HEALTH TIPS

''ಎಲ್ಲವನ್ನೂ ಕಳೆದುಕೊಂಡಿದ್ದೇನೆ.. ನಮಗೇನೂ ಮಾಡಬೇಡ..''; ಭೂ ಕುಸಿತದ ವೇಳೆ ಕಾಡಿನಲ್ಲಿ ವೃದ್ಧೆ-ಮೊಮ್ಮಗಳ ರಕ್ಷಕನಾದ ಗಜರಾಜ

ವಯನಾಡು: ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೀಕರ ಭೂಕುಸಿತ ಸಂದರ್ಭದಲ್ಲಿ ಪ್ರವಾಹದಿಂದ ತಪ್ಪಿಸಿಕೊಳ್ಳಲು ಕಾಡಿಗೆ ಹೋದ ಅಜ್ಜಿ ಮತ್ತು ಮೊಮ್ಮಗಳನ್ನು ಕಾಡಾನೆಗಳು ರಕ್ಷಣೆ ಮಾಡಿರುವ ರೋಚಕ ಘಟನೆ ವರದಿಯಾಗಿದೆ.

ಹೌದು.. ದೇವರನಾಡು ಕೇರಳದ ಚ್ಚ ಹಸಿರಿನಿಂದ ಪ್ರವಾಸಿಗರನ್ನು ಸೆಳೆಯುತ್ತಿದ್ದ ವಯನಾಡು ಕಳೆದವಾರ ಸಂಭವಿಸಿದ ಭೀಕರ ಭೂಕುಸಿತ ಅಕ್ಷರಶಃ ಸ್ಮಶಾನವಾಗಿ ಮಾರ್ಪಟ್ಟಿದ್ದು, ಜುಲೈ 30 ರಂದು ಭಾರೀ ಮಳೆಯಿಂದ ಉಂಟಾದ ಭೂಕುಸಿದದಿಂದಾಗಿ 300 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಸಾವಿರಾರು ಜನರು ನಿರಾಶ್ರಿತರು ಕುಟುಂಬಸ್ಥರು, ಮನೆ, ಆಸ್ತಿ-ಪಾಸ್ತಿ ಎಲ್ಲವನ್ನೂ ಕಳೆದುಕೊಂಡು ಅನಾಥರಾಗಿದ್ದು, ಅವಶೇಷಗಳಡಿಯಲ್ಲಿ ಇನ್ನೂ ನೂರಾರು ಮಂದಿ ಸಿಲುಕಿದ್ದಾರೆ.

ಏತನ್ಮಧ್ಯೆ ಇದೇ ವಯನಾಡಿನಲ್ಲಿ ಪ್ರವಾಹದಿಂದ ಕಾಡಿಗೆ ಓಡಿ ಬಂದಿದ್ದ ಅಜ್ಜಿ ಮತ್ತು ಮೊಮ್ಮಗಳನ್ನು ಅಲ್ಲಿನ ಕುಖ್ಯಾತ ಕಾಡಾನೆ ''ಕೊಂಬನ್'' ಮತ್ತು ತಂಡ ರಕ್ಷಣೆ ಮಾಡಿದ ಘಟನೆ ವರದಿಯಾಗಿದೆ. ಕೇರಳದ ಸ್ಥಳೀಯ ಮಾಧ್ಯಮದಲ್ಲಿ ವರದಿಯಾದ ಅಜ್ಜಿ, ಮೊಮ್ಮಗಳ ಈ ಕಥೆ ಇದೀಗ ಸೋಶಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ.

ಅಜ್ಜಿ, ಮೊಮ್ಮಗಳ ಜೀವ ರಕ್ಷಣೆಗೆ ಕಾವಲಾಗಿ ನಿಂತ ಆನೆ ಪಡೆ

ವಯನಾಡಿನ ಮುಂಡಕೈನ ನಿವಾಸಿ ಟೀ ಎಸ್ಟೇಟ್‌ನ ಕೆಲಸಗಾರ್ತಿಯಾದ ಸುಜಾತ ಎಂಬ ವೃದ್ದೆ ತನ್ನ ಮೊಮ್ಮಗಳೊಂದಿಗೆ ಜುಲೈ 30ರಂದು ಮನೆಯಲ್ಲಿದ್ದಾಗ ರಾತ್ರಿ ಭಾರಿ ಮಳೆ ನಡುವೆ ದೊಡ್ಡ ಶಬ್ಧ ಕೇಳಿಬಂದಿದೆ. ಈ ವೇಳೆ ಎಚ್ಚೆತ್ತ ಅಜ್ಜಿ ಮನೆಯಿಂದ ಹೊರಗೆ ನೋಡಿದಾಗ ಪ್ರವಾಹದ ನೀರು ಇಡೀ ಊರನ್ನು ಕೊಚ್ಚಿಕೊಂಡು ಹೋಗುತ್ತಿದ್ದನ್ನು ನೋಡಿದ್ದಾರೆ. ಕೂಡಲೇ ಅಜ್ಜಿ ಉಟ್ಟ ಬಟ್ಟೆಯೊಡನೆ ತಮ್ಮ ಮೊಮ್ಮಗಳೊಂದಿಗೆ ಎತ್ತರದ ಕಾಡಿನ ಪ್ರದೇಶಕ್ಕೆ ಓಡಿದ್ದಾರೆ.

