ್ಕೊರೆತ ಭೀತಿ ಉಂಟಾಗಿದೆ.
ಆ.3 ರ ತನಕ ಜಿಲ್ಲೆಯಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಕೇಂದ್ರ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದ್ದು, ಅಲರ್ಟ್ ಘೋಷಿಸಿದೆ. ಜಿಲ್ಲೆಯ ಪ್ರವಾಸಿ ಕೇಂದ್ರಗಳಿಗೆ ಪ್ರವಾಸಿಗಳ ಸಂದರ್ಶನ ತಾತ್ಕಾಲಿಕ ನಿಷೇಧ ಹೇರಲಾಗಿದೆ. ವಿಪತ್ತು ನಿರ್ವಹಣಾ ಪಡೆ, ಅಗ್ನಿಶಾಮಕ ದಳ, ಪೋಲೀಸರು ಮತ್ತು ಅರಣ್ಯ ಇಲಾಖೆಯನ್ನು ರಕ್ಷಣಾ ಕಾರ್ಯಾಚರಣೆಗೆ ಸಜ್ಜುಗೊಳಿಸಲಾಗಿದೆ. ಜಿಲ್ಲೆಯಲ್ಲಿ ಹಲವು ಕಂಟ್ರೋಲ್ ರೂಂಗಳನ್ನು ತೆರೆಯಲಾಗಿದೆ. ವಿದ್ಯುತ್ ಅವಗಡಗಳು ಉಂಟಾದಲ್ಲಿ 9496011431 ನಂಬ್ರಕ್ಕೆ ಕರೆದು ಮಾಹಿತಿ ನೀಡಲು ತಿಳಿಸಲಾಗಿದೆ.
ಉಕ್ಕಿ ಹರಿಯುತ್ತಿರುವ ಹೊಳೆ ಜಲಾವೃತ : ಉಪ್ಪಳ ಹೊಳೆಯಲ್ಲಿ ನೀರು ಉಕ್ಕಿ ಹರಿಯುತ್ತಿದ್ದು, ಕೃಷಿ ನಾಶಗೊಳ್ಳುವ ಸಾಧ್ಯತೆಯಿದೆ. ಪೈವಳಿಕೆ, ಮೀಂಜ, ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯಲ್ಲಿ ಭಾರೀ ನೀರು ತುಂಬಿ ಹರಿಯುತ್ತಿದೆ. ಇದರಿಂದ ಅಡಿಕೆ ತೋಟಗಳು ಜಲಾವೃತಗೊಂಡಿದೆ. ಪೈವಳಿಕೆ ಪಂಚಾಯತಿಯ ಮುನ್ನಿಪ್ಪಾಡಿಯ ಬಾಲಕೃಷ್ಣ ಕುಲಾಲ್, ಪೂವಪ್ಪ ಕುಲಾಲ್, ಮೀಂಜ ಪಂಚಾಯತಿಯ ದರ್ಬೆ ನಿವಾಸಿಗಳಾದ ವಿಠಲ ಶೆಟ್ಟಿ, ಪ್ರಕಾಶ್ ಶೆಟ್ಟಿ, ಸುಜಿತ್ ಸಾಮಾನಿ, ವಿಶ್ವನಾಥ ಶೆಟ್ಟಿ, ಮೊಹಮ್ಮದ್, ಕೊಳಚಪ್ಪು ನಿವಾಸಿ ದಿನೇಶ್ ಹಾಗು ಮಂಗಲ್ಪಾಡಿ ಪಂಚಾಯತಿಯ ದೇರಂಬಳ, ಮಡಂದೂರು ಸಹಿತ ವಿವಿಧ ಪ್ರದೇಶಗಳಲ್ಲಿ ತೋಟಗಳು ಜಲಾವೃತಗೊಂಡಿದೆ. ಶಿರಿಯ ಹೊಳೆ ಉಕ್ಕಿಹರಿಯುತ್ತಿದ್ದು ಉಳುವಾರು, ಬಂಬ್ರಾಣ ಬಯಲು ಪ್ರದೇಶಗಳಲ್ಲಿ ನೀರು ತುಂಬಿಕೊAಡಿದೆ. ಕೆಲವು ಮನೆಗಳಿಗೆ ಮಳೆ ನೀರು ನುಗ್ಗಿದೆ. ಕುಂಬಳೆ ಬದ್ರಿಯಾ ನಗರದಲ್ಲಿ ಮರ ಬಿದ್ದು ಆಮಿನ ಅವರ ಮನೆ ಹಾನಿಗೀಡಾಗಿದೆ.