ತಿರುವನಂತಪುರಂ: ಮಹಿಳೆಯ ಮೇಲಿನ ದೌರ್ಜನ್ಯದ ವಿರುದ್ಧ ಸದಾ ಧ್ವನಿ ಎತ್ತುವ ನಟಿ ಪಾರ್ವತಿ ಥಿರುವೊತ್ತು ಅವರ ಯುಗದಲ್ಲಿ ಬದುಕುತ್ತಿರುವುದೇ ನಮ್ಮ ಪುಣ್ಯ ಎಂದು ಮಲಯಾಳಂ ನಟಿ ಮಾಲಾ ಪಾರ್ವತಿ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
ತಮ್ಮ ಇನ್ಸ್ಟಾಗ್ರಾಂನಲ್ಲಿ ಪಾರ್ವತಿ ಥಿರುವೊತ್ತು ಬಗ್ಗೆ ಬರೆದುಕೊಂಡಿರುವ ಮಾಲಾ ಪಾರ್ವತಿ, ನಮ್ಮ ಕಾಲಘಟ್ಟದಲ್ಲಿ ಇಂಥಾ ಗಟ್ಟಿ ಧ್ವನಿಗೆ ನಾವು ಸಾಕ್ಷಿಯಾಗಿರುವುದು ನಮಗೆ ಹೆಮ್ಮೆ ಅನಿಸುತ್ತಿದೆ.
ಪಾರ್ವತಿ ಅವರು ಪ್ರದರ್ಶಿಸಿರುವ ಧೈರ್ಯವನ್ನು ಸರಿಗಟ್ಟಲು ಯಾರಿಂದಲೂ ಸಾಧ್ಯವಿಲ್ಲ ಎಂದು ಭಾವಿಸುತ್ತೇನೆ. ಹಿರಿಯ ನಟಿ ಊರ್ವಶಿ ಅವರು ಕೂಡ ಪಾರ್ವತಿಯ ಪ್ರತಿಭೆ ಮತ್ತು ದೃಢತೆಯನ್ನು ಶ್ಲಾಘಿಸಿದರು. ಹೇಮಾ ಸಮಿತಿ ವರದಿಯನ್ನು ಉಲ್ಲೇಖಿಸಿ, ಈಗ ನಡೆಯುತ್ತಿರುವುದು ಸ್ವಾತಂತ್ರ್ಯ ಹೋರಾಟದಂತೆ ಭಾಸವಾಗುತ್ತಿದೆ ಎಂದಿರುವ ಮಾಲಾ ಪಾರ್ವತಿ, ನ್ಯಾಯದ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದರು ಮತ್ತು ತನಿಖೆಯು ಅದರ ಸರಿಯಾದ ಹಾದಿಯಲ್ಲಿ ಮುಂದುವರಿಯಬೇಕು ಎಂದರು.
ಸರ್ಕಾರಕ್ಕೆ ಪಾರ್ವತಿ ಒತ್ತಾಯ
ಕೇರಳದಲ್ಲಿ ಹೇಮಾ ಸಮಿತಿಯ ವರದಿ ಬಿಡುಗಡೆಯಾದ ಬೆನ್ನಲ್ಲೇ ಮಲಯಾಳಂ ಚಿತ್ರರಂಗದ ಕರಾಳ ಮುಖ ಒಂದೊಂದಾಗಿ ಕಳಚಿಕೊಳ್ಳತ್ತಿದೆ. ಅನೇಕ ನಟಿಯರು ತಾವು ಎದುರಿಸಿದ ಕಹಿ ಘಟನೆಗಳನ್ನು ಮಾಧ್ಯಮಗಳ ಮುಂದೆ ಬಹಿರಂಗಪಡಿಸುತ್ತಿದ್ದು, ಆರೋಪ-ಪ್ರತ್ಯಾರೋಪಗಳ ಸರಣಿ ಮುಂದುವರಿದಿದೆ. ಈ ವಿಚಾರವಾಗಿ ಪಾರ್ವತಿ ಥಿರುವೊತ್ತು ಕ್ರಮಕ್ಕೆ ಸರ್ಕಾರವನ್ನು ಆಗ್ರಹಿಸಿದ್ದಾರೆ. ಇಂತಹ ಆಘಾತಕಾರಿ ವರದಿಯ ಹೊರತಾಗಿಯೂ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳದಿದ್ದರೆ ತುಂಬಾ ಹಾನಿಯಾಗುತ್ತದೆ. ಸಾರ್ವಜನಿಕರು ಈ ಬಗ್ಗೆ ಎಲ್ಲವನ್ನು ಗಮನಿಸುತ್ತಿದ್ದಾರೆ. ಈ ವಿಚಾರದಲ್ಲಿ ಬಹುಶಃ ಸಿನಿಮಾದವರು ಮೌನವಾಗಿರಬಹುದು. ಆದರೆ ಸರ್ಕಾರವೂ ಮೌನವಾಗಿದ್ದರೆ ಅದು ದೊಡ್ಡ ಹಾನಿಯಾಗುತ್ತದೆ ಎಂದು ಪಾರ್ವತಿ ಧ್ವನಿ ಎತ್ತಿದ್ದಾರೆ.
