ಕಾಸರಗೋಡು: ನಿಗೂಢವಾಗಿ ನಾಪತ್ತೆಯಾಗಿದ್ದ ನೆಲ್ಲಿಕಟ್ಟೆ ಸನಿಹದ ಪಾಂಬಾಚಿಕಡವು ನಿವಾಸಿ, ಕಾಸರಗೋಡಿನ ಬ್ಯಾಂಕ್ ಒಂದರ ಪಿಗ್ಮಿ ಏಜೆಂಟ್ ರಮೇಶ್ ಬಿ.ಎ(50)ಅವರ ಮೃತದೇಹ ನೆಲ್ಲಿಕುಂಜೆ ಹಾರ್ಬರ್ ಸನಿಹ ಪತ್ತೆಯಾಗಿದೆ. ನಗರಠಾಣೆ ಪೊಲೀಸರು ಮೃತದೇಹವನ್ನು ಜನರಲ್ ಆಸ್ಪತ್ರೆಗೆ ತಲುಪಿಸಿದ್ದಾರೆ.
ರಮೇಶ್ ಅವರು ನಾಪತ್ತೆಯಾಗಿರುವ ಬಗ್ಗೆ ಸಹೋದರ ನೀಡಿದ ದೂರಿನನ್ವಯ ವಿದ್ಯಾನಗರ ಠಾಣೆ ಪೊಲೀಸರು ಶುಕ್ರವಾರ ಕೇಸು ದಾಖಲಿಸಿ ತನಿಖೆ ನಡೆಸುವ ಮಧ್ಯೆ ಇವರ ಸ್ಕೂಟರ್ ಕಾಸರಗೋಡು ಚಂದ್ರಗಿರಿ ಹೊಳೆ ಸನಿಹ ಉಪೇಕ್ಷಿತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಇದರಿಂದ ರಮೇಶ್ ಅವರು ಹೊಳೆಗೆ ಹಾರಿರುವ ಬಗ್ಗೆ ಸಂಶಯ ವ್ಯಕ್ತವಾದ ಹಿನ್ನೆಲೆಯಲ್ಲಿ ಪೊಲೀಸ್, ಅಗ್ನಿಶಾಮಕ ದಳ ಹಾಗೂ ಊರವರ ಸಹಾಯದಿಂದ ಹುಡುಕಾಟ ಮುಂದುವರಿಸುತ್ತಿದ್ದಂತೆ ಮೃತದೇಹ ಶನಿವಾರ ಪತ್ತೆಯಾಘಿದೆ. ಸ್ಕೂಟರ್ನಲ್ಲಿ ಪಿಗ್ಮಿ ಸಂಗ್ರಹದ ಹಣ, ಮೊಬೈಲ್, ಚಿನ್ನಾಭರಣ ಪತ್ತೆಯಾಗಿದ್ದು, ಇದನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು.