HEALTH TIPS

J&K: ಮಾದಕವಸ್ತು-ಭಯೋತ್ಪಾದನಾ ಜಾಲ- ಆರು ಮಂದಿ ಸರ್ಕಾರಿ ಉದ್ಯೋಗಿಗಳು ವಜಾ

             ಶ್ರೀನಗರ: ಮಾದಕವಸ್ತುಗಳ ಸಾಗಣೆ ಜಾಲದಲ್ಲಿ ಭಾಗಿಯಾಗಿದ್ದ ಆರು ಮಂದಿ ಸರ್ಕಾರಿ ಉದ್ಯೋಗಿಗಳನ್ನು ಲೆಫ್ಟಿನೆಂಟ್‌ ಗವರ್ನರ್‌ ಮನೋಜ್‌ ಸಿನ್ಹಾ ಅವರು ಶನಿವಾರ ಕೆಲಸದಿಂದ ವಜಾ ಮಾಡಿದ್ದಾರೆ. ಈ ಮೂಲಕ ಜಮ್ಮು ಮತ್ತು ಕಾಶ್ಮೀರದಲ್ಲಿ ಹೆಚ್ಚುತ್ತಿರುವ ಮಾದಕವಸ್ತು-ಭಯೋತ್ಪಾದನಾ ಜಾಲವನ್ನು ನಿಗ್ರಹಿಸುವ ಮಹತ್ವದ ಕಾರ್ಯಕ್ಕೆ ಮುಂದಾಗಿದ್ದಾರೆ.

            ಈ ಜಾಲಕ್ಕೆ ಸಂಬಂಧಿಸಿ ಜುಲೈ ತಿಂಗಳೊಂದರಲ್ಲಿಯೇ ಒಟ್ಟು ಎಂಟು ಮಂದಿ ಸರ್ಕಾರಿ ಉದ್ಯೋಗಿಗಳನ್ನು ವಜಾ ಮಾಡಲಾಗಿದೆ. ಮಾದಕವಸ್ತು-ಭಯೋತ್ಪಾದನಾ ಜಾಲವನ್ನು ತೊಡೆದು ಹಾಕುವುದಕ್ಕಾಗಿ ಹಲವು ವರ್ಷಗಳ ಹಿಂದೆ ರೂಪಿಸಲಾಗಿದ್ದ 'ಗಡಿ ತಂತ್ರ' ಯೋಜನೆಯ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಪೊಲೀಸ್‌ ಇಲಾಖೆಯ ಐದು ಮಂದಿ ಹಾಗೂ ಒಬ್ಬ ಶಿಕ್ಷಕನನ್ನು ಶನಿವಾರ ವಜಾ ಮಾಡಲಾಗಿದೆ.

            ಪಾಕಿಸ್ತಾನ ಹಾಗೂ ಐಎಸ್‌ಐ ಉಗ್ರ ಸಂಘಟನೆಯು ಭಾರತದಲ್ಲಿ ನಡೆಸುತ್ತಿದ್ದ ಈ ಜಾಲದಲ್ಲಿ ಈ ಆರು ಮಂದಿ ಶಾಮೀಲಾಗಿದ್ದರ ಕುರಿತು ತನಿಖೆ ನಡೆಸಲಾಗಿತ್ತು. ಆ ಬಳಿಕವೇ ಅವರನ್ನು ವಜಾ ಮಾಡಲಾಗಿದೆ. ಭಾರತ ಸಂವಿಧಾನದ ವಿಧಿ 311(2) (ಸಿ) ಅನ್ನು ಬಳಿಸಿ ಈ ಕ್ರಮ ಕೈಗೊಳ್ಳಲಾಗಿದೆ.

'ಮಾದಕವಸ್ತು ಕಳ್ಳಸಾಗಣೆಯಿಂದ ಬಂದ ಹಣದಲ್ಲಿ ಒಂದೂ ರೂಪಾಯಿಯನ್ನೂ ಬಿಡದಂತೆ ಎಲ್ಲವನ್ನೂ ವಶಕ್ಕೆ ಪಡೆಯಲಾಗುವುದು. ಹಣ ಮಾಡಿಕೊಂಡವರು ಸಾರ್ವಜನಿಕರಿರಬಹುದು ಅಥವಾ ಸರ್ಕಾರಿ ಉದ್ಯೋಗಿ ಅಥವಾ ಪೊಲೀಸ್‌ ಆಗಿರಬಹುದು. ಯಾರನ್ನೂ ಬಿಡುವ ಪ್ರಶ್ನೆಯೇ ಇಲ್ಲ' ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸ್‌ ಮುಖ್ಯಸ್ಥ ಆರ್‌.ಆರ್‌. ಸ್ವೈನ್‌ ಅವರು ತಿಳಿಸಿದರು.

               'ದೇಶದ ಭದ್ರತೆಗೆ ಮಾದಕವಸ್ತು-ಭಯೋತ್ಸಾದನಾ ಜಾಲವು ಬಹುದೊಡ್ಡ ಬೆದರಿಕೆಯಾಗಿದೆ. ಭಯೋತ್ಸಾದನೆ ವಿರುದ್ಧದ ಹೋರಾಟದಲ್ಲಿ ಇಂಥ ಜಾಲಗಳನ್ನು ಬೇಧಿಸುವುದು ಬಹಳ ಮುಖ್ಯವಾಗುತ್ತದೆ. ಇದರಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿ ನೆಲಸಲಿದೆ ಮತ್ತು ಇದರಿಂದ ಪ್ರದೇಶವು ಪ್ರಗತಿಯತ್ತ ಸಾಗುತ್ತದೆ' ಎಂದು ಲೆಫ್ಟಿನೆಂಟ್‌ ಗವರ್ನರ್‌ ಮನೋಜ್‌ ಸಿನ್ಹಾ ಅಭಿಪ್ರಾಯಪಟ್ಟಿದ್ದಾರೆ.

ಯಾರ ಮೇಲೆ ಯಾವ ಆರೋಪ?

          ಕಾನ್‌ಸ್ಟೆಬಲ್‌ ಫಾರೂಕ್‌ ಅಹಮದ್‌ ಶೇಕ್‌: ಮಾದಕವಸ್ತುಗಳನ್ನು ಪಾಕಿಸ್ತಾನದಿಂದ ಜಮ್ಮು ಮತ್ತು ಕಾಶ್ಮೀರದ ನಗರ ಪ್ರದೇಶಗಳಿಗೆ ಮೂವರು ಕಳ್ಳಸಾಗಣೆ ಮಾಡುತ್ತಿದ್ದರು. ಇವರಲ್ಲಿ ಫಾರೂಕ್‌ ಒಬ್ಬರು. ಬಂಧನದ ವೇಳೆ ಇವರಿಂದ 454 ಗ್ರಾಂ ಬ್ರೌನ್‌ಶುಗರ್‌ ವಶಪಡಿಸಿಕೊಳ್ಳಲಾಗಿದೆ.

           ಕಾನ್‌ಸ್ಟೆಬಲ್‌ ಖಾಲಿದ್‌ ಹುಸ್ಸೇನ್‌ ಶಾ: ಮಾದಕವಸ್ತು ಕಳ್ಳಸಾಗಣೆ ನಡೆಸಲು ಖಾಲಿದ್‌ ತಮ್ಮ ಪೊಲೀಸ್‌ ಹುದ್ದೆಯನ್ನು ಬಳಸಿಕೊಂಡಿದ್ದಾರೆ. ಇವರ ಬಳಿಯೂ 557 ‌ಗ್ರಾಂ ಬ್ರೌನ್‌ಶುಗರ್‌ ಅನ್ನು ವಶಪಡಿಸಿಕೊಳ್ಳಲಾಗಿದೆ.

              ಕಾನ್‌ಸ್ಟೆಬಲ್‌ ರಹಮತ್‌ ಶಾ: ಇವರಿಂದ 806 ಗ್ರಾಂ ಬ್ರೌನ್‌ಶುಗರ್‌ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕಾನ್‌ಸ್ಟೆಬಲ್‌ ಇರ್ಶಾದ್‌: 'ಲಶ್ಕರ್‌ ಎ ತಯಬಾ' ಉಗ್ರ ಸಂಘಟನೆಯ ಭಯೋತ್ಪಾದಕರಿಗೆ ಸಾರಿಗೆ ವಸತಿಯನ್ನು ಕಲ್ಪಿಸುತ್ತಿದ್ದ ಜೊತೆಗೆ ಹಣವನ್ನೂ ಪೂರೈಸುತ್ತಿದ್ದರು. ಇವರ ಬಳಿಯಿಂದ ಶಸ್ತ್ರಾಸ್ತ್ರ ಹಾಗೂ ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.

           ಕಾನ್‌ಸ್ಟೆಬಲ್‌ ಸೈಫ್‌: 'ಹಿಜ್ಬುಲ್‌ ಮುಜಾಯಿದ್ದೀನ್‌' ಉಗ್ರ ಸಂಘಟನೆಯೊಂದಿಗೆ ಸಂಪರ್ಕವಿದ್ದ ಡ್ರಗ್‌ ಪೆಡ್ಲರ್‌. ಮಾದಕವಸ್ತು ಕಳ್ಳಸಾಗಣೆಯಿಂದ ಬಂದ ಹಣವನ್ನು ಭಯೋತ್ಪಾದನಾ ಚಟುವಟಿಕೆಗಳಿಗೆ ಬಳಸುತ್ತಿದ್ದರು. ಇವರ ಬಂಧನದ ವೇಳೆ ಹವಾಲಾ ಮೂಲಕ ಹಣ ವರ್ಗಾವಣೆ ಮಾಡಿದ್ದಕ್ಕೆ ಸಂಬಂಧಿಸಿ ಸಾಕ್ಷ್ಯ ದೊರೆತಿದೆ.

                ಶಿಕ್ಷಕ ನಜಮ್‌ ದಿನ್‌: ಸರ್ಕಾರಿ ಶಾಲೆಯ ಶಿಕ್ಷಕ. 'ಹಿಜ್ಬುಲ್‌ ಮುಜಾಯಿದ್ದೀನ್‌' ಉಗ್ರ ಸಂಘಟನೆಗಾಗಿ ಸಾರಿಗೆ ವಸತಿ ವ್ಯವಸ್ಥೆ ಕಲ್ಪಿಸುವ ವ್ಯಕ್ತಿಯಿಂದ ಹಣ ಪಡೆದುಕೊಂಡು ಭಯೋತ್ಸಾದನಾ ಚಟುವಟಿಕೆಗೆ ಬಳಸಿದ್ದಾರೆ. ಬಂಧನದ ವೇಳೆ ಇವರಿಂದ ಐದು ಕೆ.ಜಿ ಹೆರಾಯಿನ್‌ ವಶಪಡಿಸಿಕೊಳ್ಳಲಾಗಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries