ಉಪ್ಪಳ : ತುಳುನಾಡಿನ ಭೂಮಿಪುತ್ರರಾದ ಮೊಗೇರ ಜನಾಂಗದ ದೈವಾರಾಧನೆ ಮತ್ತು ಇನ್ನಿತರ ಆಚರಣೆಗಳಲ್ಲಿ ಪರಂಪರಾಗತ ರೀತಿನೀತಿಗಳನ್ನು ಅನುಸರಿಸುವ ಅನಿವಾರ್ಯತೆ ಇದೆಯೆಂದು ಸಂಶೋಧಕ ಸಂಸ್ಕøತಿ ಚಿಂತಕ ವಿಜಯ ವಿಕ್ರಮ್ ರಾಮಕುಂಜ ಹೇಳಿದ್ದಾರೆ.
ಕಾಸರಗೋಡು ಜಿಲ್ಲಾ ಮೊಗೇರ ದೈವಾರಾಧಕರ ಒಕ್ಕೂಟದ ಆಶ್ರಯದಲ್ಲಿ ಉಪ್ಪಳ ಪಚ್ಲಂಪಾರೆ ಬ್ರಹ್ಮಶ್ರೀಮೊಗೇರ ಮಹಾಕಾಳಿ ದೈವಸ್ಥಾನ ಪರಿಸರದಲ್ಲಿ ಜರಗಿದ ಸಮಾಲೋಚನಾ ಸಭೆಯಲ್ಲಿ ವಿಷಯ ಮಂಡನೆ ಮಾಡಿ ಅವರು ಮಾತಾಡಿದರು.
ಮೊಗೇರ ದೈವಾರಾಧನೆಯಲ್ಲಿ ಪ್ರಾದೇಶಿಕ ಭಿನ್ನತೆಯಿದೆ. ಮೂಲ ಸಂಸ್ಕøತಿ ಸ್ಥಿತ್ಯಂತರಗೊಳ್ಳುತ್ತಿದೆ. ಆರಾಧನೆ ಆಚರಣೆಗಳಲ್ಲಿ ಏಕಸೂತ್ರ ವಿಧಿ-ವಿಧಾನಗಳನ್ನು ಅಳವಡಿಸುವ ಅಗತ್ಯವಿದೆ ಎಂದು ಅವರು ಹೇಳಿದರು.
ಒಕ್ಕೂಟದ ಅಧ್ಯಕ್ಷ ರಾಮಪ್ಪ ಮಂಜೇಶ್ವರ ಅಧ್ಯಕ್ಷತೆ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ಬಾಲಕೃಷ್ಣ ಕೇಪುಳು, ಧರ್ಮದರ್ಶಿ ಬಾಬು ಅನ್ನೆಪಲ್ಲಡ್ಕ, ಕಿಟ್ಟ ಕುಂಜತ್ತೂರು ಮಾತನಾಡಿದರು. ಆದರ್ಶ ಪಟ್ಟತ್ತಮೊಗರು ಪ್ರಾರ್ಥಿಸಿ, ಕಾರ್ಯಕ್ರಮ ನಿರೂಪಿಸಿದರು. ಒಕ್ಕೂಟದ ಪ್ರಧಾನ ಸಂಚಾಲಕ ಬಾಬು.ಯು ಪಚ್ಲಂಪಾರೆ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಹಿರಿಯ ದೈವಪಾತ್ರಿಗಳು ಸಂಯುಕ್ತವಾಗಿ ದೀಪಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದರು. ಒಕ್ಕೂಟದ ಸದಸ್ಯರಾದ ಹರಿರಾಮ ಕುಳೂರು, ರವಿಚಂದ್ರ ಕನ್ನಟಿಪಾರೆ, ಸುಧಾಕರ ಬೆಳ್ಳಿಗೆ, ಸಮನ್ವಯಕಾರರಾಗಿ ಭಾಗವಹಿಸಿದರು. ಗೌರವಾಧ್ಯಕ್ಷ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಸಮಾರೋಪ ನುಡಿಗಳನ್ನಾಡಿದರು. ಕೋಶಾಧಿಕಾರಿ ಗೋಪಾಲ ಡಿ.ದರ್ಬೆತ್ತಡ್ಕ ವಂದಿಸಿದರು.ಕಾಸರಗೋಡು ಜಿಲ್ಲೆಯ ವಿವಿಧೆಡೆಗಳಿಂದ ಇನ್ನೂರಕ್ಕೂ ಹೆಚ್ಚುಮಂದಿ ದೈವಾರಾಧಕರು, ಸಮುದಾಯ ಬಾಂಧವರು ಚರ್ಚೆಯಲ್ಲಿ ಭಾಗವಹಿಸಿದ್ದರು.