ಕಾಸರಗೋಡು: ಇತಿಹಾಸಪ್ರಸಿದ್ಧ ಅನಂತಪುರ ಶ್ರೀ ಅನಂತಪದ್ಮನಾಭ ಸ್ವಾಮಿ ದೇವಸ್ಥಾನ ಎದುರಿನ ಗುಡ್ಡದಿಂದ ವ್ಯಾಪಕ ಲ್ಯಾಟರೈಟ್ ಮಣ್ಣು ಸಾಗಾಟ ಹಾಗೂ ಪೈವಳಿಕೆ ಪಂಚಾಯಿತಿಯ ಬಾಯಾರು ಸನಿಹದ ಪಾದೆಕಲ್ಲಿನಲ್ಲಿ ನಡೆಯುತ್ತಿರುವ ಕೆಂಪುಕಲ್ಲು ಕ್ವಾರಿಗಳ ಚಟುವಟಿಕೆ ನಿಯತ್ರಿಸುವಂತೆ ಆರ್ಟಿಐ ಕಾರ್ಯಕರ್ತ ಕೇಶವ ನಾಯಕ್ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದ್ದಾರೆ.
ಮನೋಹರ ಪ್ರವಾಸಿ ತಾಣ ಹಾಗೂ ಇತಿಹಾಸ ಪ್ರಸಿದ್ಧ ಸರೋವರ ದೇಗುಲ ಒಳಗೊಂಡ ಅನಂತಪುರ ಪ್ರದೇಶವನ್ನು ಕೈಗಾರಿಕಾ ಪ್ರದೇಶವಾಗಿ ಘೋಷಿಸಿರುವ ಹಿನ್ನೆಲೆಯಲ್ಲಿ ಇಲ್ಲಿನ ಒಂದು ಪಾಶ್ರ್ವದಲ್ಲಿ ಕೈಗಾರಿಕೆಗಳು ತಲೆಯೆತ್ತಿದ್ದರೆ, ದೇವಸ್ಥಾನದ ಎದುರುಭಾಗದ ಸುಂದರ ಬೆಟ್ಟದಿಂದ ತಮಿಳ್ನಾಡು, ಕರ್ನಾಟಕ, ಆಂಧ್ರ ಪ್ರದೇಶದ ಸಿಮೆಂಟ್ ಕಂಪೆನಿಗಳಿಗೆ ವ್ಯಾಪಕವಾಗಿ ಲ್ಯಾಟರೈಟ್ ಮಣ್ಣು ಅನಧಿಕೃತವಾಗಿ ಸಾಗಿಸಲಾಗುತ್ತಿದೆ. ಮಣ್ಣು ಸಾಗಾಟದ ಹಿಂದೆ ಬಲು ದೊಡ್ಡ ಮಾಫಿಯಾ ಕೈಜೋಡಿಸಿದ್ದು, ಇಲ್ಲಿನ ಪ್ರಕೃತಿಯ ಸೊಬಗು ಸಂಪೂರ್ಣ ನಾಶವಾಗಿರುವುದಲ್ಲದೆ, ಅನಂತಪುರದ ಆಸುಪಾಸಿನ ಜನತೆ ಭವಿಷ್ಯದಲ್ಲಿ ಬರಗಾಲ ಎದುರಿಸಬೇಕಾದ ಸ್ಥಿತಿ ನಿರ್ಮಾಣವಾಗಲಿದೆ. ಅನಧಿಕೃತ ಮಣ್ಣು ಸಾಗಾಟದ ಬಗ್ಗೆ ಜಿಲ್ಲಾಧಿಕಾರಿ ಸಏರಿದಂತೆ ವಿವಿಧ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಪ್ರಯೋಜನ ಉಂಟಾಗಿಲ್ಲ. ಇನ್ನು ದ.ಕ ಜಿಲ್ಲೆಗೆ ಹೊಂದಿಕೊಮಡಿರುವ ಬಾಯಾರು ಸನಿಹದ ಪಾದೆಕಲ್ಲಿನಿಂದ ವ್ಯಾಪಕವಾಗಿ ಕೆಂಪುಕಲ್ಲು ಕರ್ನಾಟಕಕ್ಕೆ ರವಾನೆಯಾಗುತ್ತಿದೆ. ಇದರಿಂದ ಪ್ರಾಕೃತಿಕ ವಿಕೋಪಕ್ಕೆ ಕಾರಣವಾಗಲಿದ್ದು, ಇನ್ನೊಂದು ವಯನಾಡು ದುರಂತಕ್ಕೆ ಬಾಯಾರು ಪ್ರದೇಶ ಸಾಕ್ಷಿಯಾಗಲಿರುವುದರಿಂದ ಅಧಿಕಾರಿಗಳು ಎಚ್ಚೆತ್ತು ಎರಡೂ ಪ್ರದೇಶಗಳಲ್ಲಿ ನಡೆಯುತ್ತಿರುವ ಪ್ರಕೃತಿಯ ಶೋಷಣೆಯನ್ನು ತಡೆಹಿಡಿಯುವಂತೆ ಕೇಶವ ನಾಯಕ್ ಆಗ್ರಹಿಸಿದ್ದಾರೆ.