ಮುಳ್ಳೇರಿಯ: ಯಕ್ಷಗಾನ ಕಲಾವಿದರೂ ಕೀರಿಕ್ಕಾಡು ಮಾಸ್ತರರ ಶಿಷ್ಯರೂ ಆಗಿದ್ದ ದೇಲಂಪಾಡಿ ಮಹಾಲಿಂಗ ಪಾಟಾಳಿಯವರ ೧೮ ನೇ ವರ್ಷದ ಸಂಸ್ಮರಣೆ ಆ. ೧೦ ರಂದು ಸಂಜೆ ೬. ರಿಂದ ದೇಲಂಪಾಡಿ ಬನಾರಿಯ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘದ ಕೀರಿಕ್ಕಾಡು ಮಾಸ್ತರ್ ವಿಷ್ಣು ಭಟ್ ಸ್ಮಾರಕ ಸಭಾಂಗಣದಲ್ಲಿ ನಡೆಯಲಿದೆ. ಇದೇ ಸಂದರ್ಭದಲ್ಲಿ ದೇಲಂಪಾಡಿ ಮಹಾಲಿಂಗ ಪಾಟಾಳಿ ಮತ್ತು ಸೀತಮ್ಮನವರ ಸ್ಮರಣಾರ್ಥವಾಗಿ ಕೊಡಮಾಡುವ ದೇಲಂಪಾಡಿ ಮಹಾಲಿಂಗ ಪಾಟಾಳಿ-ಸೀತಮ್ಮ ಸ್ಮೃತಿ ಪುರಸ್ಕಾರವನ್ನು ನಾಡಿನ ಹಿರಿಯ ವೈದ್ಯರೂ, ಕಲಾವಿದ, ಸಾಹಿತಿ ಡಾ. ರಮಾನಂದ ಬನಾರಿಯವರಿಗೆ ಪ್ರದಾನ ಮಾಡಲಾಗುವುದು.
ಶ್ರೀ ಗೋಪಾಲಕೃಷ್ಣ ದೇವರ ಪೂಜೆಯೊಂದಿಗೆ ಆರಂಭವಾಗುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯಕ್ಷಗಾನ ಕಲಾವಿದ, ನಿವೃತ್ತ ಮುಖ್ಯೋಪಾಧ್ಯಾಯ ದೇಲಂಪಾಡಿ ರಾಮಣ್ಣ ಮಾಸ್ತರ್ ವಹಿಸುವರು. ಲೇಖಕ, ಕಲಾವಿದ ಮತ್ತು ಉಪನ್ಯಾಸಕ ನಾರಾಯಣ ತೋರಣಗಂಡಿ ಅವರು ಸಂಸ್ಮರಣಾ ಭಾಷಣ ಮಾಡುವರು. ಸಭಾ ಕಾರ್ಯಕ್ರಮದ ಬಳಿಕ ಸಂಘ ಮತ್ತು ಅತಿಥಿ ಕಲಾವಿದರ ಕೂಡುವಿಕೆಯಿಂದ ಸೀತಾಪಹಾರ-ಜಟಾಯು ಮೋಕ್ಷ ಎಂಬ ಯಕ್ಷಗಾನ ತಾಳಮದ್ದಳೆ ನಡೆಯಲಿದೆ. ಕಾರ್ಯಕ್ರಮಕ್ಕೆ ಕಲಾಭಿಮಾನಿಗಳು ಮತ್ತು ಕಲಾವಿದರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಕಾರ್ಯಕ್ರಮದ ಸಂಘಟಕರಾದ ನಾರಾಯಣ ದೇಲಂಪಾಡಿಯವರು ಮಾಧ್ಯಮ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.