HEALTH TIPS

ರಾಜತಾಂತ್ರಿಕರ ಬಳಸಿ ದಾಳಿ: ಟ್ರುಡೊ ಗಂಭೀರ ಆರೋಪ ಅಲ್ಲಗಳೆದ ಭಾರತ

 


ವಾಷಿಂಗ್ಟನ್/ ನವದೆಹಲಿ: ಭಾರತವು ತನ್ನ ರಾಜತಾಂತ್ರಿಕರನ್ನು ಬಳಸಿಕೊಂಡು ಮತ್ತು ಸಂಘಟಿತ ಅಪರಾಧಗಳ ಮೂಲಕ ಕೆನಡಾ ಪ್ರಜೆಗಳಿಗೆ ಅವರ ನೆಲದಲ್ಲೇ ಅಸುರಕ್ಷತೆಯ ಭಾವನೆ ಮೂಡುವಂತೆ ಮಾಡುತ್ತಿದೆ ಎಂದು ಕೆನಡಾ ಪ್ರಧಾನಿ ಜಸ್ಟಿನ್‌ ಟ್ರುಡೊ ಗಂಭೀರ ಆರೋಪ ಮಾಡಿದ್ದಾರೆ.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ಇಂತಹ ಕೃತ್ಯಗಳನ್ನು ನಡೆಸುವ ಮೂಲಕ ಭಾರತ ಬಲುದೊಡ್ಡ ತಪ್ಪು ಮಾಡಿದೆ' ಎಂದು ಟೀಕಿಸಿದರು. ಆದರೆ ಕೆನಡಾ ಪ್ರಧಾನಿಯ ಆರೋಪವನ್ನು ಭಾರತ ಸಾರಾಸಗಟಾಗಿ ತಳ್ಳಿಹಾಕಿದೆ.

ಖಾಲಿಸ್ತಾನಿ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜರ್‌ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತ-ಕೆನಡಾ ನಡುವೆ ರಾಜತಾಂತ್ರಿಕ ಬಿಕ್ಕಟ್ಟು ಏರ್ಪಟ್ಟಿದೆ. ನಿಜ್ಜರ್‌ ಹತ್ಯೆ ಪ್ರಕರಣದಲ್ಲಿ ಭಾರತದ ಹೈಕಮಿಷನರ್‌ ಹಾಗೂ ಇತರ ರಾಜತಾಂತ್ರಿಕರನ್ನು ತನಿಖೆಗೆ ಒಳಪಡಿಸುವುದಾಗಿ ಕೆನಡಾ, ಭಾನುವಾರ ಹೇಳಿತ್ತು. ಇದಕ್ಕೆ ಪ್ರತಿಯಾಗಿ ಭಾರತವು, ಕೆನಡಾದಲ್ಲಿರುವ ತನ್ನ ಹೈಕಮಿಷನರ್‌ ಸಂಜಯ್‌ ಕುಮಾರ್‌ ವರ್ಮಾ ಅವರನ್ನು ವಾಪಸ್‌ ಕರೆಸಿಕೊಂಡಿತ್ತು.

ಕೆನಡಾ ಸರ್ಕಾರವು ಭಾರತದ ಆರು ರಾಜತಾಂತ್ರಿಕ ಅಧಿಕಾರಿಗಳನ್ನು ಗಡೀಪಾರು ಮಾಡಿದರೆ, ಅದಕ್ಕೆ ಪ್ರತಿಯಾಗಿ ಭಾರತ ಕೂಡಾ ಕೆನಡಾದ ಆರು ರಾಜತಾಂತ್ರಿಕರಿಗೆ ಅಕ್ಟೋಬರ್‌ 19ರ ಒಳಗಾಗಿ ದೇಶ ತೊರೆಯುವಂತೆ ಸೂಚಿಸಿತ್ತು.

ಭಾರತದ ಏಜೆಂಟರು ಕೆನಡಾದಲ್ಲಿ 'ಹಿಂಸೆಗೆ ಕುಮ್ಮಕ್ಕು' ನೀಡುತ್ತಿದ್ದಾರೆ ಎಂದು ರಾಯಲ್‌ ಕೆನಡಿಯನ್‌ ಮೌಂಟೆಡ್‌ ಪೊಲೀಸರು (ಆರ್‌ಸಿಎಂಪಿ) ಸೋಮವಾರ ಆರೋಪಿಸಿದ್ದಾರೆ. ಅದರ ಬೆನ್ನಲ್ಲೇ ಸುದ್ದಿಗೋಷ್ಠಿ ನಡೆಸಿದ ಟ್ರುಡೊ ಭಾರತದ ವಿರುದ್ಧ ಸರಣಿ ಆರೋಪಗಳನ್ನು ಮಾಡಿದರು.