ಈ ವೇಳೆ ಕಾಡಿನಲ್ಲಿ ಅವರಿಗೆ ಕೇರಳದ ಕುಖ್ಯಾತ ''ಕೊಂಬನ್'' ಆನೆ ಮತ್ತು ತಂಡ ಎದುರಾಗಿದೆ. ಆನೆಯನ್ನು ಕಂಡ ಕೂಡಲೇ ಕಣ್ಣೀರು ಹಾಕಿದ ವೃದ್ಧ ಸುಜಾತ ತನ್ನ ಮನೆ-ಆಸ್ತಿ ಸರ್ವಸ್ವವನ್ನೂ ಕಳೆದುಕೊಂಡಿದ್ದೇನೆ. ನಮ್ಮನ್ನು ಏನೂ ಮಾಡಬೇಡ ಎಂದು ಕೈ ಮುಗಿದು ಕೇಳಿಕೊಂಡಿದ್ದಾರೆ.

ಅಚ್ಚರಿ ಎಂದರೆ ಕಾಡಾನೆ ಕೊಂಬನ್ ಮತ್ತು ತಂಡ ಈ ವೇಳೆ ಅಜ್ಜಿ ಮತ್ತು ಮೊಮ್ಮಗಳಿಗೆ ಏನೂ ಮಾಡಿಲ್ಲ. ಅಲ್ಲದೆ ಬೆಳಗಿನ ಜಾವದವರೆಗೂ ಅವರಿರುವ ಸ್ಥಳದಲ್ಲೇ ಇದ್ದು ಬೆಳಗ್ಗೆ 6ಗಂಟೆ ಸುಮಾರಿನಲ್ಲಿ ಹೋರಟು ಹೋಗಿವೆ. ಬಳಿಕ ರಕ್ಷಣಾ ತಂಡ ಬಂದು ಸುಜಾತ ಮತ್ತು ಅವರ ಮೊಮ್ಮಗಳನ್ನು ರಕ್ಷಣೆ ಮಾಡಿವೆ. ನಿರಾಶ್ರಿತ ಶಿಬಿರದ ಬಳಿ ವೃದ್ಧೆ ಸುಜಾತ ತಮಗಾದ ಕರಾಳ ಅನುಭವವನ್ನು ಮತ್ತು ಆನೆಗಳ ಕಾರ್ಯವನ್ನು ಹೇಳಿಕೊಂಡು ಕಣ್ಣೀರು ಹಾಕಿದ್ದಾರೆ.

ಸೋಮವಾರ ರಾತ್ರಿ 4 ಗಂಟೆಗೆ ಮಳೆ ಜೋರಾಗಿತ್ತು. ಮಧ್ಯರಾತ್ರಿ ಸರಿಸುಮಾರು 1 ಗಂಟಗೆಗೆ ಎಚ್ಚರ ಆಗಿತ್ತು. ದೊಡ್ಡ ಶಬ್ದವೊಂದು ಕೇಳುತ್ತಿದ್ದಂತೆ ನಮ್ಮ ಮನೆಗೆ ನೀರು ನುಗ್ಗಿತ್ತು. ನಾವೆಲ್ಲ ಏನಾಗುತ್ತಿದೆ ಎಂದು ಯೋಚನೆ ಮಾಡುವಷ್ಟರಲ್ಲಿ ನೆರೆಹೊರೆಯವರ ಮನೆಯ ವಸ್ತುಗಳು ಹಾಗೂ ಮರ, ಮಣ್ಣು ಮನೆಯ ಮೇಲೆ ಬಂದು ಬಿದ್ದವು. ನಮ್ಮ ಮೇಲೆ ಮನೆಯೂ ಕುಸಿದು ಬಿತ್ತು. ನಾನು ಇಟ್ಟಿಗೆ ರಾಶಿಯನ್ನು ಜಾಗ ಮಾಡಿಕೊಂಡು ಮಗಳು, ಮೊಮ್ಮಗಳು ಅಳಿಯ ಎಲ್ಲರೂ ಹೊರಗೆ ಬಂದು ಬೆಟ್ಟದ ಕಡೆ ಓಡ ತೊಡಗಿದೆವು ಎಂದು ಹೇಳುತ್ತಾ ಕಣ್ಣೀರು ಹಾಕಿದ್ದಾರೆ.

