ಕಾಸರಗೋಡು: ಚಿನ್ಮಯ ವಿದ್ಯಾಲಯ ಕಾಸರಗೋಡಿನಲ್ಲಿ ಸ್ವಾಮೀ ಚಿನ್ಮಯಾನಂದಜಿಯವರ ೩೧ನೇ ಮಹಾ ಸಮಾಧಿ ದಿನವನ್ನು ಆಚರಿಸಲಾಯಿತು. ಈ ಸುಸಂದರ್ಭದಲ್ಲಿ ಕೇರಳ ಚಿನ್ಮಯ ಮಿಷನಿನ ಮುಖ್ಯಸ್ಥ ಹಾಗೂ ಕಾಸರಗೋಡು ಚಿನ್ಮಯ ವಿದ್ಯಾಲಯದ ಅಧ್ಯಕ್ಷ ಸ್ವಾಮಿ ವಿವಿಕ್ತಾನಂದ ಸರಸ್ವತಿಯವರು ಮಾತನಾಡಿ, ಜೀವನದಲ್ಲಿ ಬಂದಿರುವ ಕಷ್ಟಗಳನ್ನು ಎದುರಿಸಿ ನಿಂತು ಅದರಲ್ಲಿ ಗೆದ್ದು ಬಂದ ಮಹಾನ್ ವ್ಯಕ್ತಿಯಾಗಿದ್ದಾರೆ ಚಿನ್ಮಯಾನಂದ ಸ್ವಾಮೀಜಿಯವರು. ಅವರ ಜೀವನ ಆದರ್ಶಗಳು ಎಲ್ಲರಿಗೂ ಮಾರ್ಗದರ್ಶನವಾಗಿದೆ ಎಂದು ನುಡಿದರು.
ಈ ಸಂದಭÀðದಲ್ಲಿ ಭಗವದ್ಗೀತೆ, ಗುರು ಸ್ತೋತ್ರ, ಗುರುಪಾದುಕ ಸ್ತೋತ್ರಗಳನ್ನು ಪಠಿಸಲಾಯಿತು. ಗುರುಪಾದುಕಾ ಪೂಜೆ ಮತ್ತು ಅಷ್ಟೋತ್ತರ ನಾಮಾರ್ಚನೆಯನ್ನು ಸ್ವಾಮಿ ವಿವಿಕ್ತಾನಂದ ಸರಸ್ವತಿಜಿಯವರು ನೆರವೇರಿಸಿದರು. ಬ್ರಹ್ಮಚಾರಿಣಿ ದಿಶಾ ಚೈತನ್ಯ ಪೂಜಾ ವಿಧಿಗಳನ್ನು ನೆರವೇರಿಸಿದರು. ವಿದ್ಯಾರ್ಥಿಗಳಿಂದ ನೃತ್ಯ ವೈವಿಧ್ಯ ಕಾರ್ಯಕ್ರಮವು ನಡೆಯಿತು.
ಮಕ್ಕಳ ಸೃಜನಶೀಲ ಬರವಣಿಗೆಯನ್ನು ಒಳಗೊಂಡ ಶಾಲಾ ವಾರ್ಷಿಕ ಪತ್ರಿಕೆಯಾದ `ಚಿನ್ಮಯಂ'ನ್ನು ಸ್ವಾಮಿ ವಿವಿಕ್ತಾನಂದ ಸರಸ್ವತಿಯವರು ಬಿಡುಗಡೆಗೊಳಿಸಿದರು. ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಸುನಿಲ್ ಕುಮಾರ್ ಕೆ.ಸಿ, ಉಪ ಪ್ರಾಂಶುಪಾಲ ಪ್ರಶಾಂತ ಬಿ, ಮುಖ್ಯೋಪಾಧ್ಯಾಯನಿರಾದ ಪೂರ್ಣಿಮಾ ಎಸ್.ಆರ್. ಮತ್ತು ಸಿಂಧು ಶಶಿಂದ್ರನ್, ಅಧ್ಯಾಪಕ ವೃಂದದವರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.