ಬದಿಯಡ್ಕ: ಬದಿಯಡ್ಕ ತಾಲೂಕು ಗೋಕುಲ ಸಮಿತಿ ಶಿಬಿರ ನೀರ್ಚಾಲು ಮಹಾಜನ ವಿದ್ಯಾಸಂಸ್ಥೆಯ ಆವರಣದಲ್ಲಿ ಭಾನುವಾರ ಜರಗಿತು. ಧ್ವಜಾರೋಹಣದೊಂದಿಗೆ ಆರಂಭಗೊಂಡ ಸಭಾ ಕಾರ್ಯಕ್ರಮದಲ್ಲಿ ಯೋಗೀಶ್ ಪೊಡಿಪ್ಪಳ್ಳ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಗಣ್ಯರು ದೀಪಬೆಳಗಿಸಿದರು. ಶಾಲಾ ವ್ಯವಸ್ಥಾಪಕ, ಸಾಮಾಜಿಕ ಧಾರ್ಮಿಕ ಮುಂದಾಳು ಜಯದೇವ ಖಂಡಿಗೆ ಅವರು ಮಾತನಾಡಿ ಬಾಲ್ಯದಲ್ಲಿಯೇ ಮಕ್ಕಳು ಸಂಸ್ಕಾರವಂತರಾಗಿ ಬೆಳೆಯಲು ಪೂರಕವಾದ ವಾತಾವರಣವನ್ನು ಉಂಟುಮಾಡಬೇಕು. ಮಕ್ಕಳಲ್ಲಿ ಶಿಸ್ತು, ದೇಶಪ್ರೇಮ ಮೂಡಿಸುವಲ್ಲಿ ಬಾಲಗೋಕುಲ ತರಗತಿಗಳು ಕಾರಣವಾಗುತ್ತವೆ ಎಂದರು.
ಕು.ದೀಪ್ನಾ ಶುಭಹಾರೈಸಿದರು. ಬಾಲಗೋಕುಲ ಕಾಸರಗೋಡು ಜಿಲ್ಲಾ ಅಧ್ಯಕ್ಷ ಜಯರಾಮ ಶೆಟ್ಟಿ ಮತ್ತು ರೆವೆನ್ಯೂ ಜಿಲ್ಲಾ ಅಧ್ಯಕ್ಷ ನಾರಾಯಣ ಮಾಸ್ತರ್ ಉಪಸ್ಥಿತರಿದ್ದರು.
ಶಿಬಿರಾರ್ಥಿಗಳಿಗೆ ವ್ಯಕ್ತಿತ್ವವಿಕಸನಕ್ಕೆ ಪೂರಕವಾಗಿ ಭಾಷಣ, ನಾಟಕ, ಭಜನೆ, ಹಾಡು, ಸಭಾ ನಿರ್ವಹಣೆ, ಕಥಾವತರಣ, ರಸಪ್ರಶ್ನೆ, ಆದರ್ಶ ಬಾಲಕರ ಕಥೆ, ಗೋಕುಲ ದರ್ಶನ ಮತ್ತು ದೇಶೀಯ ಆಟಗಳ ಬಗ್ಗೆ ತರಬೇತಿ ಹಾಗೂ ತರಗತಿಗಳನ್ನು ನಡೆಸಲಾಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ಬದಿಯಡ್ಕ ತಾಲೂಕು ಸಮಿತಿಯ ಸದಸ್ಯ ಯೋಗೀಶ್ ಪೆÇಡಿಪಳ್ಳ, ನಟರಾಜ ಕಲ್ಲಕಳಂಬಿ, ಸೀತಾರಾಮ ಭಟ್ ಮವ್ವಾರು, ನಯನಾ ಗಿರೀಶ್ ಅಡೂರು, ಲಾವಣ್ಯ ಗಿರೀಶ್ ಅಗಲ್ಪಾಡಿ, ಭಾಸ್ಕರ್ ಬದಿಯಡ್ಕ, ಭುವನೇಶ್ವರಿ ಬದಿಯಡ್ಕ ಹಾಗೂ ಜಿಲ್ಲಾ ಪದಾಧಿಕಾರಿಗಳಾದ ಜಯರಾಮ ಶೆಟ್ಟಿ ಮತ್ತು ದಿನೇಶ್ ಮಾಸ್ತರ್ ಸಹಕರಿಸಿದರು. ರಾಜೇಂದ್ರನ್ ಮವ್ವಾರು ನಿರ್ವಹಿಸಿದರು. ರಾಜೇಶ್ ಕಿಳಿಂಗಾರು ಶಿಬಿರಾಧಿಕಾರಿಯಾಗಿ ಸಹಕರಿಸಿದರು. ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಕೇರಳ ಉತ್ತರ ಪ್ರಾಂತ ಬಾಲಗೋಕುಲ ಕಾರ್ಯದರ್ಶಿ ಸದಾನಂದಜಿ ಸಮಾರೋಪ ಭಾಷಣ ಮಾಡಿದರು. ಸದಾಶಿವ ಮಾಸ್ತರ್ ಬೇಳ ವಂದಿಸಿದರು.