ಅಲ್ಲದೆ, ''ಅಲ್ಲಿಂದ ತಪ್ಪಿಸಿಕೊಂಡು ಕಾಡಿನ ಕಡೆಗೆ ಬಂದರೆ ಅಲ್ಲಿ ನಮಗೆ ಎದುರಾಗಿ ನಿಂತವನೇ ಗಜರಾಜ. ನಮ್ಮ ಜೀವ ಮತ್ತೆ ಹೋದಂತೆ ಆಗಿತ್ತು. ದೊಡ್ಡ ದುರಂತದಿಂದ ತಪ್ಪಿಸಿಕೊಂಡು ಬಂದಿದ್ದೀವಿ. ನೀನು ನಮಗೇನೂ ಮಾಡಬೇಡಪ್ಪಾ. ಕತ್ತಲೂ ಇದೆ, ಎಲ್ಲವನ್ನೂ ಕಳೆದುಕೊಂಡು ಬಂದಿದ್ದೇವೆ ಎಂದು ನಾನು ಆನೆಯ ಮುಂದೆ ನಿಂತು ಕಣ್ಣೀರು ಹಾಕಿದೆ.

ಈ ವೇಳೆ ಆನೆಯ ಕಣ್ಣಿನಿಂದಲೂ ನೀರು ಬಂತು. ರಾತ್ರಿ ಬೆಳಗಾಗುವವರೆಗೆ ನಾವು ಆನೆಯ ಕಾಲ ಹತ್ತಿರವೇ ಸಮಯ ಕಳೆದವು. ಬೆಳಗ್ಗೆ 6 ಗಂಟೆಯಾದಾಗ ಎಲ್ಲಿಂದಲೋ ಜನರು ಬಂದರು. ನಮ್ಮನ್ನು ಕಾಪಾಡಲು ಸಮ್ಮ ಊರಿನವರು ಯಾರೂ ಬದುಕುಳಿದಿರಲಿಲ್ಲ. ಆ ಮೇಲೆ ದೂರದೂರಿನಿಂದ ಬಂದ ಜನರು ನಮ್ಮನ್ನು ಕಾಪಾಡಿ ಸುರಕ್ಷಿತ ಜಾಗಕ್ಕೆ ತಲುಪಿಸಿದರು ಎಂದು ಹೇಳುತ್ತಾ ಸುಜಾತ ಅವರು ಮೂಕ ಪ್ರಾಣಿಯ ಮಾನವೀಯತೆ ನೆನೆದು ಬಿಕ್ಕಿಬಿಕ್ಕಿ ಅತ್ತರು.

ಮೂರು ಆನೆ ಆ ಬೆಟ್ಟದಲ್ಲಿತ್ತು. ನಮ್ಮ ಬಳಿ ನಿಂತಿದ್ದು ಗಂಡಾನೆ. ಅಲ್ಲಿದ್ದದ್ದು ನಾನು ಮತ್ತು ಮೊಮ್ಮಗಳು ಮಾತ್ರ. ಮಗಳು ಗಾಯವಾಗಿ ಕಾಫಿ ತೋಟದಲ್ಲಿ ಮಲಗಿದ್ದಳು. ಅಳಿಯ ಬಾಕಿ ಉಳಿದವರನ್ನು ಕಾಪಾಡಲು ಓಡುತ್ತಿದ್ದ. ಪ್ರಾಣಾಪಾಯವೇನೂ ಸಂಭವಿಸಿಲ್ಲ. ನನ್ನ ಮಕ್ಕಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಸಂತ್ರಸ್ತ ಮಹಿಳೆ ತನಗಾದ ಅನುಭವ ಹಂಚಿಕೊಂಡಿದ್ದಾರೆ.

ಕೇರಳದಲ್ಲಿ ಭಾರಿ ಕುಖ್ಯಾತಿ ಪಡೆದಿರುವ ಕೊಂಬನ್ ಆನೆ

ಅಂದಹಾಗೆ ನಮ್ಮ ಕರ್ನಾಟಕದ ಚಿಕ್ಕಮಗಳೂರು-ಹಾಸನ-ಸಕಲೇಶಪುರದಲ್ಲಿ ಭೀಮಾ ಕಾಡಾನೆ ಹೇಗೆ ಖ್ಯಾತಿ ಪಡೆದಿದೆಯೋ ಅಂತೆಯೇ ಅತ್ತ ಕೇರಳದಲ್ಲೂ ಕೊಂಬನ್ ಆನೆ ಕೂಡ ತನ್ನ ಪುಂಡಾಟದಿಂದ ವ್ಯಾಪಕ ಕುಖ್ಯಾತಿ ಪಡೆದಿದೆ. ಸಾಕಷ್ಟು ತೋಟ-ಎಸ್ಟೇಟ್ ಗಳನ್ನು ಹಾಳು ಮಾಡಿರುವ ಕೊಂಬನ್ ಮತ್ತು ತಂಡ ಸ್ಥಳೀಯರಿಗೆ ಮಾತ್ರ ಅಚ್ಚು ಮೆಚ್ಚು. ಆದರೆ ಈ ಸಂಕಷ್ಟದ ಸಮಯದಲ್ಲಿ ಆಶ್ರಯ ಕೇಳಿ ಬಂದ ವೃದ್ಧೆ ಮತ್ತು ಮೊಮ್ಮಗಳನ್ನು ರಕ್ಷಿಸುವ ಮೂಲಕ ತಾನೂ ಕೂಡ ಭಾವನಾ ಜೀವಿ ಎಂಬುದನ್ನು ಸಾಬೀತು ಪಡಿಸಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries