ಮಧೂರು: ಕೂಡ್ಲು ಕುತ್ಯಾಳ ಶ್ರೀ ಗೋಪಾಲಕೃಷ್ಣ ಯಕ್ಷಗಾನ ತರಬೇತಿ ಕೇಂದ್ರದ 23ನೇ ವಾರ್ಷಿಕೋತ್ಸವವು ಇತ್ತೀಚೆಗೆ ಕೂಡ್ಲು ಕುತ್ಯಾಳ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಜರುಗಿತು. ಕ್ಷೇತ್ರದ ಅರ್ಚಕ ಸೂರ್ಯನಾರಾಯಣ ಅಡಿಗರು ದೀಪ ಪ್ರಜ್ವಲನೆಗೈದು ಚಾಲನೆ ನೀಡಿದರು. ಬಳಿಕ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ "ವೀರಮಣಿ ಕಾಳಗ " ತಾಳಮದ್ದಳೆ ಜರುಗಿತು.
ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಕೇಂದ್ರದ ಅಧ್ಯಕ್ಷ ಗೋಪಾಲಕೃಷ್ಣ ಬಲ್ಯಾಯ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸದಸ್ಯರಾದ ಶ್ರೀ ಸತೀಶ್ ಅಡಪ ಸಂಕಬೈಲು ಅವರು ಕೇಂದ್ರದ ನೂತನ ಲೋಗೋ ಬಿಡುಗಡೆಗೊಳಿಸಿ ಕೇಂದ್ರದ ಕಾರ್ಯಗಳನ್ನು ಶ್ಲಾಘಿಸಿದರು. ಕ್ಷೇತ್ರದ ನಿವೃತ್ತ ಅರ್ಚಕ ಶ್ರೀಪತಿ ಅಡಿಗರನ್ನು ಕೇಂದ್ರದ ವತಿಯಿಂದ ಸನ್ಮಾನಿಸಲಾಯಿತು. ಚಂದ್ರಮೋಹನ ಕೂಡ್ಲು ಸನ್ಮಾನ ಪತ್ರ ವಾಚಿಸಿದರು. ಚಾರ್ಟರ್ಡ್ ಅಕೌಂಟAಟ್ ಇಂಟರ್ಮೀಡಿಯೇಟ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಕೇಂದ್ರದ ಸದಸ್ಯ ಲತೇಶ್ ಎಂ. ಪಿ ಮತ್ತು ಕರ್ನಾಟಕ ಯಕ್ಷಗಾನ ಅಕಾಡಮಿಗೆ ನೂತನ ಸದಸ್ಯರಾಗಿ ಆಯ್ಕೆಯಾದ ಸತೀಶ್ ಅಡಪ ಸಂಕಬೈಲು ಅವರನ್ನು ಅಭಿನಂದಿಸಲಾಯಿತು. ಕ್ಷೇತ್ರದ ಮೊಕ್ತೇಸರರೂ ಕೇಂದ್ರದ ಗೌರವಾಧ್ಯಕ್ಷರೂ ಆಗಿರುವ ಕೆ.ಜಿ.ಶ್ಯಾನುಭೋಗ್ ಮತ್ತು ಕೂಡ್ಲು ಮೇಳದ ಮುಖ್ಯಸ್ಥ ರವಿರಾಜ ಅಡಿಗ ಶುಭಾಶಂಸನೆಗೈದರು. ತರಬೇತಿ ಪೂರ್ತಿಗೊಳಿಸಿದ ವಿದ್ಯಾರ್ಥಿಗಳಿಗೆ ಕೇಂದ್ರದ ನಾಟ್ಯ ಗುರುಗಳಾದ ಸಬ್ಬಣಕೋಡಿ ರಾಮ ಭಟ್ ಪ್ರಮಾಣ ಪತ್ರ ವಿತರಿಸಿದರು. ವಿಫ್ನೇಶ್ ಕಾರಂತ ಕೂಡ್ಲು ಪ್ರಾರ್ಥನೆಗೈದರು. ರಾಮಪ್ರಸಾದ್ ಮಯ್ಯ ಕೂಡ್ಲು ಸ್ವಾಗತಿಸಿ, ಆಕಾಶ್ ಕೂಡ್ಲು ವಂದಿಸಿದರು. ಸುರೇಶ್ ಮಣಿಯಾಣಿ ನಿರೂಪಿಸಿದರು. ಬಳಿಕ ಕೇಂದ್ರದ ಕಿರಿಯ ಮತ್ತು ಹಿರಿಯ ವಿದ್ಯಾರ್ಥಿಗಳಿಂದ ನರಕಾಸುರ ಮೋಕ್ಷ ಮತ್ತು ಗರುಡೋದ್ಭವ ಎಂಬ ಕಥಾನಕದ ಯಕ್ಷಗಾನ ಪ್ರದರ್ಶನ ಪ್ರಸ್ತುತಿಗೊಂಡಿತು.