ಕಾಸರಗೋಡು: ಕನ್ನಡ ಭಾಷೆ ದೀರ್ಘ ಇತಿಹಾಸ ಹೊಂದಿದ್ದು, ಅನೇಕ ವಿದ್ವಾಂಸರ ಬೆಂಬಲ, ಕನ್ನಡ ಭಾಷೆ ಪರವಾಗಿ ಹೊಸ ಪೀಳಿಗೆಯಲ್ಲಿರುವ ಕಾಳಜಿಯಿಂದ ಕಾಸರಗೋಡಿನಲ್ಲಿ ಕನ್ನಡ ಭಾಷೆ ಮತ್ತಷ್ಟು ದೃಢವಾಗಿ ಬೆಳೆಯಲು ಸಾಧ್ಯವಾಗಿರುವುದಾಗಿ ಶಿಕ್ಷಣ ತಜ್ಞ ವಿ. ಬಿ ಕುಳಮರ್ವ ಹೇಳಿದರು.
ಅವರು ಕಾಸರಗೋಡಿನ ಕನ್ನಡ ಭವನ ಗ್ರಂಥಾಲಯದಲ್ಲಿ ಸ್ಪಂದನ ಸಿರಿ ಜಿಲ್ಲಾ ಘಟಕ, ಕನ್ನಡ ಭವನ ಗ್ರಂಥಾಲಯ, ವಿಸ್ಡಮ್ ಇನ್ಸ್ಟಿಟ್ಯೂಟ್ ನೆಟ್ವರ್ಕ್ ಜಂಟಿ ಆಶ್ರಯದಲ್ಲಿ ನಡೆದ ಸ್ಪಂದನ ಸಿರಿ ಕೃಷಿ, ಕನ್ನಡ ಸಾಹಿತ್ಯ ಮತ್ತು ಸಂಸ್ಕøತಿ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಮಾತನಾಡಿದರು. ಕಾಸರಗೋಡಿನಲ್ಲಿ ಕನ್ನಡಿಗರ ಭಾಷಾಪ್ರೇಮ ಬದಲಾಗಿಲ್ಲ. ಕನ್ನಡ ಮಾತೃಭಾಷೆಯ ಕುಟುಂಬ ಕಾಸರಗೋಡಿನಲ್ಲಿ ಇನ್ನೂ ಅನೇಕ ಮಂದಿಯಿದ್ದಾರೆ. ಕನ್ನಡ ಭಾಷೆಯೇ ಇಲ್ಲಿನ ಕನ್ನಡಿಗರ ಶಕ್ತಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಮಾನಸ ಮೈಸೂರು, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎ ಆರ್ ಸುಬ್ಬಯ್ಯಕಟ್ಟೆ, ಕನ್ನಡ ಭವನ ಗ್ರಂಥಾಲಯ ಸ್ಥಾಪಕ ಅಧ್ಯಕ್ಷ ವಾಮನ್ ರಾವ್ ಬೇಕಲ್, ಕನ್ನಡ ಭವನದ ಪ್ರಕಾಶಕಿ ಸಂಧ್ಯಾರಾಣಿ ಟೀಚರ್, ಹಾಸನದ ಸ್ಪಂದನ ಸಿರಿ ಸ್ಥಾಪಕ ಅಧ್ಯಕ್ಷೆ ಜಿ ಎಸ್ ಕಲಾವತಿ ಮಧುಸೂದನ, ಸ್ಪಂದನ ಸಿರಿ ಜಿಲ್ಲಾಧ್ಯಕ್ಷ ವಿರಾಜ್ ಅಡೂರು, ಶಿಕ್ಷಕಿ ಕೆ ಟಿ ಶ್ರೀಮತಿ, ನಿವೃತ್ತ ಪ್ರಾಂಶುಪಾಲ ಶ್ರೀನಾಥ್ ಮೊದಲಾದವರು ಉಪಸ್ಥಿತರಿದ್ದರು. ಈ ಸಂದರ್ಭ ಸಮ್ಮೇಳನದ ಸರ್ವಾಧ್ಯಕ್ಷರಾದ ವಿ ಬಿ ಕುಳಮರ್ವ ಹಾಗೂ ಅವರ ಪತ್ನಿ ಲಲಿತಾಲಕ್ಷ್ಮಿ ಕುಳಮರ್ವ ಅವರನ್ನು ಶಿಕ್ಷಣ ಕ್ಷೇತ್ರದ ಸಾಧನೆಗಾಗಿ ಸನ್ಮಾನಿಸಲಾಯಿತು. ಡಾ.ವಾಣಿಶ್ರೀ ಕಾಸರಗೋಡು ಮತ್ತು ಗುರುರಾಜ್ ಕಾಸರಗೋಡು ಅವರ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಘದ ಸದಸ್ಯರಿಂದ ನೃತ್ಯ ಕಾರ್ಯಕ್ರಮ ನಡೆಯಿತು. ರಮ್ಯಾ ಮೂರ್ನಾಡು ಕೊಡಗು ಸ್ವಾಗತಿಸಿದರು. ಸುಧಾ ತುಮಕೂರು ಮತ್ತು ಪದ್ಮಾವತಿ ವೆಂಕಟೇಶ್ ಹಾಸನ ನಿರೂಪಿಸಿದರು. ಗಿರಿಜಾ ವಂದಿಸಿದರು.