HEALTH TIPS

ಮಲಯಾಳ ನಾಡಲ್ಲಿ ಯಕ್ಷಗಾನದ ಕಂಪನ್ನು ಬೀರಿದ ಅಡ್ಕ ಗೋಪಾಲಕೃಷ್ಣ ಭಟ್ಟರಿಗೆ ಎಡನೀರು ಮಠದಲ್ಲಿ ರಾಮಕೃಷ್ಣ ರಾವ್ ಸ್ಮøತಿ ಗೌರವ ಇಂದು

             ಬದಿಯಡ್ಕ: ಹಿರಿಯ ಯಕ್ಷಗಾನ ಕಲಾವಿದ ಅಡ್ಕ ಗೋಪಾಲಕೃಷ್ಣ ಭಟ್ಟರಿಗೆ ಶ್ರೀ ರಾಮಕೃಷ್ಣ ರಾವ್ ಸ್ಮøತಿ ಗೌರವ ಪ್ರಧಾನ ಕಾರ್ಯಕ್ರಮ ಇಂದು ಗುರುವಾರ ಶ್ರೀ ಎಡನೀರು ಮಠದಲ್ಲಿ ಜರಗಲಿದೆ. ಪೂಜ್ಯ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ಚತುರ್ಥ ಚಾತುರ್ಮಾಸ್ಯ ವ್ರತಾಚರಣೆಯ ಸಂದರ್ಭ ಚಾತುರ್ಮಾಸ್ಯ ವೇದಿಕೆಯಲ್ಲಿ ಶ್ರೀಗಳ ದಿವ್ಯ ಆಶೀರ್ವಾದಗಳೊಂದಿಗೆ ಗೌರವಾರ್ಪಣೆ ನಡೆಯಲಿದೆ.

ಅಡ್ಕ ಗೋಪಾಲಕೃಷ್ಣ ಭಟ್ :

           1970ರ ದಶಕದಲ್ಲಿ ಮಲಯಾಳ ನಾಡಲ್ಲಿ ಯಕ್ಷಗಾನದ ಚೆಂಡೆಯ ನಾದ ಬೀರುವಂತಾಗಲು ಅಡ್ಕ ಗೋಪಾಲಕೃಷ್ಣ ಭಟ್ಟರ ಪಾತ್ರ ಬಹುಮುಖ್ಯವಾಗಿದೆ. ಕಥಕ್ಕಳಿಯ ನಾಡಿನಲ್ಲಿ ಮಲಯಾಳ ಭಾಷೆಯಲ್ಲೂ ಯಕ್ಷಗಾನವನ್ನು ಆಡಿಸಿದ ಕೀರ್ತಿ ಅವರಿಗೆ ಸಲ್ಲಬೇಕು. 1934ರಲ್ಲಿ ಕಾಸರಗೋಡು ತಾಲೂಕಿನ ಕೋಟೂರಿನಲ್ಲಿ ಜನಿಸಿದ ಅಡ್ಕರು ಶಾಲಾ ಜೀವನದಲ್ಲಿಯೇ ಅಡಿಕೆ ತೋಟದಲ್ಲಿ ತೆಂಗಿನ ಕೊತ್ತಳಿಗೆಯನ್ನು ಆಯುಧವನ್ನಾಗಿ ಮಾಡಿ ಆಟ ಆಡಿ ಕುಣಿಯುತ್ತ ಬೆಳೆದವರು. ಹತ್ತನೇ ವರ್ಷದಲ್ಲಿ ಸ್ತ್ರೀ ಪಾತ್ರವೊಂದರ ಮೂಲಕ ತಾಳಮದ್ದಳೆಗೆ ಪ್ರವೇಶವನ್ನು ಪಡೆದಿದ್ದರು. ನಂತರ ತಿರುಗಿ ನೋಡದ ಅವರು ಸ್ವತಃ ಅರ್ಥದಾರಿಗಳಾಗಿ ತರುಣರಿಗೆ ಪ್ರೋತ್ಸಾಹವನ್ನು ನೀಡಿ ಕೋಟೂರಿನಲ್ಲಿ ಯಕ್ಷಗಾನ ತಂಡವನ್ನೇ ರೂಪಿಸುವ ಮೂಲಕ ಕಲೆಗೆ ಬಲುದೊಡ್ಡ ಕೊಡುಗೆಯನ್ನು ನೀಡಿದರು.

