HEALTH TIPS

ನಟ, ಶಾಸಕ ಮುಕೇಶ್​ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ! ಮಾಜಿ ಪತ್ನಿ ಸರಿತಾ ಹೇಳಿಕೆ ವೈರಲ್​

        ತಿರುವನಂತಪುರಂ: ಮಲಯಾಳಂ ಚಿತ್ರರಂಗದ ನಟ ಹಾಗೂ ಶಾಸಕ ಎಂ.ಮುಕೇಶ್ ಅವರ ಮಾಜಿ ಪತ್ನಿ ಹಾಗೂ ನಟಿ ಸರಿತಾ ಅವರ ಹಳೆಯ ಸಂದರ್ಶನದ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ಮತ್ತೆ ವೈರಲ್ ಆಗಿದೆ. ಹೇಮಾ ಸಮಿತಿ ವರದಿ ಬಿಡುಗಡೆಯಾದ ಬಳಿಕ ಮುಕೇಶ್​ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಕೇಳಿಬಂದ ಬೆನ್ನಲ್ಲೇ ಸರಿತಾ ಅವರ ಸಂದರ್ಶನದ ವಿಡಿಯೋ ತುಣುಕು ಜಾಲತಾಣದಲ್ಲಿ ಹರಿದಾಡುತ್ತಿದೆ.

        ಅಂದಹಾಗೆ ಕೇರಳದಲ್ಲಿ ಹೇಮಾ ಸಮಿತಿಯ ವರದಿ ಬಿಡುಗಡೆಯಾದ ಬೆನ್ನಲ್ಲೇ ಮಲಯಾಳಂ ಚಿತ್ರರಂಗದ ಕರಾಳ ಮುಖ ಒಂದೊಂದಾಗಿ ಕಳಚಿಕೊಳ್ಳತ್ತಿದೆ. ಅನೇಕ ನಟಿಯರು ತಾವು ಎದುರಿಸಿದ ಕಹಿ ಘಟನೆಗಳನ್ನು ಮಾಧ್ಯಮಗಳ ಮುಂದೆ ಬಹಿರಂಗಪಡಿಸುತ್ತಿದ್ದು, ಆರೋಪ-ಪ್ರತ್ಯಾರೋಪಗಳ ಸರಣಿ ಮುಂದುವರಿದಿದೆ. ಇತ್ತೀಚೆಗಷ್ಟೇ ಮಲಯಾಳಂ ನಟಿ ಮಿನು ಮುನೀರ್, ನನಗೂ ಈ ಲೈಂಗಿಕ ಕಿರುಕುಳದ ಅನುಭವ ಆಗಿದೆ ಎಂದು ಆರೋಪ ಮಾಡಿದ್ದಾರೆ. ಮುಕೇಶ್​, ಮಣಿಯನಪಿಳ್ಳ ರಾಜು, ಇಡವೆಲ ಬಾಬು ಮತ್ತು ಜಯಸೂರ್ಯ ಸೇರಿದಂತೆ ಒಟ್ಟು ನಾಲ್ವರಿಂದ ನಾನು ಲೈಂಗಿಕ ಕಿರುಕುಳ ಅನುಭವಿಸಿದ್ದೇನೆ ಎಂದು ದೂರು ನೀಡಿದ್ದಾರೆ. ಇದರ ಬೆನ್ನಲ್ಲೇ ಮುಕೇಶ್​ ವಿರುದ್ಧ ಮಾಜಿ ಪತ್ನಿ ಸರಿತಾ ಆಡಿದ ಮಾತುಗಳು ವೈರಲ್​ ಆಗಿವೆ.

