ಬದಿಯಡ್ಕ: ಸಮಾಜದ ಚಿಂತನೆಗಳು ನಮ್ಮ ಮಕ್ಕಳಿಗೆ ತಲುಪಬೇಕು. ಹಿಂದೂಸಮಾಜವು ವಿಶಾಲ ದೃಷ್ಟಿಕೋನವನ್ನು ಜಗತ್ತಿಗೆ ನೀಡಿದೆ. ಎಲ್ಲರಿಗೂ ಒಳಿತಾಗಲಿ ಎಂಬ ಭಾವನೆಯಿಂದ ಪೂಜಿಸುವ ಶ್ರೇಷ್ಠ ಧರ್ಮದ ಪರಂಪರೆಯನ್ನು ಸಮರ್ಥವಾಗಿ ಮುನ್ನಡೆಸಿಕೊಂಡು ಹೋಗಬೇಕು ಎಂದು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ ಭಟ್ ಕಲ್ಲಡ್ಕ ಹೇಳಿದರು.
ಜಗದ್ಗುರು ಶಂಕರಾಚಾರ್ಯ ಸಂಸ್ಥಾನ ಶ್ರೀ ಎಡನೀರು ಮಠದಲ್ಲಿ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರ ಚತುರ್ಥ ಚಾತುರ್ಮಾಸ್ಯದಂಗವಾಗಿ ಡಾ. ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ ಇದರ ಸೇವಾ ರೂಪದಲ್ಲಿ ಶನಿವಾರ ಆರಂಭವಾದ ಶ್ರೀಮದ್ ದೇವಿ ಭಾಗವತ ನವಾಹ ಮತ್ತು ಯಕ್ಷಗಾನ ತಾಳಮದ್ದಲೆ ನವಾಹ ಕಾರ್ಯಕ್ರಮವನ್ನು ದೀಪಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ಮಕ್ಕಳಿಗೆ ನಮ್ಮ ಚಿಂತನೆಯನ್ನು ರವಾನಿಸುವ ಕಾರ್ಯ ಆಗಬೇಕು. ಜಗತ್ತಿನ ಹಿತವನ್ನು ಬಯಸಿ ದೇವತಾಪೂಜೆ ನಡೆಯುತ್ತಿದೆ. ಈ ನಿಟ್ಟಿನಲ್ಲಿ ಪೂಜ್ಯ ಸ್ವಾಮೀಜಿಯರು ಕಾರ್ಯತತ್ಪರರಾಗಿದ್ದಾರೆ ಎಂದರು.
ಅಭ್ಯಾಗತರಾಗಿ ವಿದ್ವಾನ್ ಪಂಜ ಭಾಸ್ಕರ ಭಟ್ ಮಾತನಾಡಿ ದೇವಿ ಭಾಗವತ ನವಾಹ ಪದ್ಧತಿ ಹಿಂದಿನಿAದಲೂ ನಡೆದುಕೊಂಡು ಬಂದಿದೆ. ಗಂಗಾದಿ ದಿವ್ಯ ನದಿಗಳ ಸಂರಕ್ಷಣೆ ಆಗಬೇಕು ಎಂದು ದೇವಿ ಭಾಗವತ ನಮಗೆ ಉಪದೇಶಿಸುತ್ತದೆ. ದೇವಿ ಭಾಗವತದಿಂದ ನಮ್ಮ ಜೀವನದಲ್ಲಿ ನಿರಂತರವಾಗಿ ಧಾರ್ಮಿಕ ಸತ್ಪೇರಣೆ ಲಭಿಸಲಿ. ದೊಡ್ಡ ದೊಡ್ಡ ಮರಗಳು, ಹರಿಯುವ ನದಿಗಳು, ಗಿರಿಬೆಟ್ಟ ಗುಡ್ಡಗಳು ಈ ಮೂರರಲ್ಲೂ ಭಗವಂತನ ಸನ್ನಿಧಾನವಿದೆ. ಇದನ್ನು ಯಾವ ಕಾರಣದಿಂದಲೂ ಎಚ್ಚರ ತಪ್ಪಿ ಉಪಯೋಗಿಸಬಾರದು ಎಂಬ ಸಂದೇಶ ವೇದದಲ್ಲಿದೆ. ಪ್ರಕೃತಿಯನ್ನು ದುರುಪಯೋಗಪಡಿಸಿಕೊಂಡರೆ ಏನು ಎಂಬುದು ನಮ್ಮ ಕಣ್ಣಮುಂದಿದೆ. ಮೂಲಪ್ರಕೃತಿ ಸ್ವರೂಪದಲ್ಲಿ ದೇವಿ ಸನ್ನಿಹಿತಳಾಗಿದ್ದಾಳೆ. ವೈದ್ಯಕೀಯ ಶಾಸ್ತçದಲ್ಲಿ ಚಿಕಿತ್ಸೆಯನ್ನು ಮಾಡುವುದಕ್ಕಿಂತ ಮುಂಚೆ ಹೃದಯಬಡಿತವನ್ನು ನೋಡಿಕೊಂಡು ಚಿಕಿತ್ಸಾ ಪ್ರವೃತ್ತಿಯನ್ನು ನಡೆಸುತ್ತಾರೋ ಅದೇ ರೀತಿ ಎಲ್ಲಾ ರೀತಿಯ ಮಂತ್ರಾನುಷ್ಠಾನಗಳಿಗೆ ಜೀವಚೈತನ್ಯವನ್ನು ಮಂತ್ರಾತ್ಮಕವಾದ ಹೃದಯಮಂತ್ರ ಜಾಗೃತಗೊಳಿಸುತ್ತದೆ. ದೇವೀ ಭಾಗವತ ವಾಚನ ಪ್ರವಚನ, ಯಕ್ಷಗಾನ ತಾಳಮದ್ದಳೆ ಮೂಲಕ ಭಗವಂತನ ಆರಾಧನೆ ನಡೆಯುತ್ತಿದೆ. ಅಕ್ಷರಾಭ್ಯಾಸ ವಿದ್ಯಾರ್ಜನೆ ಇಲ್ಲದವರಿಗೂ ಧಾರ್ಮಿಕವಾಗಿ ಜೀವನರೂಪಿಸಿಕೊಳ್ಳುವಲ್ಲಿ ಯಕ್ಷಗಾನ ಪ್ರದರ್ಶನಗಳು ಪರಿಣಾಮಕಾರಿ. ಚಾತುರ್ಮಾಸ್ಯ ಜಪತಪಗಳಿಗೆ ಮಾತ್ರ ಸೀಮಿತವಾಗದೆ ಜನಸಾಮಾನ್ಯರಿಗೆ ಜೀವನದ ಮೌಲ್ಯಗಳನ್ನು ನೀಡುವಲ್ಲಿ ಕಾರಣವಾಗಿದೆ ಎಂದರು.
