ಪಾಲಕ್ಕಾಡ್: ಓಣಂ ಹಬ್ಬದ ಅಂಗವಾಗಿ ಆಹಾರ ಸೇವಿಸುವ ಸ್ಪರ್ಧೆಯ ವೇಳೆ ಇಡ್ಲಿ ಗಂಟಲಿಗೆ ಸಿಲುಕಿ ಮಧ್ಯವಯಸ್ಕರೊಬ್ಬರು ಮೃತಪಟ್ಟಿದ್ದಾರೆ. ಕಂಚಿಕೋಡು ಮೂಲದ ಬಿ ಸುರೇಶ್ (50) ಮೃತರು. ಓಣಂ ನಿಮಿತ್ತ ಏರ್ಪಡಿಸಲಾಗಿದ್ದ ಇಡ್ಲಿ ಉಣಿಸುವ ಸ್ಪರ್ಧೆಯಲ್ಲಿ ಈ ಘಟನೆ ನಡೆದಿದೆ.
ಹೆಚ್ಚು ಇಡ್ಲಿಗಳನ್ನು ಸೇವಿಸಲು ಸ್ಪರ್ಧಾತ್ಮಕವಾಗಿ ಪ್ರಯತ್ನಿಸಿದಾಗ, ಆಹಾರವು ಗಂಟಲಿಗೆ ಸಿಲುಕಿ ಸಾವು ಸಂಭವಿಸಿದೆ. ಶನಿವಾರ ಮಧ್ಯಾಹ್ನ ಈ ಘಟನೆ ನಡೆದಿದೆ.
ಕಂಚಿಕೋಡು ಭಾಗದ ಯುವ ಸಮೂಹದಿಂದ ಇಡ್ಲಿ ಸೇವಿಸುವ ಸ್ಪರ್ಧೆ ಏರ್ಪಡಿಸಲಾಗಿತ್ತು. ಎರಡು ಹಂತದ ಸ್ಪರ್ಧೆ ಮುಗಿದು ಮೂರನೇ ಹಂತದ ಸ್ಪರ್ಧೆ ನಡೆಯುತ್ತಿರುವಾಗ ಈ ಘಟನೆ ನಡೆದಿದೆ. ಇಡ್ಲಿ ಸೇವಿಸುವಾಗ ಸುರೇಶ್ ಗೆ ಉಸಿರಾಟದ ಸಮಸ್ಯೆ ಮೊದಲು ಕಂಡುಬಂತು. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅವರು ಮೃತಪಟ್ಟಿದ್ದರು.