           ನೀರ್ಚಾಲು ಮಹಾಜನ ಸಂಸ್ಕøತ ಕಾಲೇಜು, ಕೋಟೂರು, ಎಡನೀರು ಶಾಲೆಗಳಲ್ಲಿ ವಿದ್ಯಾಭ್ಯಾಸ ಪೂರೈಸಿ ಮಾಯಿಪ್ಪಾಡಿಯಲ್ಲಿ ಅಧ್ಯಾಪಕ ತರಬೇತಿಯನ್ನು ಪಡೆದು ಕೋಟೂರು ಶಾಲೆಯಲ್ಲಿ ತನ್ನ ಸೇವೆಯನ್ನು ನೀಡಿ ಹಲವಾರು ಶಿಷ್ಯಂದಿರಿಗೆ ಪ್ರೀತಿಯ ಗುರುಗಳಾಗಿದ್ದಾರೆ. ತನ್ನ ಮಕ್ಕಳನ್ನೂ ಯಕ್ಷಗಾನದಲ್ಲಿ ತೊಡಗಿಸಿಕೊಂಡಿರುವ ಅವರು ಯುವ ಕಲಾವಿದರಿಗೆ ಪ್ರೋತ್ಸಾಹವನ್ನು ನೀಡಿದ್ದಾರೆ. 1950-65ರ ಅವಯಲ್ಲಿ ಖ್ಯಾತಿಗೆ ಬಂದ ಇವರು ಮಧೂರು ಗಣಪತಿ ರಾಯರಿಂದ ನೃತ್ಯಾಭ್ಯಾಸವನ್ನು ಮಾಡಿದ್ದರು. ಬಳಿಕ ಕಾಸರಗೋಡು ಪರಿಸರದ ಹವ್ಯಾಸಿ ವೇಷಧಾರಿಗಳಲ್ಲಿ ಪ್ರಮುಖರೆನಿಸಿದ್ದಾರೆ.ಬಣ್ಣದ ವೇಷಗಳಲ್ಲಿ ಪ್ರಸಿದ್ಧಿಯನ್ನು ಹೊಂದಿದ್ದಾರೆ. ಅಡ್ಕರ ಅರ್ಥಗಾರಿಕೆ ಸಂಪ್ರದಾಯಿಕ ಸ್ವರೂಪದ್ದು. ವೀರ, ರೌದ್ರ, ಹಾಸ್ಯ ರಸಗಳ ಮೂಲಕ ಜನರನ್ನು ಸೆಳೆಯುವ ಅವರದ್ದು ಖಳನಾಯಕ ಪಾತ್ರಗಳಿಗೆ ಹೇಳಿ ಮಾಡಿಸಿದ ಶರೀರ. ಬಲಿಷ್ಠವಾದ ಕಂಠತ್ರಾಣ, ನಿರಾಯಾಸ ಅಭಿವ್ಯಕ್ತಿ ಅವರ ವಿಶೇಷತೆಗಳು. ಕನ್ನಡ, ಮಲಯಾಳ, ಹವ್ಯಕ ಭಾಷೆಯಲ್ಲಿಯೂ ಯಕ್ಷಗಾನ ಪ್ರದರ್ಶನವನ್ನು ನೀಡಿದ್ದಾರೆ. ಜರಾಸಂಧ, ವಾಲಿ, ಇಂದ್ರಜಿತು, ಶೂರ್ಪನಖಿ ಮೊದಲಾದ ಪಾತ್ರಗಳು ಇವರಿಗೆ ಅಚ್ಚುಮೆಚ್ಚು. ಅಂಬೆಮೂಲೆ ಗೋವಿಂದ ಭಟ್, ಉಡುಪುಮೂಲೆ ಗೋಪಾಲಕೃಷ್ಣ ಭಟ್ಟರು, ಪಟ್ಟಾಜೆ ವೆಂಕಟರಮಣ ಭಟ್ ಮೊದಲಾದವರೊಂದಿಗೆ ಇವರು ತಾಳಮದ್ದಳೆಯ ಪ್ರಸಿದ್ಧ ಅರ್ಥದಾರಿಗಳಾಗಿದ್ದ ಕಾಲವೊಂದು ಕಾಸರಗೋಡಿನ ಯಕ್ಷ ಇತಿಹಾಸದ ಒಂದು ದಾಖಲೆ. . 1976ರಲ್ಲಿ ಕೇರಳದಲ್ಲಿ ಮಲಯಾಳ ಯಕ್ಷಗಾನದ ಅವತಾರಕ್ಕೂ ಇವರು ಕಾರಣರಾದರು. ಕೇರಳ ಸರ್ಕಾರದ ಅಧಿಕಾರಿಗಳ ಉತ್ತಮ ಪ್ರೋತ್ಸಾಹದೊಂದಿಗೆ ತಿರುವನಂತಪುರದಲ್ಲಿ ನಡೆದ ಮೊದಲ ಪ್ರದರ್ಶನಕ್ಕೆ ಭಾರೀ ಜನಬೆಂಬಲ ವ್ಯಕ್ತವಾಯಿತು. ಕಾರ್ತಿಕೇಯ ಕಲಾನಿಲಯದ ಯಕ್ಷಗಾನ ವಿಭಾಗದ ನಿರ್ದೇಶಕರಾಗಿ, ಮಲೆಯಾಳಿ ಯಕ್ಷಗಾನಕ್ಕೆ ಅಗಾಧ ಶ್ರಮ ವಹಿಸಿರುತ್ತಾರೆ.

