ಕಾಸರಗೋಡು : ಜಿಲ್ಲೆಯ ವಿದ್ಯುತ್ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಲು ಕೆಎಸ್ಇಬಿ ಕಾರ್ಮಿಕರು ಮತ್ತು ಅಧಿಕಾರಿಗಳ ಸಂಘ ಜಿಲ್ಲಾ ಮಟ್ಟದ ವಿದ್ಯುತ್ ಅಭಿವೃದ್ಧಿ ವಿಚಾರ ಸಂಕಿರಣ ಚಟ್ಟಂಚಾಲ್ ಅರ್ಬನ್ ಬ್ಯಾಂಕ್ ಸಭಾಂಗಣದಲ್ಲಿ ಆಯೋಜಿಸಿತು. ಉದುಮ ಶಾಸಕ ವಕೀಲ ಸಿ.ಎಚ್ ಕುಞಂಬು ವಿಚಾರಸಂಕಿರಣ ಉದ್ಘಾಟಿಸಿ ಮಾತನಾಡಿ, ಜಿಲ್ಲೆಯಲ್ಲಿ ವಿದ್ಯುತ್ ಪ್ರಸರಣ ವಲಯದಲ್ಲಿ ಉನ್ನತೀಕರಣದ ಜತೆಗೆ ಪ್ರಸರಣ ಜಾಲವನ್ನು ಸುಗಮಗೊಳಿಸಬೇಕು ಹಾಗೂ ಕಾಸರಗೋಡು ಪ್ರಸರಣ ಕಚೇರಿ ಕಾಮಗಾರಿ ತ್ವರಿತಗೊಳಿಸುವಂತೆ ಆಗ್ರಹಿಸಿದರು. ಉದುಮ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಎಂ.ಲಕ್ಷ್ಮಿ ಅಧ್ಯಕ್ಷತೆ ವಹಿಸಿದ್ದರು. ಹೊಸದುರ್ಗ ಶಾಸಕ ಇ.ಚಂದ್ರಶೇಖರನ್ ದಿಕ್ಸೂಚಿ ಭಾಷಣ ಮಾಡಿದರು.
ಈ ಸಂದರ್ಭ ಉಡುಪಿ-ಕರಿಂತಲ-ವಯನಾಡ್ ಪವರ್ಹೈವೇಯನ್ನು ಸಾಕಾರಗೊಳಿಸುವುದರ ಜತೆಗೆ ತುರ್ತಾಗಿ ನಡೆಸಬೇಕಾದ ಕಾಮಗಾರಿಗಳ ಬಗ್ಗೆ ವಿಚಾರಸಂಕಿರಣದಲ್ಲಿ ಆಗ್ರಹಿಸಲಾಯಿತು. ವಿದ್ಯುತ್ ಇಲಾಖೆ ಎದುರಿಸುತ್ತಿರುವ ಸಿಬ್ಬಂದಿ ಕೊರತೆ ನೀಗಿಸಬೇಕು, ಜಿಲ್ಲೆಯಲ್ಲಿ ವಿದ್ಯುತ್ ಉತ್ಪಾದನೆಯ ಎಲ್ಲಾ ಸಾಧ್ಯತೆಗಳನ್ನು ಪರಿಶೀಲಿಸಬೇಕು, 110 ಕೆವಿ ತೌಡುಗೋಳಿ-ಕುಬಣೂರು-ಮಂಜೇಶ್ವರಂ ಮಾರ್ಗವನ್ನು ಕರ್ನಾಟಕ ಭಾಗದಲ್ಲಿನ ಲೈನ್ ನವೀಕರಿಸುವಂತೆಯೂ ಆಗ್ರಹಿಸಲಾಯಿತು.
ಜನಪ್ರತಿನಿಧಿಗಳು, ಕೆಎಸ್ಇಬಿ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕೈಗಾರಿಕಾ ಕೇಂದ್ರ, ಕೈಗಾರಿಕೋದ್ಯಮಿಗಳು, ದೊಡ್ಡ ಗ್ರಾಹಕರು ಹಾಗೂ ಸರಕಾರದ ನಾನಾ ಇಲಾಖೆಗಳ ಒಟ್ಟುಸೇರಿಸಿ ಕಾರ್ಯಾಗಾರ ಆಯೋಜಿಸಿದಲ್ಲಿ ಅನುಕೂಲವಾಗಲಿದೆ ಎಂಬ ಅಭಿಪ್ರಾಯವೂ ವಿಚಾರ ಸಂಕಿರಣದಲ್ಲಿ ವ್ಯಕ್ತಪಡಿಸಲಾಯಿತು. ಕೆ.ಎಸ್.ಇ.ಬಿ ಅಧಿಕಾರಿಗಳ ಸಂಘದ ರಾಜ್ಯ ಸಮಿತಿ ಸದಸ್ಯ ಸಿ.ಅರುಣ್ ವಿಷಯ ಮಂಡಿಸಿದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪಿ.ಬೇಬಿ ಬಾಲಕೃಷ್ಣನ್, ಉಪಾಧ್ಯಕ್ಷ ಶಾನವಾಜ್ ಪಾದೂರು, ಚೆಮ್ನಾಡ್ ಗ್ರಾಪಂ ಅಧ್ಯಕ್ಷೆ ಸುಫೈಜಾ ಅಬೂಬಕರ್, ಜಿಲ್ಲಾ ಕೈಗಾರಿಕಾ ಕೇಂದ್ರದ ಪ್ರಧಾನ ವ್ಯವಸ್ಥಾಪಕ ಸಜಿತ್ ಕುಮಾರ್, ಟ್ರಾನ್ಸ್ಗ್ರಿಡ್ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಕೃಷ್ಣೇಂದು, ಕಾರ್ಯಪಾಲಕ ಅಭಿಯಂತರಾದ ಕೆ.ನಾಗರಾಜ ಭಟ್, ಕೆ.ಲತಾ, ಆಶಾ.ಎಂ, ಎಂ.ಭಾಸ್ಕರನ್ ಮೊದಲಾದವರು ಉಪಸ್ಥಿತರಿದ್ದರು. ಕೆಎಸ್ ಇಬಿ ಕಾರ್ಮಿಕರ ಸಂಘದ ರಾಜ್ಯ ಉಪಾಧ್ಯಕ್ಷ ವಿ.ಜನಾರ್ದನನ್ ಸ್ವಾಗತಿಸಿದರು. ಕಾರ್ಮಿಕರ ಸಂಘದ ವಿಭಾಗೀಯ ಕಾರ್ಯದರ್ಶಿ ಎ.ಜಯಕೃಷ್ಣನ್ ವಂದಿಸಿದರು.