ಮಂಜೇಶ್ವರ: ಈದ್ ಮಿಲಾದ್ ಹಬ್ಬವನ್ನು ಮುಸ್ಲಿಂ ಬಾಂಧವರು ಮಂಜೇಶ್ವರದಲ್ಲಿ ಸೋಮವಾರ ಸಡಗರ ಸಂಭ್ರಮದಿಂದ ಆಚರಿಸಿದರು.
ಹಬ್ಬದಂಗವಾಗಿ ಮಂಜೇಶ್ವರದ ಹಲವೆಡೆ ಮಸೀದಿ ಹಾಗೂ ಮದ್ರಸಗಳ ಸಮಿತಿ ವತಿಯಿಂದ ಆಯೋಜಿಸಿದ್ದ ಮೆರವಣಿಗೆಯಲ್ಲಿ ಭಾರೀ ಸಂಖ್ಯೆಯಲ್ಲಿ ಮುಸ್ಲಿಂ ಸಮಾಜದ ಬಾಂಧವರು ಪಾಲ್ಗೊಂಡಿದ್ದರು.
ಉದ್ಯಾವರ ಸಾವಿರ ಜಮಾಅತ್ ವತಿಯಿಂದ ಆಯೋಜಿಸಿದ ಈದ್ ಮಿಲಾದ್ ಬೃಹತ್ ಮೆರವಣಿಗೆಗೆ ಮಸೀದಿ ಅಧ್ಯಕ್ಷ ಸೈಫುಲ್ಲಾ ತಂಙಳ್, ಭಾವ ಹಾಜಿ, ಇಬ್ರಾಹಿಂ ಹಾಜಿ, ಇಬ್ರಾಹಿಂ, ಎಸ್ ಎಂ ಬಶೀರ್ ಹಾಗೂ ಮಸೀದಿ ಸಮಿತಿ ಸದಸ್ಯರು ನೇತೃತ್ವ ನೀಡಿದರು. ಮಸೀದಿಯ ಅಧೀನದಲ್ಲಿರುವ 13 ಮೊಹಲ್ಲಾಗಳ ಮದ್ರಸ ವಿದ್ಯಾರ್ಥಿಗಳು, ಅಧ್ಯಾಪಕರುಗಳು ಹಾಗೂ ಪೋಷಕರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಉದ್ಯಾವರ ಜುಮಾ ಮಸೀದಿ ಅಂಗಣದಿಂದ ಆರಂಭಗೊಂಡ ಮೆರವಣಿಗೆ ಕುಂಜತ್ತೂರು ತನಕ ಸಾಗಿ ಬಳಿಕ ಬಳಿಕ ಮಸೀದಿ ಅಂಗಣಕ್ಕೆ ಹಿಂತಿರುಗಿತು.
ಗಡಿ ಪ್ರದೇಶವಾದ ತೂಮಿನಾಡು ಅಲ್ ಫತಾಃ ಜುಮಾ ಮಸೀದಿ ಹಾಗೂ ಸಿರಾಜುಲ್ ಇಸ್ಲಾಂ ಮದ್ರಸ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಮೆರವಣಿಗೆಗೆ ಮಸೀದಿ ಅಧ್ಯಕ್ಷ ಅಬ್ದುಲ್ ರಹ್ಮಾನ್ ಎ ಆರ್, ಕಾರ್ಯದರ್ಶಿ ಮೊಹಮ್ಮದ್ ಹನೀಫ್, ಮಸೀದಿ ಖತೀಬ್ ಅಬ್ದುಲ್ ರವೂಫ್ ಇಸಾಮಿ ಹಾಗೂ ಮಸೀದಿ ಸಮಿತಿ ಸದಸ್ಯರು ನೇತೃತ್ವ ನೀಡಿದರು.
ಪೊಸೋಟು ಮಹಿಯ್ಯುದ್ದೀನ್ ಜುಮಾ ಮಸೀದಿ ಹಾಗೂ ಮುಂಬುಲ್ ಉಲೂಂ ಮದ್ರಸ ವತಿಯಿಂದ ನಡೆದ ಈದ್ ಮಿಲಾದ್ ಮೆರವಣಿಗೆಗೆ ಮಸೀದಿ ಅಧ್ಯಕ್ಷ ಆರ್ ಕೆ ಭಾವ, ಕಾರ್ಯದರ್ಶಿ ಕೆ ಕೆ ಮೊಯಿದ್ದೀನ್ ಕುಂಞ ಹಾಜಿ, ಮಸೀದಿ ಖತೀಬ್ ಶಬೀರ್ ಫೈಝಿ ಹಾಗೂ ಆಡಳಿತ ಸಮಿತಿ ಸದಸ್ಯರು ನೇತೃತ್ವ ನೀಡಿದರು.