ಕಾಸರಗೋಡು: ಅಮಾನ್ಯಗೊಳಿಸಲ್ಪಟ್ಟಿರುವ 1ಸಾವಿರ ರೂ. ಮುಖಬೆಲೆಯ ನೋಟುಗಳನ್ನು ಬದಲಾಯಿಸಿನೀಡುವ ಸಂಸ್ಥೆಯೊಂದು ಕಾರ್ಯಾಚರಿಸುತ್ತಿದ್ದು, ಈ ಸಂಸ್ಥೆಗೆ ಅಮಾನ್ಯ ನೋಟುಗಳನ್ನು ನೀಡಿದಲ್ಲಿ ಕೋಟ್ಯಂತರ ರೂ.ಲಾಭದ ಆಮಿಷವೊಡ್ಡಿ 57ಲಕ್ಷ ರೂ. ಪಡದು ವಂಚನೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಪಳ್ಳಿಕೆರೆ ಹದಾದ್ನಗರ ನಿವಾಸಿ ಸಮೀರ್, ಕೋಟಪಾರ ನಿವಾಸಿ ಶರೀಪ್, ಗಿರಿಕೈಲಾಸ್ ಸೇರಿದಂತೆ ಐದು ಮಂದಿ ವಿರುದ್ಧ ಬೇಕಲ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ಪಳ್ಳಿಕೆರೆ ಮುಕ್ಕೋಟ್ ಕಾರಕುನ್ನು ನಿವಾಸಿ ಇಬ್ರಾಹಿಂ ಬಾದುಷಾ ಅವರ ದೂರಿನ ಮೇರೆಗೆ ಈ ಕೇಸು. 2023 ಜ. 15ರಿಂದ 2023ರ ಆಗಸ್ಟ್ 30ರ ವರೆಗೆ ಲಾಭದ ಭರವಸೆ ನೀಡಿ, ತನ್ನಿಂದ ಹಣ ಪಡೆದು ವಂಚಿಸಿರುವುದಾಗಿ ಪೊಲಿಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಶೆರೀಫ್ ವಶದಲ್ಲಿ ಒಂದು ಸಾವಿರ ರೂ. ಮುಖಬೆಲೆಯ 125ಕೋಟಿ ರೂ. ಇದ್ದು, ದೆಹಲಿಯ ಸಂಸ್ಥೆಯೊಂದು ಈ ಮೊತ್ತ ಪಡೆದು, ಅದರ ಶೇ. 60ರಷ್ಟು ಹಣ ಪಾವತಿಸುತ್ತದೆ. ಹಣ ಪಡೆದುಕೊಳ್ಳಲು ಸಂಸ್ಥೆ ಸಿಬ್ಬಂದಿ ತಮ್ಮ ವಾಹನದೊಂದಿಗೆ ಇಲ್ಲಿಗೆ ಆಗಮಿಸುತ್ತಾರೆ. ಇದಕ್ಕೆ ಮುಂಗಡವಾಗಿ 15ಲಕ್ಷ ರೂ. ಪಾವತಿಸಬೇಕಾಗುತ್ತದೆ ಎಂದು ಸಮೀರ್ ತಿಳಿಸಿದ್ದಾನೆ. ಕೇಂದ್ರ ಸಚಿವರೊಬ್ಬರ ಪುತ್ರ ಸಂಸ್ಥೆಯೊಂದಿಗೆ ನಂಟು ಹೊಂದಿದ್ದಾನೆ. ಹಿಂದಿ ಭಾಷೆಯಲ್ಲಿ ಮಾತನಾಡುವ ಕೆಲವರು ವಾಹನದಲ್ಲಿ ಆಗಮಿಸಿ ಅಮಾನ್ಯ ನೋಟು ಸ್ವೀಕರಿಸುವ ಚಿಡಿಯೋ ಚಿತ್ರೀಕರಣವನ್ನೂ ತೋರಿಸಿ ಭರವಸೆ ಹುಟ್ಟಿಸಿ, 57ಲಕ್ಷ ರೂ. ತನ್ನಿಂದ ಪಡೆದು ವಂಚಿಸಿರುವುದಾಗಿ ಇಬ್ರಾಹಿಂ ಬಾದುಷಾ ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಪೊಲೀಸರು ಸಮಗ್ರ ತನಿಖೆ ಆರಂಭಿಸಿದ್ದಾರೆ.