          1987ರಲ್ಲಿ ಕೇರಳದಲ್ಲಿ ತೆರೆಕಂಡ ಪಿಸಿ 369 ಚಿತ್ರದಲ್ಲಿ ಒಟ್ಟಿಗೆ ನಟಿಸುವಾಗ ಸರಿತಾ ಮತ್ತು ಮುಕೇಶ್​ ಇಬ್ಬರೂ ಪ್ರೀತಿಯ ಬಲೆಯಲ್ಲಿ ಬಿದ್ದರು. ಬಳಿಕ ತನಿಯಾವರ್ತನಂ ಚಿತ್ರದ ನಂತರ ಮದುವೆಯಾದರು. ಇದಾದ ಬಳಿಕ ಸರಿತಾ ಅವರು ಚಲನಚಿತ್ರಗಳಲ್ಲಿ ಹೆಚ್ಚು ಸಕ್ರಿಯರಾಗಿರಲಿಲ್ಲ. ಕಾಲಾನಂತರದಲ್ಲಿ ವೈವಾಹಿಕ ಜೀವನದಲ್ಲಿ ಎದುರಾದ ಸಮಸ್ಯೆಗಳಿಂದ ಇಬ್ಬರೂ ಬೇರೆಯಾದರು. ಈ ಹಿಂದೆ ಸಂದರ್ಶನವೊಂದರಲ್ಲಿ ಸರಿತಾ ಅವರು ತಮ್ಮ ಮಾಜಿ ಪತಿ ಮುಕೇಶ್‌ರಿಂದ ಎದುರಿಸಿದ ಚಿತ್ರಹಿಂಸೆಗಳನ್ನು ಬಹಿರಂಗಪಡಿಸಿದ್ದರು. ಇದೀಗ ಮುಕೇಶ್​ ವಿರುದ್ಧ ಲೈಂಗಿಕ ಆರೋಪ ಕೇಳಿಬಂದಿರುವುದರಿಂದ ಸರಿತಾ ಸಂದರ್ಶನದ ತುಣುಕು ಮತ್ತೆ ವೈರಲ್​ ಆಗಿದೆ.

              ಮಧ್ಯರಾತ್ರಿಯಲ್ಲಿ ಆತ ಕುಡಿದು ಬರುತ್ತಿದ್ದನು. ನಾನು ಬಾಗಿಲು ತೆರೆದು ಸಹಜವಾಗಿಯೇ ಯಾಕೆ ತಡವಾಯಿತು ಕೇಳುತ್ತಿದ್ದೆ. ಆದರೆ, ಆತ ನನ್ನ ಕೂದಲನ್ನು ಹಿಡಿದು, ಅಡಿಗೆ ಕೋಣೆಗೆ ಎಳೆದೊಯ್ದು ನೆಲಕ್ಕೆ ನೂಕಿ ಕಾಲಿನಿಂದ ಒದೆಯುತ್ತಿದ್ದನು. ಮನೆಯ ಕೆಲಸದವರು ಇದ್ದರೂ ಕೂಡ ಅವರ ಮುಂದೆಯೇ ನನ್ನ ಮೇಲೆ ಹಲ್ಲೆ ಮಾಡುತ್ತಿದ್ದನು.

         ನಾನು ತುಂಬು ಗರ್ಭಿಣಿಯಾಗಿದ್ದಾಗ ನನ್ನ ಹೊಟ್ಟೆಯ ಮೇಲೂ ಒದ್ದಿದ್ದರು. ನನಗೆ ಅಳು ಬಂದಾಗ ನಾನೊಬ್ಬ ದೊಡ್ಡ ನಟಿಯೇ ಎಂಬ ಪ್ರಶ್ನೆ ನನ್ನಲ್ಲಿ ಮೂಡಿತ್ತು. ರಾತ್ರಿ ಕುಡಿದು ಬಂದು ಥಳಿಸುವುದು ಗಂಡನಿಗೆ ವಾಡಿಕೆಯಾಗಿತ್ತು. ಇಂತಹ ದೃಶ್ಯವನ್ನು ಸಿನಿಮಾದಲ್ಲಿ ಮಾತ್ರ ನೋಡಿದ್ದೆ. ಆದರೆ, ಜೀವನದಲ್ಲಿ ಈ ರೀತಿ ಆಗುತ್ತೆ ಅಂತ ನಾನು ಅಂದುಕೊಂಡಿರಲಿಲ್ಲ. ಇದನೆಲ್ಲ ಬೇರೆಯವರಿಗೆ ಹೇಳಿಕೊಳ್ಳಲು ಮುಜುಗರ ಆಯ್ತು. ಹೀಗಾಗಿ ಯಾರಿಗೂ ಹೇಳದೆ ಅದನ್ನೆಲ್ಲ ಮನಸ್ಸಿನಲ್ಲೇ ಇಟ್ಟುಕೊಂಡು ನೋವು ಅನುಭವಿಸಿದೆ.

