ಮಂಜೇಶ್ವರ: ದೇಶೀಯ ಅಧ್ಯಾಪಕ ಪರಿಷತ್ (ಎನ್ ಟಿ ಯು)ಮಂಜೇಶ್ವರ ಉಪಜಿಲ್ಲಾ ವತಿಯಿಂದ ಶಿಕ್ಷಕರ ದಿನಾಚರಣೆಯ ಅಂಗವಾಗಿ ಎನ್ ಟಿ ಯು ವಿನ ಸಕ್ರೀಯ ಕಾರ್ಯಕರ್ತರು, ಎಸ್.ಡಿ.ಎ.ಯು.ಪಿ. ಶಾಲೆ ಸಜಂಕಿಲದ ಮುಖ್ಯ ಶಿಕ್ಷಕರಾಗಿ ನಿವೃತ್ತರಾಗಿರುವ ವಾಸುದೇವ ಭಟ್ ಕೆದುಕೋಡಿ ಅವರನ್ನು ಗೌರವಿಸುವ ಕಾರ್ಯಕ್ರಮ ಅವರ ಸ್ವಗೃಹದಲ್ಲಿ ಜರಗಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಜೇಶ್ವರ ಉಪಜಿಲ್ಲಾ ಅಧ್ಯಕ್ಷೆ ಚಂದ್ರಿಕಾ ಟೀಚರ್ ವಹಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಸನ್ಮಾನಿತರ ಪರಿಚಯವನ್ನು ಎಸ್.ಡಿ.ಎ.ಯು.ಪಿ. ಶಾಲೆ ಸಜಂಕಿಲದ ಮುಖ್ಯಶಿಕ್ಷಕ ಶ್ರೀಧರ್ ಭಟ್ ಮಾಡಿದರು. ನಿವೃತ್ತ ಮುಖ್ಯ ಶಿಕ್ಷಕ ವಿಘ್ನೇಶ್ವರ ಕೆದುಕೋಡಿ, ವೆಂಕಪ್ಪ ಶೆಟ್ಟಿ, ಕೇಶವ ಭಟ್ ಹಾಗೂ ವಿಶ್ವನಾಥ ಭಟ್, ಎನ್.ಟಿ ಯು ರಾಜ್ಯ ಸಮಿತಿ ಸದಸ್ಯ ಅರವಿಂದಾಕ್ಷ ಭಂಡಾರಿ ಶುಭ ಹಾರೈಸಿದರು.ಇದೇ ಸಂದರ್ಭದಲ್ಲಿ ವಾಸುದೇವ ಭಟ್ ಇವರನ್ನು ಶಾಲು ಹೊದಿಸಿ ಹಣ್ಣು ಹಂಪಲು ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಸನ್ಮಾನಿತರು ಮಾತನಾಡಿ ತಮ್ಮ ಅಧ್ಯಾಪನ ವೃತ್ತಿಯ ನೆನಪುಗಳನ್ನು ಹಂಚಿಕೊಂಡರು.ಸನ್ಮಾನಿತರ ಪುತ್ರ ಹಾಗೂ ಅಧ್ಯಾಪಕ ಶ್ರೀರಾಮ ಕೆದುಕೋಡಿ ಅವರು ಸಂಘಟನೆಗೆ ಕೃತಜ್ಞತೆ ಸಲ್ಲಿಸಿದರು. ಎನ್ ಟಿ ಯು ರಾಜ್ಯ ಸಮಿತಿ ಸದಸ್ಯ ಸತೀಶ್ ಶೆಟ್ಟಿ ಒಡ್ಡoಬೆಟ್ಟು ಸ್ವಾಗತಿಸಿ, ನಿರೂಪಿಸಿದರು. ಎನ್ ಟಿ ಯು ಮಂಜೇಶ್ವರ ಉಪಜಿಲ್ಲಾ ಕಾರ್ಯದರ್ಶಿ ದೇವಿ ಪ್ರಸಾದ್ ಉಚ್ಚಿಲ್ ವಂದಿಸಿದರು. ಕಾರ್ಯಕ್ರಮದಲ್ಲಿ ಎನ್ ಟಿ ಯು ವಿನ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.