ಮುಳ್ಳೇರಿಯ: ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ 1878 ನೇ ಮದ್ಯವರ್ಜನ ಶಿಬಿರವು ಮುಳ್ಳೇರಿಯ ಗಣೇಶ ಕಲಾ ಮಂದಿರದಲ್ಲಿ ಆರಂಭಗೊಂಡಿತು. ಆದೂರು ಪೋಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಅನುರೂಪ್ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಮದ್ಯ ವ್ಯಸನಿಗಳಿಗೆ ವ್ಯಸನ ಮುಕ್ತ ಹೊಸ ಜೀವನವನ್ನು ನೀಡಲು ಧರ್ಮಸ್ಥಳದ ಮದ್ಯವರ್ಜನ ಶಿಬಿರವು ದಾರಿದೀಪವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ದ ಕ 2 ಜಿಲ್ಲಾ ನಿರ್ದೇಶಕ ಪ್ರವೀಣ್ ಕುಮಾರ್ ಅವರು ಕಾಸರಗೋಡು ಜಿಲ್ಲೆಯಲ್ಲಿ 20 ಮದ್ಯ ವರ್ಜನ ಶಿಬಿರ ನೀಡಿದ್ದು ತೊಂಭತ್ತು ಶೇ. ಉತ್ತಮ ಫಲಿತಾಂಶವಿದೆ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯು ಹಲವು ಬಡ ಕುಟುಂಬದ ಕಣ್ಣೀರು ಒರೆಸುವ ಕೆಲಸ ಮಾಡುತ್ತಿದೆ ವ್ಯಸನ ಮುಕ್ತ ಸಮಾಜ ನಿರ್ಮಾಣವೇ ಪೂಜ್ಯರ ಆಶಯ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆಯ ಕಾಸರಗೋಡು ತಾಲೂಕು ಅಧ್ಯಕ್ಷ ಅಖಿಲೇಶ್ ನಗುಮುಗಂ ವಹಿಸಿ, ಶಿಬಿರವು ವ್ಯವಸ್ಥಾಪನ ಸಮಿತಿ ಸದಸ್ಯರು ನವಜೀವನ ಸದಸ್ಯರು ಯೋಜನೆಯ ಕಾರ್ಯಕರ್ತರು ಮತ್ತು ಸ್ವ ಸಹಾಯ ಸಂಘಗಳ ಸದಸ್ಯರ ಶ್ರಮವಿದ್ದು ವ್ಯಸನ ಮುಕ್ತ ಜೀವನಕ್ಕೆ ಅವಕಾಶ ಕಲ್ಪಿಸಿಕೊಟ್ಟಿದ್ದು ಇದನ್ನು ಸದುಪಯೋಗ ಪಡಿಸಿಕೊಳ್ಳಿ ಎಂದು ಕರೆ ನೀಡಿದರು
ವ್ಯವಸ್ಥಾಪನ ಸಮಿತಿ ಗೌರವಾಧ್ಯಕ್ಷ ರತನ್ ಕುಮಾರ್ ನಾಯ್ಕ್ , ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಶಿವ ಕೃಷ್ಣ ಭಟ್, ಕಾರಡ್ಕ ಗ್ರಾಮ ಪಂಚಾಯತಿ ಅಧ್ಯಕ್ಷ ನ್ಯಾಯವಾದಿ.ಗೋಪಾಲಕೃಷ್ಣ ಕೆ, ಮುಂಡೋಳು ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ರಘುರಾಮ ಬಲ್ಲಾಳ್, ಗಣೇಶ ಕಲಾ ಮಂದಿರದ ಅಧ್ಯಕ್ಷ ರಂಗನಾಥ ರಾವ್, ವೈದ್ಯ ವಿ.ವಿ. ರಮಣ ಜನಜಾಗೃತಿ ವಲಯಾಧ್ಯಕ್ಷ ಸಂಜೀವ ಶೆಟ್ಟಿ ಮೊಟ್ಟೆಕುಂಜೆ, ಜನ ಜಾಗೃತಿ ವೇದಿಕೆಯ ಕಾಸರಗೋಡು ಜಿಲ್ಲೆಯ ಸ್ಥಾಪಕಾದ್ಯಕ್ಷÀ ಗೋಪಾಲ ಶೆಟ್ಟಿ ಅರಿಬೈಲು ಉಪಸ್ಥಿತರಿದ್ದರು.
ಜನಜಾಗೃತಿ ವೇದಿಕೆಯ ಪ್ರಾದೇಶಿಕ ಯೋಜನಾಧಿಕಾರಿ ಗಣೇಶ್ ಪ್ರಾಸ್ತಾವಿಕ ಮಾತನಾಡಿದರು. ಕಾಸರಗೋಡು ತಾಲೂಕು ಯೋಜನಾಧಿಕಾರಿ ಮುಖೇಶ್ ಸ್ವಾಗತಿಸಿ, ಕೊರಗಪ್ಪ ವಂದಿಸಿದರು. ಮೇಲ್ವಿಚಾರಕ ಸುರೇಶ್ ನಿರೂಪಿಸಿದರು.