ಬದಿಯಡ್ಕ: ಬದಿಯಡ್ಕದ ಪ್ರಸಿದ್ಧ ಜನಪರ ವೈದ್ಯ ಡಾ. ಶ್ರೀನಿಧಿ ಸರಳಾಯ ಅವರು ಕಳೆದ ಅನೇಕ ವರ್ಷಗಳಿಂದ ಆಟಿ ಅಮಾವಾಸ್ಯೆಯಂದು ತಮ್ಮ ಶ್ರೀನಿಧಿ ಚಿಕಿತ್ಸಾಲಯದಲ್ಲಿ ಉಚಿತವಾಗಿ ಆಟಿಕಷಾಯ ವಿತರಣೆಯನ್ನು ನಡೆಸುತ್ತಿದ್ದು, ಈ ಬಾರಿಯೂ ಊರಿನ ಅನೇಕರು ಬೆಳಗಿನ ಜಾವದಲ್ಲಿ ಬಂದು ಆಟಿಕಷಾಯವನ್ನು ಸೇವಿಸಿದರು.
ಡಾ. ಬೇ.ಸೀ. ಗೋಪಾಲಕೃಷ್ಣ ಭಟ್ ಕಷಾಯ ವಿತರಣೆಗೆ ಚಾಲನೆಯನ್ನು ನೀಡಿ ಮಾತನಾಡಿ ಜನರ ಆರೋಗ್ಯದ ವಿಚಾರದಲ್ಲಿ ವಿಶೇಷ ಕಾಳಜಿಯನ್ನು ವಹಿಸಿ ಓರ್ವ ವೈದ್ಯನಾಗಿ ತನ್ನ ಕರ್ತವ್ಯವನ್ನು ಸಮರ್ಥವಾಗಿ ನಿಭಾಯಿಸುತ್ತಿರುವ ಶ್ರೀನಿಧಿ ಸರಳಾಯರು ನಮ್ಮೆಲ್ಲರ ನೆಚ್ಚಿನ ವೈದ್ಯರಾಗಿದ್ದಾರೆ. ಅವರ ನಿಸ್ವಾರ್ಥ ಸೇವೆಗೆ ಬೆಲೆಕಟ್ಟಲಾಗದು ಎಂದರು. ಉಪ್ಲೇರಿ ಶ್ರೀ ಮಂತ್ರಮೂರ್ತಿ ಗುಳಿಗ ಸನ್ನಿಧಿಯ ಪ್ರಧಾನ ಕರ್ಮಿ ಗೋಪಾಲಕೃಷ್ಣ ಕುಲಾಲ್ ವಾಂತಿಚ್ಚಾಲು ಸ್ವಾಗತಿಸಿ, ಜಗದೀಶ್ ವಂದಿಸಿದರು.
ಅಭಿಮತ:
ಊರಿನ ಜನರ ಪ್ರೀತಿ ವಿಶ್ವಾಸವು ಉತ್ತಮ ಕಾರ್ಯಗಳಿಗೆ ಪ್ರೇರಣೆಯನ್ನು ನೀಡುತ್ತದೆ. ನಾಡಿನ ಜನರಿಗೆ ಯಾವಾಗಲೂ ಉತ್ತಮ ಆರೋಗ್ಯ ಪ್ರಾಪ್ತಿಯಾಗಬೇಕು ಎಂಬುದೇ ನಮ್ಮ ಪ್ರಾರ್ಥನೆ.
- ಡಾ. ಶ್ರೀನಿದಿ ಸರಳಾಯ ಬದಿಯಡ್ಕ