ಉಪ್ಪಳ: ಶಬರಿಮಲೆ ಕ್ಷೇತ್ರ ದರ್ಶನಕ್ಕೆ ತೆರಳುತ್ತಿದ್ದ ವ್ರತಧಾರಿ ಮಹಿಳೆ ರೈಲಿನಿಂದ ಬಿದ್ದು ದಾರುಣವಾಗಿ ಮೃತಪಟ್ಟಿದ್ದಾರೆ. ಬೆಳಗಾವಿ ಜಿಲ್ಲೆಯ ಗೋಕಾಕ ಕಲ್ಲೋಳಿ ನಿವಾಸಿ ದಿ. ಗೋವಿಂದಪ್ಪ ಅವರ ಪತ್ನಿ ಕಸ್ತೂರಿ ಖಾನಗೌಡ್ರ(58)ಮೃತಪಟ್ಟ ವ್ರತಧಾರಿ. ಗೋವದಿಂದ ಎರ್ನಾಕುಳ ತೆರಳುತ್ತಿದ್ದ ರೈಲುಗಾಡಿಯಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭ ಭಾನುವಾರ ರಾತ್ರಿ ಉಪ್ಪಳ ರೈಲ್ವೆ ನಿಲ್ದಾಣ ಸನಿಹ ಪ್ರಯಾಣಿಕರೊಬ್ಬರು ರೈಲಿನಿಂದ ಬಿದ್ದಿದ್ದು, ಸಹಪ್ರಯಾಣಿಕರು ತುರ್ತು ಚೈನು ಎಳೆದು ರೈಲು ನಿಲ್ಲಿಸಿದ್ದಾರೆ.
ಕಸ್ತೂರಿ ಅವರು ರೈಲಿನಿಂದ ಬಿದ್ದಿರುವ ಬಗ್ಗೆ ಜತೆಗಿದ್ದವರು ಖಚಿತಪಡಿಸಿದ್ದು, ಇವರೆಲ್ಲರೂ ರೈಲಿನಿಂದ ಇಳಿದು ಹುಡುಕಾಟದಲ್ಲಿ ನಿರತರಾಗಿದ್ದು, ನಂತರ ರೈಲು ಪ್ರಯಾಣ ಮುಂದುವರಿಸಿತ್ತು. ಸ್ಥಳೀಯ ನಿವಾಸಿಗಳ ಸಹಕಾರದೊಂದಿಗೆ ಹುಡುಕಾಡುವ ಮಧ್ಯೆ ರೈಲ್ವೆ ಹಳಿಯಲ್ಲಿ ಕಸ್ತೂರಿ ಖಾನಗೌಡ್ರ ಮೃತದೇಹ ಪತ್ತೆಯಾಗಿತ್ತು. ಕಸ್ತೂರಿ ಖಾನಗೌಡ್ರ ಸೇರಿದಂತೆ 12ಮಂದಿ ಮಹಿಳೆಯರು ಹಾಗೂ 40ಮಂದಿ ಪುರುಷರು ರೈಲಿನಲ್ಲಿ ಸಬರಿಮಲೆ ಶ್ರೀ ಅಯ್ಯಪ್ಪ ಸವಾಮಿ ದರ್ಶನಕ್ಕೆ ಹೊರಟಿದ್ದರು. ಶೌಚಗೃಹಕ್ಕೆ ತೆರಳುವ ಮಧ್ಯೆ ಮಹಿಳೆ ಆಯತಪ್ಪಿ ಬಿದ್ದಿರಬೇಕೆಂದು ಸಂಶಯಿಸಲಾಗಿದೆ.