ವಿಜಯಪುರ: ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದಿಂದ 2023-24 ಹಾಗೂ 2024-25ನೇ ಸಾಲಿನ ಗಡಿನಾಡ ಚೇತನ ಪ್ರಶಸ್ತಿ ಪ್ರಕಟಗೊಂಡಿದ್ದು, ಸೆ.30 ರಂದು ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ತ ತಾಲೂಕಿನ ಸುಕ್ಷೇತ್ರ ಗುಡ್ಡಾಪುರದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನೆರವೇರಲಿದೆ ಎಂದು ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ ಹೇಳಿದರು.
ಶ್ರೀಮತಿ ಡಾ.ಜಯದೇವಿ ತಾಯಿ ಲಿಗಾಡೆ, ನಾಡೋಜ ಡಾ.ಕಯ್ಯರ ಕಿಂಞ್ಞಣ್ಣ ರೈ ಮತ್ತು ಡಾ. ಚನ್ನಬಸವ ಪಟ್ಟದ್ದೇವರು ಇವರ ಹೆಸರಿನಲ್ಲಿ ಗಡಿ ಪ್ರಾಧಿಕಾರದಿಂದ ಈ ಪ್ರಶಸ್ತಿ ನೀಡಲಾಗುತ್ತದೆ.
ಬರಗೂರು ರಾಮಚಂದ್ರಪ್ಪ ಅವರ ಸಮಿತಿಯು 2023-24ನೇ ಸಾಲಿಗೆ ಪೂಜ್ಯ ಶ್ರೀ ಡಾ. ಚನ್ನಬಸವ ಪಟ್ಟದ್ದೇವರು ಗಡಿನಾಡಿನ ಚೇತನ ಪ್ರಶಸ್ತಿಗೆ ಕಾಸರಗೋಡಿನ ರಾಧಾಕೃಷ್ಣ ಕೆ. ಉಳಿಯತ್ತಡ್ಕ, ಡಾ. ಜಯದೇವಿ ತಾಯಿ ಲಿಗಾಡೆ ಗಡಿನಾಡ ಚೇತನ ಪ್ರಶಸ್ತಿಗೆ ಬೀದರದ ಪಂಚಾಕ್ಷರಿ ಪುಣ್ಯ ಶೆಟ್ಟಿ, ನಾಡೋಜ ಡಾ. ಕಯ್ಯರ ಕಿಞ್ಞಣ್ಣ ರೈ ಗಡಿನಾಡ ಚೇತನ ಪ್ರಶಸ್ತಿಗೆ ಬೆಳಗಾವಿಯ ಬಿ.ಎಸ್. ಗವಿಮಠ ಹಾಗೂ 2024-25ನೇ ಸಾಲಿನ ಡಾ. ಚನ್ನಬಸವ ಪಟ್ಟದ್ದೇವರು ಗಡಿನಾಡ ಚೇತನ ಪ್ರಶಸ್ತಿಗೆ ಗುಜರಾತಿನ ಅಹ್ಮದಾಬಾದ್ನ ಕರ್ನಾಟಕ ಸಂಘ, ಜಯದೇವಿ ತಾಯಿ ಲಿಗಾಡೆ ಗಡಿನಾಡಿನ ಚೇತನ ಪ್ರಶಸ್ತಿಗೆ ಮಹಾರಾಷ್ಟ್ರ ರಾಜ್ಯದ ಸಂಖದ ಶಿವಲಿಂಗೇಶ್ವರ ಶಿಕ್ಷಣ ಸಂಸ್ಥೆ ಹಾಗೂ ಉಮದಿಯ ಸರ್ವೋದಯ ಶಿಕ್ಷಣ ಸಂಸ್ಥೆಯನ್ನು ಆಯ್ಕೆ ಮಾಡಿದ್ದು, ನಾಡೋಜ ಡಾ. ಕಯ್ಯರ ಕಿಞ್ಞಣ್ಣ ರೈ ಗಡಿನಾಡ ಚೇತನ ಪ್ರಶಸ್ತಿಗೆ ಕೇರಳ ರಾಜ್ಯದ ಕಾಸರಗೋಡಿನ ಪೆರಡಾಲ ನೀರ್ಚಾಲು, ಕುಂಬಳೆ (ದಾರಿ) ಮಹಾಜನ ವಿದ್ಯಾಭಿವರ್ಧಕ ಸಂಘ ಆಯ್ಕೆ ಮಾಡಲಾಗಿದೆ ಎಂದು ಅವರು ತಿಳಿಸಿದರು.
ಪ್ರಶಸ್ತಿಯು ಹಲ್ಮಿಡಿ ಶಾಸನದ ಮಾದರಿಯ ಸ್ಮರಣಿಕೆ, ಪ್ರಮಾಣ ಪತ್ರ ಹಾಗೂ ಪ್ರಾಧಿಕಾರದಿಂದ ಒಂದು ಲಕ್ಷ ರೂ. ನಗದು ಒಳಗೊಂಡಿರುತ್ತದೆ ಎಂದು ಅವರು ಹೇಳಿದರು.