ಕಾಸರಗೋಡು: ಉದ್ಯೋಗ ಭರವಸೆ ನೀಡಿ ಹಲವರಿಂದ ಲಕ್ಷಾಂತರ ರೂ. ಪಡೆದು ವಂಚಿಸಿದ ಮಾಜಿ ಡಿವೈಎಫ್ಐ ನೇತಾರೆ, ಬಾಡೂರು ಎಎಲ್ಪಿ ಶಾಲೆಯ ಅಧ್ಯಾಪಕಿಯಾದ ಸಚಿತಾ ರೈ ವಿರುದ್ಧ ಬದಿಯಡ್ಕ ಪೋಲೀಸರಿಗೆ ಮತ್ತೆ ಎರಡು ದೂರುಗಳು ಲಭಿಸಿವೆ. ನಾರಂಪಾಡಿ ಗೋಸಾಡದ ರಕ್ಷಿತಾ, ಉಕ್ಕಿನಡ್ಕ ಕಂಗಿಲದ ಸುಜಾತ ದೂರು ನೀಡಿದ್ದಾರೆ. ರಕ್ಷಿತಾರಿಂದ ಪೋಲೀಸರು ಹೇಳಿಕೆ ದಾಖಲಿಸಿಕೊಂಡಿದ್ದರೂ, ಕೇಸು ದಾಖಲಿಸಿಲ್ಲವೆಂದು ಆರೋಪ ಉಂಟಾಗಿದೆ. ವಂಚನೆಗೆ ಸಂಬಂಧಿಸಿ ಈ ಹಿಂದೆ ದಾಖಲಿಸಿಕೊಂಡ ಕೇಸುಗಳೊಂದಿಗೆ ರಕ್ಷಿತಾರ ದೂರಿನ ಕುರಿತು ತನಿಖೆ ನಡೆಸುವುದಾಗಿ ಪೋಲೀಸ್ ಅಧಿಕಾರಿಗಳು ದೂರುದಾತೆಯೊಂದಿಗೆ ತಿಳಿಸಿದ್ದಾರೆನ್ನಲಾಗಿದೆ.
ದೂರುದಾತೆ ರಕ್ಷಿತಾ ಹಾಗು ಹಣ ಲಪಟಾಯಿಸಿದ ಸಚಿತಾ ಒಂದೇ ತರಗತಿಯಲ್ಲಿ ಕಲಿತವರಾಗಿದ್ದಾರೆ. ಈ ಪರಿಚಯದ ಮೇಲೆ ಹಣ ನೀಡಿರುವುದಾಗಿ ರಕ್ಷಿತಾ ತಿಳಿಸಿದ್ದಾರೆ. ಸಿಪಿಸಿಆರ್ಐಯಲ್ಲಿ ಕ್ಲಾರ್ಕ್ ಕೆಲಸ ದೊರಕಿಸಿಕೊಡುವುದಾಗಿ ತಿಳಿಸಿ 2022 ಡಿಸೆಂಬರ್ ಮೊದಲ ವಾರ ಒಂದು ಲಕ್ಷ ರೂ. ಸಚಿತಾ ರೈ ತನ್ನ ಖಾತೆಗೆ ಪಡೆದುಕೊಂಡಿದ್ದಾಳೆಂದೂ, ಬಾಕಿ 4 ಲಕ್ಷ ರೂ. ಯನ್ನು ಮೂರು ಗಡುಗಳಾಗಿ ಆಕೆಗೆ ನೀಡಲಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಆದರೆ ಉದ್ಯೋಗ ಲಭಿಸದ ಹಿನ್ನೆಲೆಯಲ್ಲಿ ವಿಚಾರಿಸಿದಾಗ ಕರ್ನಾಟಕದಲ್ಲಿ ಕ್ಲಾರ್ಕ್ ಕೆಲಸ ದೊರಕಿಸಿ ಕೊಡುವುದಾಗಿ ತಿಳಿಸಿದ್ದಾಳೆಂದು ರಕ್ಷಿತಾ ಹೇಳಿದ್ದಾರೆ. ಈ ಮಧ್ಯೆ ತನ್ನ ಬದಲಿಗೆ ಸಹೋದರ ಆಕಾಶ್ಗೆ ಉದ್ಯೋಗ ದೊರಕಿಸಬೇಕೆಂದು ತಿಳಿಸಲಾಯಿತು. ಇದಕ್ಕೆ ಒಪ್ಪಿದ ಸಚಿತಾಳಿಂದ ಹಲವು ತಿಂಗಳ ಕಾಲ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಮತ್ತೆ ಪೋನ್ ನಲ್ಲಿ ಸಂಪರ್ಕಿಸಿದಾಗ ಕರ್ನಾಟಕದ ಸಂಸ್ಥೆಯೊಂದರಿಂದ ಇಂಟರ್ವ್ಯೂ ಕಾರ್ಡ್ ಕಳುಹಿಸಲಾಗಿದೆಯೆಂದೂ ಅದರಲ್ಲಿ ಭಾಗವಹಿಸಬಹುದೆಂದೂ ತಿಳಿಸಿದ್ದಳು. ಸಚಿತಾ ತಿಳಿಸಿದಂತೆ ಕೆಲವು ದಿನಗಳೊಳಗೆ ಪೋಸ್ಟ್ ಕಾರ್ಡ್ ಲಭಿಸಿತ್ತು. 2024 ಫೆಬ್ರವರಿ 22 ರಂದು ಹುಬ್ಬಳ್ಳಿಯಲ್ಲಿ ನಡೆಯುವ ಸಂದರ್ಶನದಲ್ಲಿ ಭಾಗವಹಿಸಬೇಕೆಂದು ಕಾರ್ಡ್ನಲ್ಲಿ ತಿಳಿಸಲಾಗಿತ್ತು. ಆದರೆ ಸಂದರ್ಶನ ನಡೆಯುವುದಾಗಿ ತಿಳಿಸಿದ ದಿನದಂದು ಮಧ್ಯಾಹ್ನ ಬಳಿಕವೇ ಇಂಟರ್ವ್ಯೂ ಕಾರ್ಡ್ ಲಭಿಸಿದೆ. ಈ ಕುರಿತು ಅಂಚೆ ಕಚೇರಿಯಲ್ಲಿ ವಿಚಾರಿಸಿದಾಗ ಕಾರ್ಡ್ ಕಳುಹಿಸಿರುವುದು ಹುಬ್ಬಳ್ಳಿಯಿಂದಲ್ಲ. ಕಾಸರಗೋಡಿನಿಂದ ಕಾರ್ಡ್ ಕಳುಹಿಸಲಾಗಿದೆಯೆಂದು ದೂರುದಾತೆಗೆ ತಿಳಿದು ಬಂದಿದೆ. ಮಾತ್ರವಲ್ಲ ಸಂದರ್ಶನ ನಡೆಯುವ ಸಂಸ್ಥೆಯ ಸೀಲ್ ಕೂಡ ಕಾರ್ಡ್ನಲ್ಲಿ ಇದ್ದಿರಲಿಲ್ಲ ಎಂದಿದ್ದಾರೆ.
ಕಂಗಿಲದ ಸುಜಾತ ಸಚಿತಾ ವಿರುದ್ಧ ದೂರು ನೀಡಿದ್ದಾರೆ. ಕಾಸರಗೋಡಿನ ಸರ್ಕಾರಿ ಕಚೇರಿಯಲ್ಲಿ ಉದ್ಯೋಗ ದೊರಕಿಸುವುದಾಗಿ ತಿಳಿಸಿ 50 ಸಾವಿರ ರೂ. ಪಡೆದು ಕೊಂಡಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.