'ಭಾರತವು ತನ್ನ ರಾಜತಾಂತ್ರಿಕರನ್ನು ಬಳಸಿಕೊಂಡು ಸಂಘಟಿತ ಅಪರಾಧಗಳ ಮೂಲಕ ಕೆನಡಾ ಪ್ರಜೆಗಳ ಮೇಲೆ ದಾಳಿ ಮಾಡುತ್ತಿದೆ. ಹಿಂಸೆ ಹರಡುವುದಲ್ಲದೆ, ಕೊಲೆ ಕೃತ್ಯಗಳನ್ನೂ ನಡೆಸಿ ಇಲ್ಲಿನ ಜನರಲ್ಲಿ ಅಸುರಕ್ಷತೆಯ ಭಾವನೆ ಮೂಡಿಸಿದೆ. ಇದನ್ನು ಒಪ್ಪಲಾಗದು' ಎಂದು ಟ್ರುಡೊ ಹೇಳಿದ್ದಾರೆ.

'ನಿಜ್ಜರ್‌ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೆರಿಕ ಒಳಗೊಂಡಂತೆ ನಮ್ಮ ಐದು ಮಿತ್ರ ರಾಷ್ಟ್ರಗಳೊಂದಿಗೆ ನಿಕಟವಾಗಿ ಕೆಲಸ ಮಾಡಿದ್ದೇವೆ. ಹತ್ಯೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಅಮೆರಿಕ ಕೂಡಾ ಭಾರತದಿಂದ ಇದೇ ರೀತಿಯ ವರ್ತನೆಯನ್ನು ಎದುರಿಸಬೇಕಾಗಿ ಬಂದಿತ್ತು' ಎಂದಿದ್ದಾರೆ.

ಆದರೆ, ಭಾರತ- ಕೆನಡಾ ನಡುವಣ ಉದ್ಭವಿಸಿರುವ ರಾಜತಾಂತ್ರಿಕ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಅಮೆರಿಕವು ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಆರೋಪ ಅಲ್ಲಗಳೆದ ಭಾರತ: 'ಕೆನಡಾ ಪ್ರಧಾನಿ ಅವರು ಪತ್ರಿಕಾಗೋಷ್ಠಿಯಲ್ಲಿ ಅದೇ ಹಳೆಯ ವಿಷಯಗಳು ಮತ್ತು ಹಳೆಯ ಕಾರಣಗಳನ್ನು ಹೇಳಿದ್ದಾರೆ' ಎಂದು ಭಾರತ ಪ್ರತಿಕ್ರಿಸಿರುವುದಾಗಿ ಮೂಲಗಳು ತಿಳಿಸಿವೆ.

'ಭಾರತ ಕೇಳಿರುವ ಎಲ್ಲ ಪುರಾವೆಗಳನ್ನು ನೀಡಲಾಗಿದೆ ಎಂದು ಕೆನಡಾ ಅಧಿಕಾರಿಗಳು ಹೇಳಿದ್ದಾರೆ. ನವದೆಹಲಿಯಲ್ಲಿರುವ ಕೆನಡಾ ಡೆಪ್ಯುಟಿ ಹೈಕಮಿಷನರ್‌ ಸ್ಟಿವರ್ಟ್‌ ವೀಲರ್ಸ್‌ ಅವರೂ ಮಾಧ್ಯಮಗಳ ಮುಂದೆ ಇದೇ ಹೇಳಿಕೆ ಪುನರಾವರ್ತಿಸಿದ್ದಾರೆ. ಕೆನಡಾ ಇದುವರೆಗೂ ಪುರಾವೆ ಒದಗಿಸಿಲ್ಲ' ಎಂದು ಹೇಳಿವೆ.

'ಬಿಷ್ಣೋಯ್ ಗ್ಯಾಂಗ್ ಜತೆ ನಂಟು'