ಡಾ. ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನದ ಡಾ. ಟಿ . ಶಾಮ್ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಆಶೀರ್ವಚನ ನೀಡಿ ಪುರಾಣಗಳ ಸತ್ವವನ್ನು ತಿಳಿಸುವ ಮಾಧ್ಯಮವಾಗಿ ಯಕ್ಷಗಾನ ಕಲೆಯಿದೆ. ಪುರಾಣಗಳು ಬಹಳಷ್ಟು ಸಂದೇಶಗಳನ್ನು ನಮಗೆ ನೀಡಿದೆ. ಅತಿವೃಷ್ಠಿಯ ಸಂದರ್ಭದಲ್ಲಿ ಗೋವರ್ಧನ ಪರ್ವತವನ್ನೆತ್ತಿ ಶ್ರೀಕೃಷ್ಣನು ಗೋವುಗಳನ್ನು, ಗೋಪಾಲಕರನ್ನು ರಕ್ಷಿಸಿದ್ದಾನೆ. ಆದರೆ ಇಂದು ನಾವು ಪ್ರಕೃತಿಯ ವಿರುದ್ಧವಾಗಿ ಹೋದ ಕಾರಣ ಪ್ರಕೃತಿಯೇ ನಮಗೆ ಮುನಿದಿದೆ. ಸರ್ಕಾರಗಳು ಇಂತಹ ಅನಾಹುತಗಳನ್ನು ತಡೆಗಟ್ಟುವಲ್ಲಿ ಕಾಳಜಿವಹಿಸಬೇಕು. ಪ್ರಕೃತಿಯನ್ನು ನಾವು ಪ್ರೀತಿಸಿದರೆ ಪ್ರಕೃತಿ ನಮ್ಮ ರಕ್ಷಿಸುತ್ತದೆ ಎಂದರು.
ವಿದ್ವಾನ್ ಹಿರಣ್ಯ ವೆಂಕಟೇಶ್ವರ ಭಟ್ ಸ್ವಾಗತಿಸಿ ಶ್ರೀರಂಗಾ ಭಟ್ ನಿರೂಪಿಸಿ, ವಂದಿಸಿದರು. ಬಳಿಕ ಕಾರ್ತವೀರಾರ್ಜುನ ಕಾಳಗ ಎಂಬ ಪೌರಾಣಿಕ ಕಥಾ ಭಾಗದ ಯಕ್ಷಗಾನ ತಾಳಮದ್ದಳೆ ನೆರವೇರಿತು. ವಿಟ್ಲ ಶಂಭು ಶರ್ಮ, ಉಜಿರೆ ಅಶೋಕ ಭಟ್, ವಿನಾಯಕ ಭಟ್ ಗಾಳಿಮನೆ, ಸೀತಾರಾಮ ಕುಮಾರ್ ಕಟೀಲು, ಸೂರಿಕುಮೇರಿ ಕೆ.ಗೋವಿಂದ ಭಟ್, ಗ. ನಾ ಭಟ್ ಮೈಸೂರು ಮುಮ್ಮೇಳದಲ್ಲಿ ಸಹಕರಿಸಿದರು. ಹಿಮ್ಮೇಳದಲ್ಲಿ ಸತ್ಯನಾರಾಯಣ ಪುಣಿಂಚಿತಾಯ, ಅಮೃತ ಆಡಿಗ, ಶ್ರೀಧರ ವಿಟ್ಲ, ಕೌಶಿಕ ರಾವ್ ಪುತ್ತಿಗೆ, ನಿಶ್ವಿತ್ ಜೋಗಿ ಜೋಡುಕಲ್ಲು ಜೊತೆಗೂಡಿದರು. ಇದೇ ಸಂದರ್ಭದಲ್ಲಿ ಇತ್ತೀಚೆಗೆ ವಯನಾಡಿನಲ್ಲಿ ಪ್ರಾಕೃತಿಕ ವಿಕೋಪಕ್ಕೆ ಸಿಲುಕಿ ಮೃತಪಟ್ಟವರ ಸದ್ಗತಿಗಾಗಿ ಸಾಮೂಹಿಕ ಪ್ರಾರ್ಥನೆಯನ್ನು ಸಲ್ಲಿಸಲಾಯಿತು.