ಬದಿಯಡ್ಕ: ಏತಡ್ಕ ಶ್ರೀ ಸದಾಶಿವ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ಹಮ್ಮಿಕೊಂಡ ದ್ವಿತೀಯ ಹಂತದ ಅಕ್ಷತಾ ಅಭಿಯಾನವನ್ನು ದೀಪ ಜ್ವಲನೆ ಹಾಗೂ ಕಿಟ್ ವಿತರಿಸುವ ಮೂಲಕ ಗಿರಿಪುರ ಶ್ರೀ ಶಾಸ್ತಾರ ಭಜನಾ ಮಂದಿರದ ಅಧ್ಯಕ್ಷ ಬಿ.ವಿ.ಕುಂಜತ್ತಾಯರು ಚಾಲನೆ ನೀಡಿದರು. ಅವರು ಮಾತನಾಡಿ ಈ ಊರಿನ ಬಾಗಿಲಿನಂತಿರುವ ಶ್ರೀಶಾಸ್ತಾರ ಸನ್ನಿಧಿಯಿಂದ ಮಹಾ ಅಭಿಯಾನವನ್ನು ಆರಂಭಿಸಿರುವುದು ಸೂಕ್ತವಾಗಿದೆ. ನಾಡಿನ ಎಲ್ಲ ಜನರ ಸಹಕಾರ ದೊರೆಯಲೆಂದು ಹಾರೈಸಿದರು.
ಏತಡ್ಕ ಶ್ರೀ ಸದಾಶಿವ ದೇವಸ್ಥಾನ ಬ್ರಹ್ಮಕಲಶೋತ್ಸವ ಸಮಿತಿ ಸಂಚಾಲಕ ಡಾ. ವೈ.ವಿ.ಕೃಷ್ಣಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿ, ಏಕ ಕಾಲದಲ್ಲಿ ಹಲವು ಕೇಂದ್ರಗಳಲ್ಲಿ ವಿತರಣೆಯಾಗುವ ಮನವಿ ಪತ್ರ ಮತ್ತು ಶಿವಾರ್ಪಣೆ ಯೋಜನೆಯ ವಿವರ ನೀಡಿ ತಂಡಗಳಿಗೆ ಸೂಕ್ತ ನಿರ್ದೇಶನ ನೀಡಿದರು. ಬ್ರಹ್ಮಕಲಶೋತ್ಸವ ಸಮಿತಿಯ ಪದಾಧಿಕಾರಿಗಳಾದ ಬಾಲಕೃಷ್ಣ ಕೆ.ಕೆ, ಗಣರಾಜ ಕಡೆಕಲ್ಲು, ವೈ.ವಿ. ಸದಾಶಿವ ಮೈಸೂರು, ಡಾ.ಪ್ರಕಾಶ್ ವೈ.ಎಚ್, ಗೌರಿ ಕೆ ಎಸ್ , ಡಾ.ಅನ್ನಪೂರ್ಣೇಶ್ವರಿ, ಊರ ಪ್ರಮುಖರಾದ ಮಹಾಲಿಂಗೇಶ್ವರ ಕುಳೂರು, ಅಪ್ಪಕುಞ ಮಣಿಯಾಣಿ, ಮಾಸ್ತರ್ ಕುಞÂ್ಞರಾಮ ಮಣಿಯಾಣಿ, ವೈ.ಬಿ. ರವಿ , ರಾಮಣ್ಣ ಬಾಳೆಗದ್ದೆ, ಪ್ರಭಾಕರ ಬೀಜದಕಟ್ಟೆ, ಹೆಚ್.ಶ್ರ್ರೀಕೃಷ್ಣ ಭಟ್ ಉಪಸ್ಥಿತರಿದ್ದರು. ಸಂಚಾಲಕ ಚಂದ್ರಶೇಖರ ಏತಡ್ಕ ಕಾರ್ಯಕ್ರಮ ನಿರೂಪಿಸಿದರು. ವಿವಿಧ ತಂಡಗಳು ಏಕ ಕಾಲದಲ್ಲಿ ಪೆರ್ವತ್ತೋಡಿ, ಕುಳೂರು, ಬೆಳೆರಿ, ಪನೆಯಾಲ ಭಾಗದ ಎಲ್ಲಾ ಭಗವದ್ಭಕ್ತರ ಮನೆಗಳ ಸಂಪರ್ಕಕ್ಕೆ ತೆರಳಿದರು. ಒಂದೇ ದಿನದಲ್ಲಿ ನೂರಕ್ಕಿಂತ ಅಧಿಕ ಮನೆಗಳ ಸಂಪರ್ಕ ಮಾಡಲಾಯಿತು. ವಿವಿಧ ಸಂಘಸಂಸ್ಥೆಗಳು ಹಾಗೂ ಊರಿನ ಪ್ರಮುಖರು ಅಭಿಯಾನವನ್ನು ಸ್ವಾಗತಿಸಿ ಸಹಕಾರ ನೀಡಿದರು.