ವಯನಾಡಿನಲ್ಲಿ ಸಂಭವಿಸಿದ ಭೂಕುಸಿತದ ಬಗ್ಗೆ ಪರಿಸರ ವಿಜ್ಞಾನಿ ಮಾಧವ್ ಗಾಡ್ಗೀಳ್ ಸಂತಾಪ ವ್ಯಕ್ತಪಡಿಸಿದ್ದಾರೆ. ಈ ವಿಚಾರವಾಗಿ ಏನನ್ನೂ ಹೇಳುವ ಮನಸ್ಥಿತಿ ತನಗಿಲ್ಲ ಎಂದರು.
ಪ್ರಕೃತಿ ಶೋಷಣೆ, ಹವಾಮಾನ ವೈಪರೀತ್ಯದ ಜತೆಗೆ ಕೇರಳ ಇಂತಹ ದುರಂತ ಭೂಮಿಯಾಗಿ ಮಾರ್ಪಟ್ಟಿದ್ದು, ಪಶ್ಚಿಮ ಘಟ್ಟಗಳನ್ನು ಸಂರಕ್ಷಿಸದಿದ್ದರೆ ಕೇರಳ ಇನ್ನೂ ಹಲವು ಅನಾಹುತಗಳಿಗೆ ಸಾಕ್ಷಿಯಾಗಲಿದೆ ಎಂದರು.
ಕೇರಳದಲ್ಲಿ ಪದೇ ಪದೇ ಪ್ರಕೃತಿ ವಿಕೋಪ ಸಂಭವಿಸಿದ ಬಳಿಕ 13 ವರ್ಷಗಳ ಹಿಂದೆ ಮಾಧವ್ ಗಾಡ್ಗೀಳ್ ನೇತೃತ್ವದ ಸಮಿತಿ ಸಲ್ಲಿಸಿದ್ದ ವರದಿ ಕುರಿತು ಮತ್ತೊಮ್ಮೆ ಚರ್ಚೆ ನಡೆಯುತ್ತಿದೆ. ಅಂದು ಗಾಡ್ಗೀಳ್ ಅವರನ್ನು ತಿರಸ್ಕರಿಸಿದವರಿಗೆ ಇಂದು ಗಾಡ್ಗೀಳ್ ಹೇಳಿದ್ದು ಸರಿ ಎಂದು ಅರಿವಾಗಿದೆ.
2011ರಲ್ಲಿ ಗಾಡ್ಗೀಳ್ ವರದಿಯು ಪಶ್ಚಿಮ ಘಟ್ಟಗಳಲ್ಲಿ ಅನಿಯಂತ್ರಿತ ನಿರ್ಮಾಣದ ವಿರುದ್ಧ ಎಚ್ಚರಿಕೆ ನೀಡಲಾಗಿತ್ತು. ಆ ದಿನದ ಆ ವರದಿಯಲ್ಲಿ ಮೇಪಾಡಿಯಲ್ಲಿ ನಡೆಯುತ್ತಿರುವ ಪರಿಸರ ವಿರೋಧಿ ಚಟುವಟಿಕೆಗಳ ವಿರುದ್ಧ ಎಚ್ಚರಿಕೆ ನೀಡಿದ್ದು, ಇದೀಗ ಅನಾಹುತಕ್ಕೆ ಕಾರಣವಾಗಿದೆ. ವರದಿಯ ಪ್ರಕಾರ ಮುಂಡಕ್ಕೈ, ಚುರಲ್ಮಲ, ಅಟ್ಟಮಲ, ನೂಲ್ಪುಳ ಮತ್ತು ಮೆಪ್ಪಾಡಿ ಪರಿಸರ ಸೂಕ್ಷ್ಮ ಪ್ರದೇಶಗಳಾಗಿವೆ. ಆದರೆ ಅಂದಿನ ಕೇಂದ್ರ ಸರ್ಕಾರ ಈ ವರದಿಯನ್ನು ತಿರಸ್ಕರಿಸಿತ್ತು. ನಂತರ ಕಸ್ತೂರಿರಂಗನ್ ನೇತೃತ್ವದಲ್ಲಿ ಮತ್ತೊಂದು ಸಮಿತಿಯನ್ನು ನೇಮಿಸಲಾಯಿತು. ಕೇರಳದ ಪ್ರವಾಹದ ಹಿಂದೆ ಅನಿಯಂತ್ರಿತ ಭೂ ಒತ್ತುವರಿ, ಅರಣ್ಯನಾಶ ಮತ್ತು ಅವೈಜ್ಞಾನಿಕ ನಿರ್ಮಾಣ ಚಟುವಟಿಕೆಗಳು ಕಾರಣ ಎಂದು 2018 ರಲ್ಲಿ ಗಾಡ್ಗೀಳ್ ಹೇಳಿದ್ದರು.
ಸಾಮಾಜಿಕ ಜಾಲತಾಣಗಳಲ್ಲಿ ಗಾಡ್ಗೀಳ್ ವರದಿ ವ್ಯಾಪಕ ಚರ್ಚೆಗೆ ಗ್ರಾಸವಾಗಿರುವ ಮಧ್ಯೆ ಮುಖ್ಯಮಂತ್ರಿಗಳು ವ್ಯಂಗ್ಯವಾಡಿರುವರು. ಗಾಡ್ಗೀಳ್ ವರದಿಯು ಕೆಲವರು ಪ್ರತಿನಿತ್ಯ ಎತ್ತುತ್ತಿರುವ ವಿಚಾರ ಮಾತ್ರ. ಹವಾಮಾನ ವೈಪರೀತ್ಯದ ಭಾಗವಾಗಿ ಇಂತಹ ಅನಾಹುತಗಳು ನಡೆಯುತ್ತಿದ್ದು, ಸುಳ್ಳು ಪ್ರಚಾರ ಮಾಡಬಾರದು ಎಂದು ಮುಖ್ಯಮಂತ್ರಿ ಹೇಳಿರುವರು.