           ಯಕ್ಷಗಾನ ಕಲಾರಂಗ ಉಡುಪಿ, ಮಲ್ಲ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಎಡನೀರು ಶ್ರೀ ಕೇಶವಾನಂದ ಭಾರತೀ ಶ್ರೀಪಾದಂಗಳವರಿಂದ ಪ್ರಶಸ್ತಿ, ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರಿಂದ ಪ್ರಶಸ್ತಿ ಹಾಗೂ ಇನ್ನು ಹಲವಾರು ಸಂಘಸಂಸ್ಥೆಗಳಿಂದ ಅವರು ಗೌರವಿಸಲ್ಪಟ್ಟಿದ್ದಾರೆ.

ಶ್ರೀರಾಮಕೃಷ್ಣರಾವ್ ಸ್ಮೃತಿ ಗೌರವ :

           ಎಡನೀರು ಶ್ರೀಮಠದ ಪೂರ್ವ ವ್ಯವಸ್ಥಾಪಕರಾಗಿದ್ದ ಕೆ. ರಾಮಕೃಷ್ಣರಾವ್ ಅವರ ಸ್ಮೃತಿ ಗೌರವದಂಗವಾಗಿ ಆಗಸ್ಟ 15ರಂದು (ಇಂದು) ಸಂಜೆ 5: ಕ್ಕೆ ಹಿರಿಯ ಯಕ್ಷಗಾನ ಕಲಾವಿದ ಅಡ್ಕ  ಗೋಪಾಲಕೃಷ್ಣ ಭಟ್ಟವರನ್ನು ಸನ್ಮಾನಿಸಲಾಗುವುದು. ಎಡನೀರು ಶ್ರೀಮಠದ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಅವರು ಆಶೀರ್ವಚನ ನೀಡಲಿರುವವರು. ಶ್ರೀಮಠದ ವ್ಯವಸ್ಥಾಪಕ ಪಿ. ರಾಜೇಂದ್ರ ಕಲ್ಲೂರಾಯ ಸಂಸ್ಮರಣ ಭಾಷಣ ಮಾಡುವರು. ಕಾಟುಕೊಚ್ಚಿ ಕುಂಞಕೃಷ್ಣನ್ ಮುಖ್ಯ ಅತಿಥಿಗಳಾಗಿರುತ್ತಾರೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries