ತಿರುವನಂತಪುರಂ: ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೀಕರ ಭೂಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ದೇಶದ ಟೆಲಿಕಾಂ ದೈತ್ಯ ಏರ್ಟೆಲ್ ಉಚಿತ ಸೇವೆ ಘೋಷಣೆ ಮಾಡಿದ್ದು, ಮಾತ್ರವಲ್ಲದೇ ಬಿಲ್ ಗಡುವನ್ನು ಕೂಡ ವಿಸ್ತರಣೆ ಮಾಡಿದೆ.
ಮಂಗಳವಾರದ ಭಾರೀ ಮಳೆಯಿಂದ ಉಂಟಾದ ಭೂಕುಸಿತದಲ್ಲಿ ಕನಿಷ್ಠ 190 ಜನರನ್ನು ಬಲಿ ತೆಗೆದುಕೊಂಡಿದ್ದು, 200 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. 220ಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದಾರೆ.
ಇತ್ತ ಕೇರಳದ ವಯನಾಡ್ ಜಿಲ್ಲೆಯಲ್ಲಿ ಸಂಭವಿಸಿದ ವಿನಾಶಕಾರಿ ಭೂಕುಸಿತಕ್ಕೆ ಪ್ರತಿಕ್ರಿಯೆಯಾಗಿ, ಟೆಲಿಕಾಂ ದೈತ್ಯ ಭಾರ್ತಿ ಏರ್ಟೆಲ್ ಪ್ರತಿ ದಿನ ಉಚಿತ 1 ಜಿಬಿ ಡೇಟಾ ನೀಡಲು ಮುಂದಾಗಿದ್ದು, ಅವಧಿ ಮುಗಿದಿರುವ ಪ್ರಿಪೇಯ್ಡ್ ಗ್ರಾಹಕರಿಗೆ ಅನಿಯಮಿತ ಕರೆಯನ್ನು ಒದಗಿಸುವುದಾಗಿ ಘೋಷಿಸಿದೆ.
ಏರ್ಟೆಲ್ ಭೂ ಕುಸಿತ ಪೀಡಿತ ಸತ್ರಸ್ಥರಿಗೆ ಸಹಾಯ ಮಾಡುವ ಉದ್ದೇಶದಿಂದ ಪರಿಹಾರ ಕ್ರಮಗಳನ್ನು ಘೋಷಿಸಿದ್ದು, ಪ್ರಿಪೇಯ್ಡ್ ಗ್ರಾಹಕರಿಗೆ ಉಚಿತ ಡೇಟಾ ಮತ್ತು ಕರೆಗಳ ಜೊತೆಗೆ, ಕಂಪನಿಯು ಪೋಸ್ಟ್ಪೇಯ್ಡ್ ಗ್ರಾಹಕರಿಗೆ ಬಿಲ್ ಪಾವತಿ ಗಡುವನ್ನು ವಿಸ್ತರಿಸಿದೆ. ಅಂತೆಯೇ ಸ್ಥಳೀಯ ಆಡಳಿತದ ಪ್ರಯತ್ನಗಳನ್ನು ಬೆಂಬಲಿಸಲು ಕೇರಳದಲ್ಲಿನ ತನ್ನ 52 ಮಳಿಗೆಗಳನ್ನು ಪರಿಹಾರ ಸಂಗ್ರಹಣಾ ಕೇಂದ್ರಗಳಾಗಿ ಪರಿವರ್ತಿಸುವುದಾಗಿ ಹೇಳಿದೆ.