              ಮುಕೇಶ್​ ಅವರ ತಂದೆಗೆ ನೀಡಿದ ಮಾತಿನ ಕಾರಣಕ್ಕಾಗಿ ನಾನು ಈ ವಿಚಾರವನ್ನು ಹೊರಗೆ ಹೇಳಲಿಲ್ಲ. ನನ್ನ ಮಗ ಸರಿಯಿಲ್ಲ ಎಂದು ನನಗೆ ಗೊತ್ತು. ಆದರೆ, ನಿಮ್ಮ ಕುಟುಂಬದ ವಿಚಾರ ಯಾವುದೇ ಪತ್ರಿಕೆಯಲ್ಲಿ ಬರಬಾರದು ಮತ್ತು ಸಹಿಸಿಕೊಳ್ಳಬೇಕು ಎಂದರು. ಅವರು ಸಾಯುವವರೆಗೂ ನಾನು ಅವರ ಭರವಸೆಯನ್ನು ಉಳಿಸಿಕೊಂಡೆ. 2011ರಲ್ಲಿ ಕೌಟುಂಬಿಕ ಹಿಂಸೆ ಅಡಿ ನಾನು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದೆ. ಇದಾದ ನಂತರ ನಾನು ಅನುಭವಿಸಿದ ಚಿತ್ರಹಿಂಸೆಯ ಬಗ್ಗೆ ಬಹಿರಂಗವಾಗಿ ಹೇಳಬಹುದು ಎಂದು ಭಾವಿಸಿದೆ ಎಂದು ಸರಿತಾ ಸಂದರ್ಶನದಲ್ಲಿ ಹೇಳಿದ್ದಾರೆ.

ಆ ಸಂದರ್ಭದಲ್ಲಿ ನನ್ನ ಮೌನವನ್ನು ಆಗಾಗ್ಗೆ ಕೆಲವರ ತಪ್ಪಾಗಿ ಅರ್ಥೈಸಿದರು ಎಂದು ಸರಿತಾ ನೋವು ತೋಡಿಕೊಂಡರು. 

ಏನಿದು ಹೇಮಾ ಸಮಿತಿ ವರದಿ?
ಮಲಯಾಳಂ ಚಿತ್ರರಂಗದ ಖ್ಯಾತ ನಟಿಯ ಮೇಲೆ 2017ರಲ್ಲಿ ನಡೆದ ಲೈಂಗಿಕ ದೌರ್ಜನ್ಯ ರಾಷ್ಟ್ರವ್ಯಾಪಿ ಭಾರಿ ಆಕ್ರೋಶಕ್ಕೆ ಕಾರಣವಾಯಿತು. ಇಂದಿಗೂ ಈ ಪ್ರಕರಣದ ವಿಚಾರಣೆ ನಡೆಯುತ್ತಲೇ ಇದೆ. ಈ ಪ್ರಕರಣ ಬೆನ್ನಲ್ಲೇ ನ್ಯಾಯಾಮೂರ್ತಿ ಕೆ. ಹೇಮಾ (ನಿವೃತ್ತ) ಅವರ ನೇತೃತ್ವದಲ್ಲಿ ಮಾಜಿ ಅಧಿಕಾರಿ ಕೆಬಿ ವಲ್ಸಲಕುಮಾರಿ ಮತ್ತು ಹಿರಿಯ ನಟಿ ಶಾರದಾ ಅವರನ್ನೊಳಗೊಂಡ ತ್ರಿಸದಸ್ಯ ಸಮಿತಿಯನ್ನು ಕೇರಳ ಸರ್ಕಾರ ರಚನೆ ಮಾಡಿತ್ತು. ಈ ಸಮಿತಿ 2019ರ ಡಿಸೆಂಬರ್​ನಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ನಾಲ್ಕೂವರೆ ವರ್ಷಗಳ ಬಳಿಕ ವರದಿಯನ್ನು ಸಾರ್ವಜನಿಕವಾಗಿ ಬಹಿರಂಗಗೊಳಿಸಿದ್ದು, ಮಲಯಾಳಂ ಚಿತ್ರರಂಗದ ಕರಾಳ ಮುಖ ಅನಾವರಣವಾಗಿದೆ. ಮಲಯಾಳಂ ಸಿನಿರಂಗದ ಒಂದೊಂದೆ ಕರಾಳ ಮುಖವಾಡ ಕಳಚಿ ಬೀಳುತ್ತಿದೆ. ಸಿನಿಮಾದಲ್ಲಿ ಮಾತ್ರವಲ್ಲದೆ ಎಲ್ಲ ಕ್ಷೇತ್ರಗಳಲ್ಲೂ ಲೈಂಗಿಕ ಶೋಷಣೆ ನಡೆಯುತ್ತಿದೆ. ಆದರೆ, ಸಿನಿಮಾರಂಗದಲ್ಲಿ ವ್ಯಾಪಕವಾಗಿದೆ ಎನ್ನುತ್ತಾರೆ ನೊಂದ ಮಹಿಳೆಯರು. ಸಿನಿಮಾದಲ್ಲಿ ಅವಕಾಶ ಬೇಕಾದರೆ ಕಾಮತೃಷೆ ತೀರಿಸಬೇಕು ಎನ್ನುತ್ತಾರೆ ನೊಂದ ಕಲಾವಿದೆಯರು. 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries