ಕಾಸರಗೋಡು: ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಜಿಲ್ಲೆಯೊಳಗೆ ಲಭ್ಯವಿರುವ ಸರ್ಕಾರಿ ಹಾಗೂ ಖಾಸಗಿ ಜಮೀನುಗಳನ್ನು ಬಳಸಿಕೊಳ್ಳುವ ನಿಟ್ಟಿನಲ್ಲಿ ಪ್ರತಿನಿಧಿಗಳೊಂದಿಗೆ ಸಮಾಲೋಚಿಸಿ ಮಾಸ್ಟರ್ ಪ್ಲಾನ್ ಸಿದ್ಧಪಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ತಿಳಿಸಿದರು.
ಜಿಲ್ಲಾಧಿಕಾರಿ ನೇತೃತ್ವದಲ್ಲಿ 'ನಮ್ಮ ಕಾಸರಗೋಡು'ಯೋಜನೆಯನ್ವಯ ಜಿಲ್ಲಾ ಪ್ರವಾಸೋದ್ಯಮ ಪ್ರಮೋಷನ್ ಕೌನ್ಸಿಲ್ ಹಾಗೂ ಜಿಲ್ಲಾ ಮಾಹಿತಿ ಕಛೇರಿ ವತಿಯಿಂದ ಕಾಸರಗೋಡು ನಗರದ ಟವರ್ ಹಾಲ್ನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಆಯೋಜಿಸಲಾಗಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಅಕ್ಟೋಬರ್ 2 ರಿಂದ ಮಾರ್ಚ್ 30 ರವರೆಗೆ ಸಾರ್ವಜನಿಕ ಸ್ವಚ್ಛತಾ ಅಭಿಯಾನದ ಅಂಗವಾಗಿ ಕಾಸರಗೋಡನ್ನು ಸುಲ್ತಾನ್ ಬತ್ತೇರಿ ಮಾದರಿಯಲ್ಲಿ ಸ್ವಚ್ಛ ನಗರವನ್ನಾಗಿ ಮಾಡುವ ಕಾರ್ಯವನ್ನು ಕೈಗೊಳ್ಳಲಾಗುವುದು. ಈಗಾಗಲೇ ಹೊಸ ಪ್ರವಾಸೋದ್ಯಮ ತಾಣಗಳನ್ನು ಕಂಡುಹಿಡಿಯಲಾಗಿದೆ. ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ನಲ್ಲಿ ಪ್ರವಾಸೋದ್ಯಮ ಸಕ್ರ್ಯೂಟ್ ಯೋಜನೆಯನ್ನು ಅಭಿವೃದ್ಧಿಗೆ ಬಳಸಲಾಗುವುದು ಎಂದು ಹೇಳಿದರು.
ಸಮಸ್ಯೆಗಳ ತೆರೆದಿಟ್ಟ ಪತ್ರಕರ್ತರು:
ಕಾಸರಗೋಡಿಗೆ ಅಂಟಿಕೊಂಡಿರುವ ಹಿಂದುಳಿದಿರುವ ಜಿಲ್ಲೆ ಎಂಬ ಹಣೆಪಟ್ಟಿಯನ್ನು ಕಳಚಬೇಕಾಗಿದೆ. ಇದಕ್ಕಾಗಿ ಸಮಗ್ರ ಯೋಜನೆ ತಯಾರಿಯೊಂದಿಗೆ ಕಟ್ಟುನಿಟ್ಟಾಗಿ ಜಾರಿಗೊಳಿಸಲು ಜಿಲ್ಲಾಡಳಿತ, ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಒಟ್ಟಾಗಿ ಶ್ರಮಿಸಬೇಕಾದ ಅಗತ್ಯವಿದೆ ಎಂಬುದಾಗಿ ಪತ್ರಕರ್ತರು ಸೂಚಿಸಿದರು. ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶಗಳಿದ್ದರೂ, ಸಮರ್ಪಕ ಯೋಜನೆಯಿಲ್ಲದಿರುವುದರಿಂದ ಇದು ವಿಫಲವಾಗುತ್ತಿದೆ. ಜಿಲ್ಲೆಯಲ್ಲಿ ಸಾರಿಗೆ ವ್ಯವಸ್ಥೆಯಲ್ಲಿ ಸುಧಾರಣೆ, ಮಾಲಿನ್ಯ ವೈಜ್ಞಾನಿಕ ರೀತಿಯಲ್ಲಿ ಸ ಂಸ್ಕರಿಸುವುದರ ಜತೆಗೆ ಶುಚಿತ್ವಕ್ಕೆ ಆದ್ಯತೆ, ಸರ್ಕಾರಿ ಕಚೇರಿಗಳಲ್ಲಿ ಸಿಬ್ಬಂದಿ ಕೊರತೆ ನೀಗಿಸುವಿಕೆ, ಜಿಲ್ಲೆಗೆ ನಿಯೋಜಿತರಾಗುವ ಸಿಬ್ಬಂದಿ ಒಂದೆರಡು ತಿಂಗಳಲ್ಲಿ ವರ್ಗಾವಣೆ ಪಡೆದು ತೆರಳುವ ಕ್ರಮಕ್ಕೆ ತಡೆ ಸೇರಿದಂತೆ ಹಲವಾರು ಸುಧಾರಣ ಕ್ರಮಗಳ ಬಗ್ಗೆ ಪತ್ರಕರ್ತರು ಸಲಹೆ ನೀಡಿದರು. ಜಿಲ್ಲೆಯಲ್ಲಿ ಪರಿಸರ ಸಂರಕ್ಷಣೆಯೊಂದಿಗೆ ಅಭಿವೃದ್ಧಿ ಕಾರ್ಯಗಳು ನಡೆದರೆ ಸಾಕು. ವ್ಯಾಪಕ ಗಣಿಗಾರಿಕೆ, ಲ್ಯಾಟರೈಟ್ ಮಣ್ಣು ಸಾಗಣಿಕೆಯಿಂದ ವ್ಯಾಪಕ ಪರಿಸರ ನಾಶಕ್ಕೆ ಕಾರಣವಾಗುತ್ತಿದ್ದು, ಇದರ ನಿಯಂತ್ರಣಕ್ಕೂ ಅಗತ್ಯ ಕ್ರಮ ಕೈಗೊಳ್ಳುವಂತೆ
ಕಾಸರಗೋಡು ಪ್ರೆಸ್ ಕ್ಲಬ್ ಉಪಾಧ್ಯಕ್ಷ ನಹಾಸ್ ಪಿ ಮುಹಮ್ಮದ್, ಕಾರ್ಯದರ್ಶಿ ಕೆ.ವಿ.ಪದ್ಮೇಶ್, ಜಿಲ್ಲಾ ಕೈಗಾರಿಕಾ ಕೇಂದ್ರದ ಪ್ರಧಾನ ವ್ಯವಸ್ಥಾಪಕ ಕೆ. ಸಜಿತ್ ಕುಮಾರ್ ವಿವಿಧ ಮಾಧ್ಯಮ ಪ್ರತಿನಿಧಿಗಳು ಉಪಸ್ಥಿತರಿದ್ದರು. ಜಿಲ್ಲಾ ಮಾಹಿತಿ ಅಧಿಕಾರಿ ಎಂ. ಮಧುಸೂದನನ್ ಸ್ವಾಗತಿಸಿದರು. ಜಿಲ್ಲಾ ಪ್ರವಾಸೋದ್ಯಮ ಪ್ರಮೋಷನ್ ಕೌನ್ಸಿಲ್ ಕಾರ್ಯದರ್ಶಿ ಲಿಜೋ ಜೋಸೆಫ್ ವಂದಿಸಿದರು. 'ನಮ್ಮ ಕಾಸ್ರೋಡ್'ಯೋಜನೆಯ ಲಾಂಛನವನ್ನು ಪ್ರೆಸ್ ಕ್ಲಬ್ ಕಾರ್ಯದರ್ಶಿ ಕೆ.ವಿ.ಪದ್ಮೇಶ್ ಹಾಗೂ ಉಪಾಧ್ಯಕ್ಷ ನಹಾಸ್ ಪಿ.ಮಹಮ್ಮದ್ ಬಿಡುಗಡೆ ಗೊಳಿಸಿದರು.