ಕಾಸರಗೋಡು: ಪ್ರೀತಿ ಮತ್ತು ಸೌಹಾರ್ದತೆಯ ಸಂಕೇತವಾಗಿ ಆಚರಿಸುತ್ತಿರುವ ಓಣಂ ಹಬ್ಬ ನಾಡಿನಲ್ಲಿ ಸಾಮರಸ್ಯ ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತಿರುವುದಾಗಿ ಕಾಸರಗೋಡು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿಲ್ಪಾ ಡಿ. ತಿಳಿಸಿದ್ದಾರೆ.
ಅವರು ಕಾಸರಗೋಡು ಪ್ರೆಸ್ ಕ್ಲಬ್ ವತಿಯಿಂದ ಪ್ರೆಸ್ಕ್ಲಬ್ ವಠಾರದಲ್ಲಿ ಆಯೋಜಿಸಲಾಗಿದ್ದ ಓಣಂ ಹಬ್ಬ ಉದ್ಘಾಟಿಸಿ ಮಾತನಾಡಿದರು. ಜಾತಿ, ಮತ, ರಾಜಕೀಯಾತೀತವಾಗಿ ಆಚರಿಸಲ್ಪಡುವ ಓಣಂ ಹಬ್ಬ ನಾಡಿನ ಜನತೆಯಲ್ಲಿ ಹೊಸ ಚೈತನ್ಯಕ್ಕೆ ನಾಂದಿ ಹಾಡಿದೆ ಎಂದು ತಿಳಿಸಿದರು. ಪ್ರೆಸ್ ಕ್ಲಬ್ ಅಧ್ಯಕ್ಷ ಮುಹಮ್ಮದ್ ಹಾಶಿಂ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಎಸ್ಸೆಸೆಲ್ಸಿ ಮತ್ತು ಪ್ಲಸ್ ಟು ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಾದ ದಿಯಾ ರವೀಂದ್ರನ್, ಭೂಮಿಕಾ ಪುರುಷೋತ್ತಮ್ ಹಾಗೂ ವಿಷ್ಣುಪ್ರಿಯಾ ಅವರಿಗೆ ಸ್ಮರಣಿಕೆ ಹಾಗೂ ಬಹುಮಾನವನ್ನು ಶಿಲ್ಪಾ ಡಿ. ವಿತರಿಸಿದರು.
ನಿಯೋಜಿತ ಅಧ್ಯಕ್ಷ ಶಿಜು ಕಣ್ಣನ್, ಕಾರ್ಯದರ್ಶಿ ಪ್ರದೀಪ್ ನಾರಾಯಣ್, ಅಬ್ದುಲ್ಲಕುಞÂ ಉದುಮ, ಪುರುಷೋತ್ತಮ್ ಪೆರ್ಲ, ಸುರೇಂದ್ರನ್ ಮಡಿಕೈ ಉಪಸ್ಥಿತರಿದ್ದರು. ಕಾರ್ಯದರ್ಶಿ ಕೆ.ವಿ.ಪದ್ಮೇಶ ಸ್ವಾಗತಿಸಿದರು. ಕೋಶಾಧಿಕಾರಿ ಶೈಜು ಪಿಲಾತ್ತರ ವಂದಿಸಿದರು. ಓಣಂ ಅಂಗವಾಗಿ ಹೂವಿನ ರಂಗೋಲಿ, ಓಣಂ ಔತಣ ಕೂಟ ನಡೆಯಿತು.