ಕಾಸರಗೋಡು: ಕೆಂಪುಕಲ್ಲು ಕ್ವಾರಿ ಮಾಲಿಕರ ಕ್ಷೇಮಾಭಿವೃದ್ಧಿ ಸಂಘ ವಿವಿಧ ಬೇಡಿಕೆ ಮುಮದಿರಿಸಿ ವಿದ್ಯಾನಗರ ಜಿಲ್ಲಾಧಿಕಾರಿಕಚೇರಿ ಎದುರು ನಡೆಸಿಕೊಂಡು ಬರುತ್ತಿರುವ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರನೇ ದಿನಕ್ಕೆ ಕಾಲಿರಿಸಿದೆ.
ಕೆಂಪುಕಲ್ಲು ಕ್ವಾರಿ ಮಾಲಿಕರ ವಿರುದ್ಧ ಅಧಿಕಾರಿಗಳು ನಡೆಸುತ್ತಿರುವ ದೌರ್ಜನ್ಯ ಕೊನೆಗೊಳಿಸುವಂತೆ ಒತ್ತಾಯಿಸಿ ಸೋಮವಾರದಿಂದ ಕ್ವಾರಿ ಕೆಲಸ ಸ್ಥಗಿತಗೊಳಿಸಲಾಗಿದ್ದು, ಗುರುವಾರದಿಂದ ಕ್ವಾರಿಮಾಲಿಕರ ಸಂಘದ ಪದಾಧಿಕಾರಿಗಳಾದ ಸುಧಾಕರ ಪೂಜಾರಿ, ಮೊಯ್ದು ಕುಂಬಳೆ, ಚಂದ್ರನ್ ಅವರು ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ಜಿಲ್ಲಧಿಕಾರಿ ಕಚೇರಿ ಹೊಂದಿರುವ ವಿದ್ಯಾನಗರದಲ್ಲಿ ಸರಣಿಯಾಗಿ ಇಪ್ಪತ್ತನಾಲ್ಕು ತಾಸುಗಳ ಉಪವಾಸ ನಡೆಸುತ್ತಿದ್ದಾರೆ
ಜಿಲ್ಲೆಯಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಕಾರ್ಮಿಕರು ನೇರವಾಗಿ ಜೀವನ ನಿರ್ವಹಿಸುತ್ತಿರುವ ಕೆಂಪುಕಲ್ಲು ಕ್ವಾರಿ ವಲಯಕ್ಕೆ ನ್ಯಾಯಸಮ್ಮತ ಪರವಾನಗಿ ನೀಡುವುದರ ಬದಲು, ಒಂದು ವಿಭಾಗ ಅಧಿಕಾರಿ ವರ್ಗ ತಮಗೆ ತೋಚಿದಂತೆ ಕಾನೂನು ಜಾರಿ ಮಾಡುವ ಮೂಲಕ ಈ ವಲಯವನ್ನು ದಮನಿಸಲು ಯತ್ನಿಸುತ್ತಿದೆ. ಕೆಂಪುಕಲ್ಲು ಕ್ವಾರಿ ಮಾಲಿಕರಿಗೆ ನಿರಂತರ ಕಿರುಕುಳ ನೀಡಲಾಗುತ್ತಿದೆ.
ಪರವಾನಗಿ ಇಲ್ಲದೆ ಕಲ್ಲುಸಾಗಾಟ ನಡೆಸಿದಲ್ಲಿ ವಶಪಡಿಸುವ ವಾಹನಗಳಿಗೆ ತಕ್ಷಣ ದಂಡ ವಿಧಿಸಲಾಗುತ್ತದೆ. ಜತೆಗೆ ವಾಹನಗಳನ್ನು ಬಿಡುಗಡೆ ಮಾಡಲು ಕಾನೂನು ಇದ್ದರೂ ತಿಂಗಳುಗಟ್ಟಲೆ ವಾಹನಗಳನ್ನು ಹಿಡಿದಿಟ್ಟುಕೊಳ್ಳುವ ಪರಿಸ್ಥಿತಿ ಇದೆ. ಈ ರೀತಿಯ ವರ್ತನೆ ಕೊನೆಗಾಣಿಸುವ ವರೆಗೆ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಮುಂದುವರಿಯಲಿರುವುದಾಗಿ ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ.