ಕಾಸರಗೋಡು: ಪ್ರಧಾನಮಂತ್ರಿ ಜನ ಸುರಕ್ಷಾ ಯೋಜನೆಗಳನ್ನು (ಪಿಎಂಜೆಜೆಬಿವೈ-ಪಿಎಂಎಸ್ಬಿವೈ) ಜಾರಿಗೊಳಿಸುವ ಮೂಲಕ ಸಂಪೂರ್ಣ ಜನ ಸುರಕ್ಷಾ ವಿಮಾ ಯೋಜನೆಯನ್ನು ಸಾಧಿಸಿದ ಜಿಲ್ಲೆಯಾಗಿ ಕಾಸರಗೋಡನ್ನು ಘೋಷಿಸಲಾಯಿತು. ಕಾಸರಗೋಡಿನ ಕೇರಳ ಬ್ಯಾಂಕ್ ಸಭಾಂಗಣದಲ್ಲಿ ನಡೆದ ಘೋಷಣೆ ಕಾರ್ಯಕ್ರಮವನ್ನು ಸಂಸದ ರಾಜ್ಮೋಹನ್ ಉಣ್ಣಿತ್ತಾನ್ ಉದ್ಘಾಟಿಸಿದರು.
ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ ಜೀವ ಮತ್ತು ಅಪಘಾತ ವಿಮೆ ನೀಡುವಲ್ಲಿ ನಿರ್ಣಾಯಕ ಪಾತ್ರ ವಹಿಸುವ ಪ್ರಧಾನಮಂತ್ರಿ ಜನಸುರಕ್ಷಾ ವಿಮಾ ಯೋಜನೆಯಲ್ಲಿ ಕಾಸರಗೋಡು ಜಿಲ್ಲೆ ಸಂಪೂರ್ಣತೆಯನ್ನು ಸಾಧಿಸಿದೆ. ಜಿಲ್ಲಾ ಸ್ಥಳೀಯಾಡಳಿತ ಸಂಸ್ಥೆಗಳ ಅಧ್ಯಕ್ಷರು, ಕಾರ್ಯದರ್ಶಿಗಳು, ಕುಟುಂಬಶ್ರೀ ವ್ಯವಸ್ಥೆ, ಬ್ಯಾಂಕ್ ಅಧಿಕಾರಿಗಳ ಸಾಮೂಹಿಕ ಪ್ರಯತ್ನದ ಫಲವಾಗಿ ಈ ಸಾಧನೆ ಮಾಡಲು ಸಾಧ್ಯವಾಗಿದೆ ಎಂದು ರಾಜ್ಮೋಹನ್ ಉಣ್ಣಿತ್ತಾನ್ ತಿಳಿಸಿದರು.
ಜನ ಸುರಕ್ಷಾ ಯೋಜನೆಯು 2021 ರ ಸ್ವಾತಂತ್ರ್ಯ ದಿನದಂದು ಕೇಂದ್ರ ಸರ್ಕಾರವು ಘೋಷಿಸಿದ ಯೋಜನೆ ಇದಾಗಿದ್ದು, ಇದು ಸಮಾಜದ ಕೆಳಭಾಗದಲ್ಲಿರುವ ಜನರಿಗೆ ಬೆಂಬಲದ ಪ್ರಮುಖ ಮೂಲವಾಗಿದೆ. ಆ ಯೋಜನೆಗಳು ಕಾಸರಗೋಡು ಜಿಲ್ಲೆಯ ಎಲ್ಲ ಮನೆಗಳಿಗೂ ತಲುಪಿಸುವ ಗುರಿಯಿರಿಸಲಾಗಿದೆ.
ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್ ಅಧ್ಯಕ್ಷತೆ ವಹಿಸಿದ್ದರು. ಆರ್ಬಿಐ ಉಪ ಪ್ರಧಾನ ವ್ಯವಸ್ಥಾಪಕ ಕೆ.ಬಿ.ಶ್ರೀಕುಮಾರ್, ಎಸ್ಎಲ್ಬಿಸಿ ಸಂಚಾಲಕ ಕೆ.ಎಸ್.ಪ್ರದೀಪ್, ಲೀಡ್ ಬ್ಯಾಂಕ್ ಜನರಲ್ ಮ್ಯಾನೇಜರ್ ಭಾಸ್ಕರ್ ಚಕ್ರವರ್ತಿ, ಲೀಡ್ ಬ್ಯಾಂಕ್ ಮ್ಯಾನೇಜರ್ ಎಸ್. ತಿಪೇಶ್, ಕೆನರಾ ಬ್ಯಾಂಕ್ ಜನರಲ್ ಮ್ಯಾನೇಜರ್ ಅನಿಲ್ ಕುಮಾರ್ ನಾಯರ್ ಹಾಗೂ ವಿವಿಧ ಗ್ರಾಮ ಪಂಚಾಯಿತಿ ಅಧ್ಯಕ್ಷರು ಉಪಸ್ಥಿತರಿದ್ದರು.