ಪೆರ್ಲ: ಬ್ರಹ್ಮಶ್ರೀ ನಾರಾಯಣಗುರುಗಳ ಆದರ್ಶ ಪಾಲನೆಯಿಂದ ಸಾಮಾಜಿಕ ಪರಿವರ್ತನೆಗೆ ನಾಂದಿ ಹಾಡಲು ಸಾಧ್ಯ ಎಂಬುದಾಗಿ ಸಾಹಿತಿ ಕುಕ್ಕಾಜೆ ಶ್ರೀ ಕಾಳಿಕಾಂಬಾ ಆಂಜನೇಯ ದೇವಸ್ಥಾನದ ಮೊಕ್ತೇಸರ ಎಂ.ಕೆ ಕುಕ್ಕಾಜೆ ತಿಳಿಸಿದ್ದಾರೆ.
ಅವರು ಬ್ರಹ್ಮ ಶ್ರೀ ನಾರಾಯಣ ಗುರು ಬಿಲ್ಲವ ಸೇವಾ ಸಂಘ ಪೆರ್ಲ ಘಟಕ ವತಿಯಿಂದ ಮಂಗಳವಾರ ಪೆರ್ಲ ವ್ಯಾಪಾರಿ ಭವನದಲ್ಲಿ ನಡೆದ ಬ್ರಹ್ಮಶ್ರೀನಾರಾಯಣ ಗುರುಗಳ 170ನೇ ಜಯಂತಿ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದರು. ಶುದ್ಧಮನಸ್ಸಿನ ಪೂಜೆಯಿಂದ ದೇವರು ಸಂಪ್ರೀತನಾಗುತ್ತಾನೆ ಎಂಬುದಕ್ಕೆ ಬ್ರಹ್ಮಶ್ರೀ ನಾರಾಯಣಗುರುಗಳು ನಿದರ್ಶನ. ಕೇರಳ ಹಾಗೂ ಕರ್ನಾಟಕದಲ್ಲಿ 70ಕ್ಕೂ ಹೆಚ್ಚು ದೇಗುಲಗಳನ್ನು ಸ್ವತ: ಪ್ರತಿಷ್ಠಾಪಿಸುವ ಮೂಲಕ ಸಾಮಾಜಿಕ ಪುರುತ್ಥಾನ ಸಾಧಿಸಿದ್ದಾರೆ ಎಂದು ತಿಳಿಸಿದರು.
ಅಧ್ಯಕ್ಷ ಬಿ.ಪಿ ಶೇಣಿ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಪ್ರಾಂಶುಪಾಲ ಡಿ. ಸುನಿತ್ಕುಮಾರ್, ಎಣ್ಮಕಜೆ ಗ್ರಾಪಂ ಸದಸ್ಯ ನರಸಿಂಹ ಪೂಜಾರಿ ವಾಣೀನಗರ, ಬಿಲ್ಲವ ಸೇವಾ ಸಂಘ ಮಹಿಳಾ ಘಟಕ ಅಧ್ಯಕ್ಷೆ ರುಕ್ಮಿಣಿ ಉಪಸ್ಥಿತರಿದ್ದರು. ಈ ಸಂದರ್ಭ ಹಿರಿಯ ನಾಟಿ ವೈದ್ಯೆ ಪೊನ್ನಪ್ಪೆ ಖಂಡಿಗೆ ಹಾಗೂ ಯಶಸ್ವೀ ಮಹಿಳಾ ಉದ್ಯಮಿ ಯಶೋದಾ ಕಾನ ಅವರನ್ನು ಸನ್ಮಾನಿಸಲಾಯಿತು. ಅಮಿತಾ ಕಾಟುಕುಕ್ಕೆ ಹಾಗೂ ಚಿತ್ರಾ ಖಂಡಿಗೆ ಸನ್ಮಾನಪತ್ರ ವಾಚಿಸಿದರು. ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ 2023ನೇ ಸಾಲಿನ ಎಸ್ಸೆಸೆಲ್ಸಿ, ಪ್ಲಸ್ಟು ವಿಭಾಗದಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳು ಹಾಗೂ ಕ್ರೀಡೆ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಸೇವೆ ಸಲ್ಲಿಸಿದವರನ್ನು ಗೌರವಿಸಲಾಯಿತು. ಬ್ರಹ್ಮಶ್ರೀ ನಾರಾಯಣಗುರು ಬಿಲ್ಲವ ಮಹಿಳಾ ಸಮಿತಿ ಸದಸ್ಯೆಯರಿಂದ ಭಜನೆ ನಡೆಯಿತು.
ಪ್ರತೀಕ್ಷಾ ಬಜಕೂಡ್ಲು ಪ್ರಾರ್ಥನೆ ಹಾಡಿದರು. ಸಂಘದ ಕೋಶಾಧಿಕಾರಿ ಪದ್ಮನಾಭ ಸುವರ್ಣ ಸ್ವಾಗತಿಸಿದರು. ನಾರಾಯಣಪೂಜಾರಿ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಅಖಿಲೇಶ್ ಕಾನ ವಂದಿಸಿದರು.