ಕ್ರಮ ಕೈಗೊಳ್ಳಲೇ ಬೇಕು ಎಂದು ಪಾರ್ವತಿ ಸರ್ಕಾರದ ಮುಂದೆ ಗಟ್ಟಿಯಾಗಿ ಧ್ವನಿ ಎತ್ತಿದ್ದಾರೆ. ಬಹಳ ಹಿಂದಿನಿಂದಲೂ ಚಿತ್ರರಂಗದಲ್ಲಿ ನಡೆಯುತ್ತಿರುವ ಅನ್ಯಾಯದ ವಿರುದ್ಧ ಪಾರ್ವತಿ ಅನೇಕ ಬಾರಿ ಧ್ವನಿ ಎತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮಾಲಾ ಪಾರ್ವತಿ ಅವರು ಪಾರ್ವತಿ ಥಿರುವೊತ್ತು ಅವರನ್ನು ಕೊಂಡಾಡಿದ್ದಾರೆ. ಇನ್ನು ಹೇಮಾ ಸಮಿತಿ ವರದಿ ಬಿಡುಗಡೆ ಬಳಿಕ ಕೇರಳದ ಕಲಾವಿದರ ಸಂಘದಲ್ಲಿ ಸಾಕಷ್ಟು ಮಂದಿ ಸಾಲು ಸಾಲು ರಾಜೀನಾಮೆ ನೀಡುತ್ತಿದ್ದಾರೆ.
ಏನಿದು ಹೇಮಾ ಸಮಿತಿ ವರದಿ?
ಮಲಯಾಳಂ ಚಿತ್ರರಂಗದ ಖ್ಯಾತ ನಟಿಯ ಮೇಲೆ 2017ರಲ್ಲಿ ನಡೆದ ಲೈಂಗಿಕ ದೌರ್ಜನ್ಯ ರಾಷ್ಟ್ರವ್ಯಾಪಿ ಭಾರಿ ಆಕ್ರೋಶಕ್ಕೆ ಕಾರಣವಾಯಿತು. ಇಂದಿಗೂ ಈ ಪ್ರಕರಣದ ವಿಚಾರಣೆ ನಡೆಯುತ್ತಲೇ ಇದೆ. ಈ ಪ್ರಕರಣ ಬೆನ್ನಲ್ಲೇ ನ್ಯಾಯಾಮೂರ್ತಿ ಕೆ. ಹೇಮಾ (ನಿವೃತ್ತ) ಅವರ ನೇತೃತ್ವದಲ್ಲಿ ಮಾಜಿ ಅಧಿಕಾರಿ ಕೆಬಿ ವಲ್ಸಲಕುಮಾರಿ ಮತ್ತು ಹಿರಿಯ ನಟಿ ಶಾರದಾ ಅವರನ್ನೊಳಗೊಂಡ ತ್ರಿಸದಸ್ಯ ಸಮಿತಿಯನ್ನು ಕೇರಳ ಸರ್ಕಾರ ರಚನೆ ಮಾಡಿತ್ತು. ಈ ಸಮಿತಿ 2019ರ ಡಿಸೆಂಬರ್ನಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ನಾಲ್ಕೂವರೆ ವರ್ಷಗಳ ಬಳಿಕ ವರದಿಯನ್ನು ಸಾರ್ವಜನಿಕವಾಗಿ ಬಹಿರಂಗಗೊಳಿಸಿದ್ದು, ಮಲಯಾಳಂ ಚಿತ್ರರಂಗದ ಕರಾಳ ಮುಖ ಅನಾವರಣವಾಗಿದೆ. ಮಲಯಾಳಂ ಸಿನಿರಂಗದ ಒಂದೊಂದೆ ಕರಾಳ ಮುಖವಾಡ ಕಳಚಿ ಬೀಳುತ್ತಿದೆ. ಸಿನಿಮಾದಲ್ಲಿ ಮಾತ್ರವಲ್ಲದೆ ಎಲ್ಲ ಕ್ಷೇತ್ರಗಳಲ್ಲೂ ಲೈಂಗಿಕ ಶೋಷಣೆ ನಡೆಯುತ್ತಿದೆ. ಆದರೆ, ಸಿನಿಮಾರಂಗದಲ್ಲಿ ವ್ಯಾಪಕವಾಗಿದೆ ಎನ್ನುತ್ತಾರೆ ನೊಂದ ಮಹಿಳೆಯರು. ಸಿನಿಮಾದಲ್ಲಿ ಅವಕಾಶ ಬೇಕಾದರೆ ಕಾಮತೃಷೆ ತೀರಿಸಬೇಕು ಎನ್ನುತ್ತಾರೆ ನೊಂದ ಕಲಾವಿದೆಯರು.