ಮುಳ್ಳೇರಿಯ :ಮುಳ್ಳೇರಿಯ ಸನಿಹ ಪೂವಡ್ಕದಲ್ಲಿ ಕಾಡುಹಂದಿ ಏಕಾಏಕಿ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಬೈಕ್ ಸವಾರ, ಕಾಸರಗೋಡು ಪೆರುಂಬಳ ಚೋಲಿಯೋಡ್ ನಿವಾಸಿ ಅಬ್ದುಲ್ ಖಾದರ್ ಗಾಯಗೊಂಡಿದ್ದಾರೆ. ಗಾಯಾಳುವನ್ನು ಚೆಂಗಳದ ಸಹಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪೂವಡ್ಕದಲ್ಲಿ ಹೋಟೆಲ್ ಕಾರ್ಮಿಕರಾಗಿರುವ ಅಬ್ದುಲ್ ಖಾದರ್ ಅವರು ಪುತ್ರನೊಂದಿಗೆ ರಾತ್ರಿ ಮನೆಗೆ ವಾಪಸಾಗುವ ಮಧ್ಯೆ ಕೋಟೂರು ಅಕ್ಕರ ಫೌಂಡೇಶನ್ ಬಸ್ನಿಲ್ದಾಣ ತಲಪುತ್ತಿದ್ದಂತೆ ದೊಡ್ಡಗಾತ್ರದ ಹಂದಿ ಏಕಾಏಕಿ ರಸ್ತೆಗೆ ನುಗ್ಗಿದೆ. ಈ ಸಂದರ್ಭ ಬೈಕ್ ಮಗುಚಿಬಿದ್ದಿದ್ದು, ಅಬ್ದುಲ್ಖಾದರ್ ಅವರ ಮೇಲೆ ಹಂದಿ ದಾಳಿ ನಡೆಸಿದೆ. ಈ ಸಂದರ್ಭ ಬೊಬ್ಬಿಡುತ್ತಿದ್ದಂತೆ ಹಂದಿ ಕಾಡಿನೊಳಗೆ ಪರಾರಿಯಾಗಿದೆ. ಅಬ್ದುಲ್ ಖಾದರ್ ಅವರ ಕಾಲಿಗೆ ಗಂಭೀರ ಗಾಯಗಳುಂಟಾಗಿದೆ.