ಮುಂಬೈ: 'ಮಹಾ ವಿಕಾಸ ಆಘಾಡಿ'ಯು (ಎಂವಿಎ) ಸರ್ಕಾರ ರಚಿಸದಂತೆ ತಡೆಯಲು ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರುವ ಯೋಜನೆಯನ್ನು ಕೇಂದ್ರ ಸರ್ಕಾರ ರೂಪಿಸಿದೆ. ಇದಕ್ಕೆ ಅನುಗುಣವಾಗಿಯೇ ಚುನಾವಣಾ ಆಯೋಗವು ಚುನಾವಣಾ ದಿನಾಂಕಗಳನ್ನು ಘೋಷಿಸಿದೆ' ಎಂದು ಶಿವಸೇನಾ (ಉದ್ಧವ್ ಬಣ) ಸಂಸದ ಸಂಜಯ್ ರಾವುತ್ ಭಾನುವಾರ ಗಂಭೀರ ಆರೋಪ ಮಾಡಿದರು.
'ರಾಜ್ಯದ 14ನೇ ವಿಧಾನಸಭೆ ಅವಧಿಯು ನ.26ಕ್ಕೆ ಮುಕ್ತಾಯಗೊಳ್ಳಲಿದೆ. ಮತದಾನವು ನ.20ರಂದು ನಡೆಯಲಿದೆ. ಫಲಿತಾಂಶವು 23ಕ್ಕೆ ಹೊರಬೀಳಲಿದೆ. ಹೊಸ ಸರ್ಕಾರ ರಚಿಸಲು ಎಂವಿಎ ಬಳಿ ಕೇವಲ 48 ಗಂಟೆಗಳು ಇರಲಿವೆ. ಒಂದು ವೇಳೆ ಈ ಅವಧಿಯೊಳಗೆ ಹೊಸ ಸರ್ಕಾರ ರಚಿಸದಿದ್ದರೆ, ರಾಜ್ಯಪಾಲರು ರಾಷ್ಟ್ರಪತಿ ಆಳ್ವಿಕೆ ಹೇರಲು ಶಿಫಾರಸು ಮಾಡುತ್ತಾರೆ' ಎಂದು ರಾವುತ್ ಹೇಳಿದರು.
'ಮಹಾಯುತಿ' ಸರ್ಕಾರವು ಮತ್ತೊಮ್ಮೆ ಅಧಿಕಾರಕ್ಕೆ ಬರುವುದಿಲ್ಲ ಎನ್ನುವ ಸತ್ಯ ಆ ಮೂರೂ ಪಕ್ಷಗಳಿಗೆ ತಿಳಿದಿದೆ. ಚುನಾವಣಾ ಆಯೋಗವು ಬಿಜೆಪಿಯ ವಕ್ತಾರರಂತೆ ವರ್ತಿಸುತ್ತಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೋಲನ್ನು ಒಪ್ಪಿಕೊಂಡಂತೆ ತೋರುತ್ತಿದೆ. ಅದಕ್ಕಾಗಿಯೇ ರಾಷ್ಟ್ರಪತಿ ಆಳ್ವಿಕೆ ಹೇರುವ ತಂತ್ರ ಹೆಣೆದಿದ್ದಾರೆ' ಎಂದರು.
'ಚುನಾವಣಾ ಆಯೋಗವು ಇವಿಎಂಗಳನ್ನು ಬೆಂಬಲಿಸುತ್ತದೆ. ಹರಿಯಾಣ ಚುನಾವಣೆಯಲ್ಲಿ ಇವಿಎಂಗಳನ್ನು ತಿರುಚಲಾಗಿದೆ ಎಂದು ದೂರಿದರೆ, ಆಯೋಗವು ಮೌನವಹಿಸುತ್ತದೆ. ಲೋಕಸಭೆ ಚುನಾವಣೆಯಲ್ಲಿ ಹಣದ ದುರುಪಯೋಗ ಆಗಿದೆ ಎಂದು ದೂರು ನೀಡಿದರೂ ಆಯೋಗವು ಯಾವ ಕ್ರಮವನ್ನೂ ಕೈಗೊಳ್ಳಲಿಲ್ಲ' ಎಂದು ಆಯೋಗದ ಕುರಿತು ತಕರಾರು ವ್ಯಕ್ತಪಡಿಸಿದರು.