ಒಟ್ಟಾವಾ (ಪಿಟಿಐ): ಭಾರತ ಸರ್ಕಾರದ ಏಜೆಂಟ್‌ಗಳು ಲಾರೆನ್ಸ್‌ ಬಿಷ್ಣೋಯ್‌ ಗ್ಯಾಂಗ್‌ ಜತೆ ಸೇರಿಕೊಂಡು ಕೆನಡಾದಲ್ಲಿರುವ ದಕ್ಷಿಣ ಏಷ್ಯಾದ ಸಮುದಾಯದವರನ್ನು ತಮ್ಮ ಗುರಿಯಾಗಿಸುತ್ತಿದ್ದಾರೆ ಎಂದು ರಾಯಲ್‌ ಕೆನಡಿಯನ್‌ ಮೌಂಟೆಡ್‌ ಪೊಲೀಸರು (ಆರ್‌ಸಿಎಂಪಿ) ಆರೋಪಿಸಿದ್ದಾರೆ. ಆರ್‌ಸಿಎಂಪಿ ಕಮಿಷನರ್‌ ಮೈಕ್ ಡ್ಯುಹೆಮ್ ಮತ್ತು ಡೆಪ್ಯುಟಿ ಕಮಿಷನರ್‌ ಬ್ರಿಜೆಟ್ ಗಾವಿನ್‌ ಅವರು ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಹೇಳಿಕೆ ಕೊಟ್ಟಿದ್ದಾರೆ. ಭಾರತವು ಕೆನಡಾದಲ್ಲಿರುವ ಸಿಖ್‌ ಸಮುದಾಯವನ್ನು ತನ್ನ ಗುರಿಯಾಗಿಸುತ್ತಿದ್ದೆಯೇ ಎಂಬ ಪ್ರಶ್ನೆಗೆ ಗಾವಿನ್ 'ಭಾರತವು ದಕ್ಷಿಣ ಏಷ್ಯಾ ಸಮುದಾಯವನ್ನು ಅದರಲ್ಲೂ ಮುಖ್ಯವಾಗಿ ಖಾಲಿಸ್ತಾನಿ ಪರ ಹೋರಾಟಗಾರರನ್ನು ಗುರಿಯಾಗಿಸುತ್ತಿದೆ' ಎಂದು ಹೇಳಿದರು. 'ಸಂಘಟಿತ ಅಪರಾಧ ಕೃತ್ಯದಲ್ಲಿ ತೊಡಗಿಸಿಕೊಂಡವರನ್ನು ಭಾರತ ಸರ್ಕಾರದ ಏಜೆಂಟ್‌ಗಳು ಬಳಸಿಕೊಳ್ಳುತ್ತಿರುವುದು ಆರ್‌ಸಿಎಂಪಿ ಗಮನಕ್ಕೆ ಬಂದಿದೆ' ಎಂದಿದ್ದಾರೆ. 'ಬಿಷ್ಣೋಯ್‌ ಗ್ಯಾಂಗ್‌ನವರು ಕೆನಡಾದಲ್ಲಿ ಸಂಘಟಿಕ ಅಪರಾಧ ಚಟುವಟಿಕೆಗಳಲ್ಲಿ ತೊಡಗಿಕೊಂಡಿದೆ. ಆ ಗ್ಯಾಂಗ್‌ನವರು ಭಾರತ ಸರ್ಕಾರದ ಏಜೆಂಟ್‌ಗಳ ಜತೆ ನಂಟು ಹೊಂದಿರುವುದಾಗಿ ನಾವು ನಂಬುತ್ತೇವೆ' ಎಂದು ತಿಳಿಸಿದ್ದಾರೆ.

ನಿರ್ಬಂಧ: ಕೆನಡಾ ಚಿಂತನೆ

ಈಗ ತಲೆದೋರಿರುವ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಭಾರತದ ವಿರುದ್ಧ ನಿರ್ಬಂಧ ಹೇರುವ ಸಾಧ್ಯತೆಯ ಬಗ್ಗೆ ಸುಳಿವು ನೀಡಿರುವ ಕೆನಡಾ ವಿದೇಶಾಂಗ ಸಚಿವೆ ಮೆಲಾನಿ ಜೋಲಿ 'ಎಲ್ಲ ಆಯ್ಕೆಗಳೂ ನಮ್ಮ ಮುಂದಿವೆ' ಎಂದಿದ್ದಾರೆ. 'ಕೆನಡಾ ಪೊಲೀಸರು ಕಲೆಹಾಕಿರುವ ಸಾಕ್ಷ್ಯಗಳ ಆಧಾರದಲ್ಲಿ ಭಾರತದ ರಾಜತಾಂತ್ರಿಕರನ್ನು ಗಡೀಪಾರು ಮಾಡುವ ನಿರ್ಧಾರ ತೆಗೆದುಕೊಳ್ಳಲಾಗಿದೆ' ಎಂದು ಸ್ಪಷ್ಟಪಡಿಸಿದ್ದಾರೆ. 'ನಾವು ಭಾರತದೊಂದಿಗೆ ರಾಜತಾಂತ್ರಿಕ ಸಂಘರ್ಷವನ್ನು ಬಯಸುವುದಿಲ್ಲ. ಪ್ರತಿ ವರ್ಷ ಕೆನಡಾದ ಸಾವಿರಾರು ಮಂದಿ ಭಾರತಕ್ಕೆ ಹೋಗುತ್ತಾರೆ ಎಂಬುದು ನಮಗೆ ತಿಳಿದಿದೆ. ಭಾರತದಿಂದ ಸಾಕಷ್ಟು ಜನರು ಕೆನಡಾಕ್ಕೂ ಬರುವರು. ಎರಡೂ ದೇಶಗಳ ಜನರ ನಡುವೆ ಆಳವಾದ ಸಂಬಂಧವಿದೆ. ನಿಜ್ಜರ್‌ ಹತ್ಯೆ ಪ್ರಕರಣದ ತನಿಖೆಗೆ ಸಹಕರಿಸುವಂತೆ ಭಾರತವನ್ನು ಕೇಳುತ್ತಲೇ ಇರುತ್ತೇವೆ. ಏಕೆಂದರೆ ಈ ಪ್ರಕರಣದ ಸತ್ಯ ಹೊರಬರಬೇಕಿರುವುದು ಎರಡೂ ದೇಶಗಳ ಹಿತಾಸಕ್ತಿಗೆ ಸಂಬಂಧಿಸಿದ ವಿಚಾರ' ಎಂದಿದ್ದಾರೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries