ಬದಿಯಡ್ಕ: 2024 ನೇ ಸಾಲಿನ ಕೊಡಗಿನ ಗೌರಮ್ಮ ಕಥಾಸ್ಪರ್ಧೆಯಲ್ಲಿ ಧನ್ಯಶ್ರೀ ಸರಳಿ ಅವರು ಬರೆದ `ಜೀವನ ಅಮೃತ ಸಮಾನ' ಎಂಬ ಕತೆಗೆ ಪ್ರಥಮ ಪ್ರಶಸ್ತಿ ಲಭಿಸಿದೆ. ಶ್ರೀರಾಮಚಂದ್ರಾಪುರ ಮಠದ ಮುಳ್ಳೇರಿಯ ಮಂಡಲದ ಮಹಿಳಾ ಘಟಕದ ನೇತೃತ್ವದಲ್ಲಿ ಹವ್ಯಕ ಭಾಷೆಯಲ್ಲಿ ಆಯೋಜಿಸಲಾಗುವ ಕಥಾಸ್ಪರ್ಧೆ ಇದಾಗಿದೆ. ಒಟ್ಟು 18 ಮಂದಿ ಸ್ಪರ್ಧಿಗಳು ಭಾಗವಹಿಸಿದ್ದರು. ಕಥಾಸ್ಪರ್ಧೆಯನ್ನು ಹಿರಿಯ ಲೇಖಕಿ, ಸಾಹಿತಿ ವಿಜಯಾ ಸುಬ್ರಹ್ಮಣ್ಯ ಕುಂಬಳೆ ಅವರು ಕಳೆದ 24 ವರ್ಷಗಳಿಂದ ಸಮರ್ಥವಾಗಿ ಮುನ್ನಡೆಸುತ್ತಿದ್ದಾರೆ. ಕಥಾವೇದಿಕೆಯ ಅಧ್ಯಕ್ಷೆಯಾಗಿ ಈಶ್ವರಿ ಬೇರ್ಕಡವು ನೇತೃತ್ವ ವಹಿಸಿದ್ದಾರೆ. ಅಧ್ಯಾಪಕ ನಾರಾಯಣ ಹೆಗಡೆ ಕುಂಬಳೆ, ನಿವೃತ್ತ ಪ್ರಾಧ್ಯಾಪಕ, ಸಾಹಿತಿ ಡಾ.ಹರಿಕೃಷ್ಣ ಭರಣ್ಯ, ನಿವೃತ್ತ ಅಧ್ಯಾಪಕ ಬಾಲ ಮಧುರಕಾನನ ಅವರು ತೀರ್ಪುಗಾರರಾಗಿ ಸಹಕರಿಸಿದ್ದಾರೆ.
ಪ್ರಶಸ್ತಿ ಪುರಸ್ಕøತ ಧನ್ಯಶ್ರೀ ಸರಳಿ :
ಜಿಲ್ಲೆಯ ಬದಿಯಡ್ಕ ಕುಂಟಿಕಾನ ಸರಳಿ ಮನೆಯ ಛಾಯಾಗ್ರಾಹಕ, ಪತ್ರಕರ್ತ ಶ್ಯಾಮಪ್ರಸಾದ ಸರಳಿ ಇವರ ಪತ್ನಿಯಾಗಿರುವ ಧನ್ಯಶ್ರೀ ಅವರು ಕವಿತೆ, ಕತೆಗಳನ್ನು ಬರೆಯುವ ಹವ್ಯಾಸವಿರಿಸಿಕೊಂಡಿದ್ದಾರೆ. ವಿವಿಧ ದಿನಪತ್ರಿಕೆಗಳಲ್ಲಿ ಇವರು ಬರೆದ ಲೇಖನಗಳು, ಪುಸ್ತಕ ಅವಲೋಕನಗಳು ಪ್ರಕಟವಾಗಿವೆ. ಅನೇಕ ಕವಿಗೋಷ್ಠಿಗಳಲ್ಲೂ ಇವರು ಭಾಗವಹಿಸಿದ್ದಾರೆ.
ಸುಳ್ಯ ತಾಲೂಕು ಐವರ್ನಾಡು ನಿಡುಬೆ ಮನೆಯ ಚೈತನ್ಯ ಬಿ. ಇವರು ಬರೆದ ಅಬ್ಬೆಕಥೆ ದ್ವಿತೀಯ ಬಹುಮಾನವನ್ನು ಪಡೆದಿರುತ್ತದೆ. ವೇಣೂರು ಅಂಡಿಂಜೆ ಕುಂಡ್ಯಡ್ಕ ಸರಸ್ವತಿ ಆರ್.ಜಿ. ಭಟ್ ಬರೆದ ಹುಣ್ಣಿಮೆ ಚಂದ್ರ ಕತೆಗೆ ತೃತೀಯ ಬಹುಮಾನ ಬಂದಿರುತ್ತದೆ.